ದೊಡ್ಡಬಳ್ಳಾಪುರ: ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮಾಸುವ ಮುನ್ನವೇ ಮತ್ತೆ ಕಳ್ಳತನ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಿನ್ನೆ (ಮಂಗಳವಾರ) ರಾತ್ರಿ ಸಾಸಲು ಹೋಬಳಿಯ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯದ ಬಾಗಿಲಿಗೆ ಅಳವಡಿಸಿದ್ದ ಬೀಗ ಮುರಿದಿರುವ ಕಳ್ಳರು, ದೇವಾಲಯದ ಹುಂಡಿಯ ಬೀಗವನ್ನು ಹೊಡೆದು ನಗದು ಕಾಣಿಕೆ ದೋಚಿದ್ದಾರೆ.
ವಿಷಯ ತಿಳಿದ ಹೊಸಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸತತ 4ನೇ ಬಾರಿ ಕಳವು
ದೊಡ್ಡಬಳ್ಳಾಪುರ ತಾಲ್ಲೂಕಿನ ಸತತ 4ನೇ ಬಾರಿಗೆ ತಾಲೂಕಿನ ಸಾಸಲು ಹೋಬಳಿಯ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮೇನಹಳ್ಳಿ, ಪಚ್ಚಾರಲಹಳ್ಳಿ ಗ್ರಾಮಗಳಿಂದ ಹೊರ ವಲಯದ ಗುಟ್ಟೆಯಲ್ಲಿರುವ ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ.
ಈ ದೇವಾಲಯದಲ್ಲಿ ಶ್ರಾವಣ ಮಾಸ ಸೇರಿದಂತೆ ವಿಶೇಷ ದಿನಗಳಲ್ಲಿ ಪೂಜಾ ಕಾರ್ಯದಲ್ಲಿ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಆದರೆ ಈ ದೇವಾಲಯದಲ್ಲಿ ಪದೇ ಪದೇ ಕಳ್ಳತನ ಪ್ರಕರಣ ನಡೆಯುತ್ತಿದೆ.
ಹಿನ್ನೆಲೆಯಲ್ಲಿ ಆಡಳಿತದ ಅಧಿಕಾರಿಗಳು ದೇವಾಲಯಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಕಳ್ಳರು ಸಿಸಿ ಟಿವಿ ಕ್ಯಾಮೆರಾ ಹಾನಿ ಮಾಡಿದ್ದು, ಒಂದನ್ನು ಕಿತ್ತೊಯ್ದಿದ್ದಾರೆ.