ದೊಡ್ಡಬಳ್ಳಾಪುರ: ಒಂಟಿ ಮನೆಗಳು, ಊರುಗಳಿಗೆ ತೆರಳಿದವರ ಮನೆಗಳ ಮೇಲೆ ಕಣ್ಣಿಟ್ಟಿದ್ದ ಕಳ್ಳರು (Thieves), ಈಗ ಸರ್ಕಾರಿ ಕಚೇರಿಗಳ (Government office) ಮೇಲೂ ತಮ್ಮ ದೃಷ್ಟಿ ಹರಿಸಿದ್ದು, ತಾಲೂಕಿನ ತೂಬಗೆರೆ ಉಪತಹಶೀಲ್ದಾರ್ ಕಚೇರಿಯಲ್ಲಿ ತಡರಾತ್ರಿ ಕಳ್ಳತನದ ವಿಫಲ ಪ್ರಯತ್ನ ನಡೆದಿದೆ.
ಇಂದು ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು. ಕಚೇರಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಲು ಯತ್ನಿಸಿರುವ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ. ವರದಿ ಅನ್ವಯ ಯಾವುದೇ ವಸ್ತು ಕಳವು ಆಗಿಲ್ಲ ಎಂಬುದು ತಿಳಿದುಬಂದಿದೆ.
ಬಸ್ ನಿಲ್ದಾಣದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ಕಚೇರಿಯಲ್ಲಿ ಕಳ್ಳತನ ಯತ್ನ ಕಂಡುಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.