ದೊಡ್ಡಬಳ್ಳಾಪುರ: ನಿನ್ನೆಯಷ್ಟೇ ಸಂಭವಿಸಿದ 3 ಪ್ರತ್ಯೇಕ ಅಪಘಾತಗಳಲ್ಲಿ ಓರ್ವ ಸಾವನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಬೆನ್ನಲ್ಲೆ ಇಂದು (ಜುಲೈ .01) ಸಂಭವಿಸಿದ ಅಪಘಾತದಲ್ಲಿ 5 ಮಂದಿ ಸಾವನಪ್ಪಿರುವ ಘಟನೆ ತಾಲೂಕಿನ ಮಾಕಳಿ ಬಳಿ ಸಂಭವಿಸಿದೆ.
ಹಿಂದೂಪುರ – ಯಲಹಂಕ ನಡುವಣ ರಾಜ್ಯ ಹೆದ್ದಾರಿ ಮಾಕಳಿ ಬಳಿಯ ಮೇಲಿನ ನಾಯಕರಂಡಹಳ್ಳಿ ಬಳಿ ಕಾರು ಪಲ್ಟಿ ಹೊಡೆದು 5 ಮಂದಿ ಸಾವನಪ್ಪಿದ್ದಾರೆ.
ದೊಡ್ಡಬಳ್ಳಾಪುರದ ಕರೇನಹಳ್ಳಿಯವರು ಇನೋವಾ ಕಾರಿನಲ್ಲಿ ಗೌರಿಬಿದನೂರು ಮಾರ್ಗವಾಗಿ ಮಂಚೇನಹಳ್ಳಿ ಬಳಿಯ ಭೀಮೇಶ್ವರ ದೇವಸ್ಥಾನಕ್ಕೆ ತೆರಳುವ ವೇಳೆ ಮೇಲಿನ ನಾಯಕರಂಡಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ದೊಡ್ಡಬಳ್ಳಾಪುರ ನಗರದ ದೇವರಾಜ ನಗರದ ನಿವಾಸಿ ಡಿ.ಎಂ.ಈಶ್ವರಪ್ಪ, ಕರೇನಹಳ್ಳಿ ನಿವಾಸಿ ಪುರುಷೋತ್ತಮ (62 ವರ್ಷ), ಕಾಳಪ್ಪ (69 ವರ್ಷ), ಕಾರಿನ ಚಾಲಕ ನರಸಿಂಹ ಮೂರ್ತಿ (50 ವರ್ಷ) ಎಂದು ಗುರುತಿಸಲಾಗಿತ್ತು.
ಇದೀಗ ಬಂದ ಮಾಹಿತಿ ಅನ್ವಯ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕರೇನಹಳ್ಳಿ ನಿವಾಸಿ ಗೋಪಿನಾಥ್ (56 ವರ್ಷ) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
8 ಜನರು ಇನೋವಾ ಕಾರಿನಲ್ಲಿ ನಗರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೋಗುವಾಗ ಅಪಘಾತ ನಡೆದಿದೆ.
ಕಾರಿನಲ್ಲಿದ್ದ ಇನ್ನೂ ಇಬ್ಬರ ಸ್ಥಿತಿ ಗಂಬೀರವಾಗಿದ್ದು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಪ್ರಯಾಣಿಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆಯಿಂದಾಗಿ ಈ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿಗಳು ದೌಡಾಯಿಸಿದ್ದಾರೆ.