ಹೈದರಾಬಾದ್: ‘ಸೂಪರ್ ಕಾಪ್” (Super cop) ಎಂದು ಪ್ರಖ್ಯಾತರಾಗಿರುವ ಕರ್ನಾಟಕದ ಹುಬ್ಬಳ್ಳಿ ಮೂಲದ ವಿ.ಸಿ. ಸಜ್ಜನರ್ (V.C. Sajjanar) ಅವರನ್ನು ಹೈದರಾಬಾದ್ ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಈ ಕುರಿತಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಆದೇಶಿಸಿದ್ದಾರೆ.
ಒಟ್ಟು 27 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು ತೆಲಂಗಾಣ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿ.ಸಿ. ಸಜ್ಜನರ್ ಅವರನ್ನು ಹೈದರಾಬಾದ್ ಅಂತಹ ದೊಡ್ಡ ನಗರದ ಪೊಲೀಸ್ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
2019 ನವೆಂಬರ್ 29 ರಂದು ಹೈದರಾಬಾದ್ ಹೊರವಲಯದಲ್ಲಿ ಪ್ರಿಯಾಂಕಾ ರೆಡ್ಡಿ ಎನ್ನುವ ಪಶುವೈದ್ಯೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಮಾಡಿ, ಕೊಲೆಗೈದು ಆಕೆಯ ದೇಹ ಸುಟ್ಟು ಹಾಕಿದ್ದರು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು.
ಈ ಪ್ರಕರಣದ ನಾಲ್ವರೂ ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿತ್ತು. ಆಗ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿ ಸಜ್ಜನರ್ ಕಾರ್ಯನಿರ್ವಹಿಸುತ್ತಿದ್ದರು. ಎನ್ಕೌಂಟರ್ ಪ್ರಕರಣದ ನಂತರ ವಿ.ಸಿ. ಸಜ್ಜನರ್ ಅವರನ್ನು ‘ಸೂಪರ್ ಕಾಪ್” ಎಂದು ಕರೆಯಲಾಗುತ್ತದೆ.