ಬೆಂಗಳೂರು; ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್. ದುಡ್ಡು ಹೊಡೆಯುವುದಕ್ಕೆ ಮಾಡಿರುವ ಸುಲಿಗೆ ಕಾರ್ಯಕ್ರಮ ಇದಾಗಿದೆ ಎಂದು ಕೇಂದ್ರ ಸರಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿ ಖಾತಾವನ್ನು ಬಿ ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರಕಾರ ರೂಪಿಸಿರುವ ಕಾರ್ಯಕ್ರಮದ ಕುರಿತು ಅವರು ಹೇಳಿದ ಮಾತುಗಳಿವು.
ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ನಿಮಗೆ ಖಾತೆ ಮಾಡಿಕೊಡುತ್ತೇವೆ. ಈ ಸರ್ಕಾರದ ಬೋಗಸ್ ಆಮಿಷಕ್ಕೆ ಮರುಳಾಗಬೇಡಿ. ಇದು ನಾನು ಬೆಂಗಳೂರು ಜನತೆಗೆ ನೀಡುತ್ತಿರುವ ಮುಕ್ತ ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು ಎಂದರು.
ಜನತೆ ಆತಂಕಕ್ಕೆ ಒಳಗಾಗಬೇಕಿಲ್ಲ. ಎರಡು ವರ್ಷ ಆದ ಮೇಲೆ ನಮ್ಮ ಮೈತ್ರಿ ಸರ್ಕಾರ ಬರುತ್ತದೆ. ಆಗ ಅತ್ಯಂತ ಸರಳವಾಗಿ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ. ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ. ಈಗಾಗಲೇ ಆಸ್ತಿ ಸಂಪಾದನೆ ಮಾಡಲು ಸಾಲ ಮಾಡಿ ಬಡ್ಡಿ ಕಟ್ಟುತ್ತಿದ್ದೀರಿ. ಈಗ ಮತ್ತೊಮ್ಮೆ ಈ ಎ ಖಾತಾ ಮಾಡಿಸಲು ಲಕ್ಷಾಂತರ ರೂಪಾಯಿ ಸಾಲ ಮಾಡಬೇಡಿ. ಇನ್ನೊಮ್ಮೆ ಸಾಲದ ಸುಳಿಗೆ ಸಿಕ್ಕಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಅವರು ಜನರನ್ನು ಕೋರಿದರು.
ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆ
ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನತೆ ಬಸವಳಿಸಿದ್ದಾರೆ. ಇಂಥ ಹೊತ್ತಿನಲ್ಲಿ ದೀಪಾವಳಿ ಕೊಡುಗೆ ಎಂದು ಪುಟಗಟ್ಟಲೆ ಜಾಹೀರಾತು ಕೊಟ್ಟುಕೊಂಡು ಬಂದ ಈ ಸರ್ಕಾರ ಎ ಖಾತಾ ಎನ್ನುವ ದೋಖಾ ಕಾರ್ಯಕ್ರಮವನ್ನು 6ನೇ ಗ್ಯಾರಂಟಿಯನ್ನ ಜನರಿಗೆ ದೀಪಾವಳಿ ಉಡುಗೊರೆ ಕೊಟ್ಡಿದ್ದೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ದೀಪಾವಳಿ ಕೊಡುಗೆ ಎಂದರೆ ಜನರಿಂದ ಲಕ್ಷ ಲಕ್ಷ ಪೀಕುವುದೇ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬೋಗಸ್ ಕಾರ್ಯಕ್ರಮದ ಬಗ್ಗೆ ಈ ಸರ್ಕಾರ ನಿತ್ಯ ಜಾಹಿರಾತು ನೀಡುತ್ತಿದೆ. 15 ದಿನಗಳಿಂದ ಜಾಹಿರಾತು ಕೊಡುತ್ತಿದೆ. ಇದು ನಾಡಿನ ಜನರಿಗೆ ಟೋಪಿ ಹಾಕುವ ಕೆಲಸ. ಖಾತಾ ಪರಿವರ್ತನೆ ಮಾಡಲಿ, ಬೇಡ ಎಂದವರು ಯಾರು? ಆದರೆ, ಲಕ್ಷ ಲಕ್ಷ ಸುಲಿಗೆ ಯಾಕೆ? ಎಂದು ಅವರು ಪ್ರಶ್ನಿಸಿದರು.
1995ರಿಂದ ಈ ಸಮಸ್ಯೆಯನ್ನ ಬೆಂಗಳೂರು ಜನ ಅನುಭವಿಸುತ್ತಿದ್ದಾರೆ. ಇಂತಹ ಸಮಸ್ಯೆ ಬೆಂಗಳೂರು, ಗ್ರಾಮೀಣ ಪ್ರದೇಶದಲ್ಲಿ ಇದೆ. 1997ರಲ್ಲಿ ಒಂದು ಆದೇಶ ಆಗಿದೆ.
2003ನೇ ಇಸವಿವರೆಗೂ ನಗರಸಭೆ, ಪುರಸಭೆಯಲ್ಲಿ ಯಾವುದೇ ನಿವೇಶನಗಳಿಗೆ ಅಂದಿನ ದೇವೇಗೌಡರ ಸರ್ಕಾರ 60 ನಗರ ಪಾಲಿಕೆ ವಾರ್ಡ್ ಗಳನ್ನು 90 ವಾರ್ಡ್ ಗಳನ್ನಾಗಿ ವಿಂಗಡಿಸಿ ಹೊಸ ಪಟ್ಟಣ ಪಂಚಾಯತಿ, ನಗರ ಸಭೆ ರಚನೆ ಮಾಡಿತ್ತು.
ಬೆಂಗಳೂರು ಹೊರ ವಲಯದಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಹೀಗಾಗಿ ಹೊಸ ನಗರ ಪಾಲಿಕೆ ಮಾಡಲಾಯಿತು. 1997ರಲ್ಲಿ ಅಂದು ಸ್ವೆಯರ್ ಮೀಟರ್ ಗೆ 110 ರೂಪಾಯಿ ನಿಗದಿ ಮಾಡಲಾಗಿತ್ತು. ಫಾರಂ 19 ಮೂಲಕ ಖಾತೆ ವಿತರಣೆ ಮಾಡಲಾಗುತ್ತಿತ್ತು. 30/40 ನಿವೇಶನಕ್ಕೆ ಅಂದು 12,263 ರೂಪಾಯಿ ಆಗುತ್ತಿತ್ತು. ಭೂ ಪರಿವರ್ತನೆಗೆ 1500 ರೂಪಾಯಿ ಕಟ್ಟಿಸಿಕೊಂಡರು ಎಂದು ಕೇಂದ್ರ ಸಚಿವರು.
2007ರಲ್ಲಿ ನಾನು ಸಿಎಂ ಇದ್ದಾಗ ಕೇಂದ್ರ ಸರ್ಕಾರದಿಂದ ಒಂದು ಯೋಜನೆ ಆರಂಭವಾಯಿತು. ಅದರ ಮೂಲಕ 5 ವರ್ಷಗಳಲ್ಲಿ ನಗರಗಳ ಅಭಿವೃದ್ಧಿ ಮಾಡುವ ಯೋಜನೆ ಅದು. ನಾನು ಆಗ ಬೆಂಗಳೂರು, ಮೈಸೂರು ಅಭಿವೃದ್ಧಿಗೆ ಒತ್ತು ನೀಡಿದೆ. ಬೆಂಗಳೂರಿನಲ್ಲಿ 198 ವಾರ್ಡ್ ಮಾಡಿ BBMP ಆಯಿತು. ಅದಕ್ಕೆ 110 ಹಳ್ಳಿಗಳನ್ನು ಸೇರಿಸಿದ್ದೆ. ಬೆಂಗಳೂರು, ಮೈಸೂರು ಅಭಿವೃದ್ಧಿಗೆ 25 ಸಾವಿರ ಕೋಟಿ ಹಣ ಹೊಂದಿಸುವ ಯೋಜನೆ ಅದು. ಬೆಂಗಳೂರು ಅಭಿವೃದ್ಧಿಗೆ ಸಮಗ್ರ ಕಾರ್ಯಕ್ರಮ ರೂಪಿಸಿದ್ದೆ ಎಂದು ಸಚಿವರು ಹೇಳಿದರು.
2007ರ ನನ್ನ ಕಾಲದಲ್ಲಿ ಇಂಥ ನಿವೇಶನಗಳಿಗೆ ಖಾತೆ ಮಾಡಿಕೊಡುವ ನಿರ್ಧಾರ ಮಾಡಿದೆವು. 60 ಮತ್ತು ಅದರ ಒಳಗಿನ ಪ್ರತಿ ಚದರ ಮೀಟರ್ ಗೆ 200 ರೂ., 60ರಿಂದ 120 ಚದರ ಮೀಟರ್ ಗೆ- 400 ರೂ., 120 ಚದರ ಅಡಿ ಮೇಲ್ಪಟ್ಟ 600 ರೂ. ನಿಗದಿ ಮಾಡಿದೆವು. ಆದಾದ ಮೇಲೆ ಕೆಲವರು ಕೋರ್ಟ್ ಗೆ ಹೋಗ್ತಾರೆ. ಕೋರ್ಟ್ ಅಂದು 15 ದಿನಗಳಲ್ಲಿ ಖಾತೆ ಮಾಡಿಕೊಡಿ ಅಂತ ಹೇಳಿತ್ತು. ಅಂದೇ ಜನರಿಂದ ಖಾತೆ ಮಾಡಿಸಿಕೊಡಲು ಸರ್ಕಾರ/ BBMP ಹಣ ಪಡೆದಿದೆ. ಹೀಗಾಗಿ ಮತ್ತೆ ಇವರು ಯಾಕೆ ಹಣ ಪಡೆಯಬೇಕು ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.
ಯಾರಾದರೂ ನಂಬುವ ಹಾಗೆ ಇದೆಯಾ
ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಅದರ ಅಭಿವೃದ್ಧಿ ಕಡೆಗಣಿಸುವಂತೆ ಇಲ್ಲ. ಅನಿಯಂತ್ರಿತ, ಅಸುರಕ್ಷಿತ ಕಟ್ಟಡಗಳಿಂದ ನಾಗರೀಕರಿಗೆ ಸಮಸ್ಯೆ ಸೇರಿ ಹಲವು ತೊಂದರೆಗೆ ದಾರಿ ಆಗಿದೆ ಎಂದು ಇವರು ಖಾತಾ ಪರಿವರ್ತನೆ ಆದೇಶದಲ್ಲಿ ಹೇಳಿದ್ದಾರೆ. ಹಾಗಾದರೆ,ಬಿ ಖಾತಾ ಮನೆಗಳು ಮಳೆಯಲ್ಲಿ ಕುಸಿಯುತ್ತಿವೆಯಾ? ಅದಕ್ಕೆ ಇವರು ಎ ಖಾತಾ ಮಾಡುತ್ತಿದ್ದಾರಾ? ಯಾರಾದರೂ ನಂಬುವ ಹಾಗೆ ಇದೆಯಾ ಇದನ್ನು ಎಂದು ಅವರು ಲೇವಡಿ ಮಾಡಿದರು.
ಇನ್ನು ಎಷ್ಟು ದಿನ ಎಂದು ಜನರಿಂದ ಹಗಲ ದರೋಡೆ ಮಾಡ್ತೀರಾ? ನಿಮಗೆ ಕೆಟ್ಟಕಾಲ ಬಂದಿದೆ. ಜನರ ಪರ ಮಾತನಾಡಿದರೆ ಅಸೂಯೆಗೆ ನಾವು ಮಾತಾಡ್ತೀವಿ ಅಂತಾರೆ. ಬಿ ಖಾತಾ ಎ ಖಾತಾ ಎಲ್ಲೂ ಇಲ್ಲ. ಅದೂ ಸಾಲದು ಅನ್ನುವಂತೆ ಈಗ ಓಸಿ, ಸಿಸಿ ಅಂತ ಮತ್ತೊಂದು ಮಾಡ್ತಾ ಇದ್ದಾರೆ. 70% ಜನರಿಗೆ ಓಸಿ ವಿನಾಯಿತಿಯಿಂದ ಲಾಭ ಅಂತ ಹೇಳ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎಸ್.ಎಲ್. ಭೋಜೇಗೌಡ, ಜವರಾಯಿಗೌಡ, ವಿವೇಕಾನಂದ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಹಾಜರಿದ್ದರು.