ಬೆಂಗಳೂರು; “ಟ್ರಾಫಿಕ್ ಸಮಸ್ಯೆ ನೀಗಿಸಲು ಟನಲ್ ರಸ್ತೆ ಯೋಜನೆ ಅತ್ಯುತ್ತಮ ಆಲೋಚನೆ, ನಾವು ನಿಮ್ಮ ಬೆಂಬಲಿಕ್ಕಿದ್ದೇವೆ, ನೀವು ಮುಂದುವರೆಯಿರಿ”, ಡಿಸಿಎಂ (DCM) “ಡಿ.ಕೆ. ಶಿವಕುಮಾರ್ (D.K. Shivakumar) ಅವರು ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ…”
ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿ, ದೂರದೃಷ್ಟಿ ಯೋಜನೆಗಳಿಗೆ ಸಾರ್ವಜನಿಕರು ಮುಕ್ತ ಕಂಠದಿಂದ ಹೊಗಳಿದ ಪರಿ ಇದು.
ಬೆಂಗಳೂರು ನಡಿಗೆ ಅಂಗವಾಗಿ ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದದ ವೇಳೆ ಹಲವಾರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.
ನಾಗರಿಕರೊಬ್ಬರು, “ಸಾರ್, ನೀವು ಕೈಗೆತ್ತಿಕೊಂಡಿರುವ ಟನಲ್ ರಸ್ತೆ ಯೋಜನೆ ಚೆನ್ನಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ರಸ್ತೆಗಳು ಬೇಕು. ಟನಲ್ ಯೋಜನೆ ಸಾಕಾರಗೊಳಿಸಿ. ಇದೊಂದು ಅತ್ಯುತ್ತಮ ಯೋಜನೆ” ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್ ಅವರು, “ನಾನು ಸಹ ಸಾಕಷ್ಟು ಆಲೋಚನೆ ಮಾಡಿದೆ. ರಸ್ತೆ ಅಗಲೀಕರಣಕ್ಕಾಗಿ ಮನೆಗಳನ್ನು ಒಡೆಯಲು ಆಗುವುದಿಲ್ಲ. ಇದಕ್ಕೆ ದುಪ್ಪಟ್ಟು ಪರಿಹಾರ ನೀಡಬೇಕು. ಅದರ ಬದಲು ಸುರಂಗ ಮಾರ್ಗ ರಸ್ತೆಯೇ ಸರಿ ಎಂದು ಯೋಜನೆಗೆ ಮುಂದಾಗಿದ್ದೇನೆ” ಎಂದರು.
“ನಿಮ್ಮ ಆಲೋಚನೆ ಚೆನ್ನಾಗಿದೆ. ಕಳೆದ 30 ವರ್ಷಗಳಿಂದ ನಗರದಲ್ಲಿ ಹೊಸ ರಸ್ತೆಗಳು ಆಗಿಲ್ಲ. ಮುಂಬೈನಲ್ಲಿ ಟನಲ್ ರಸ್ತೆ ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಸಹ ವಿರೋಧ ಮಾಡುವುದಿಲ್ಲ. ಆದರೆ ಇಲ್ಲಿ ಮಾಡುತ್ತಿದ್ದಾರೆ” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರೊಬ್ಬರು, “ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವುದು ಪುಣ್ಯ ಎಂದು ಹೇಳಬಹುದು. ಏಕೆಂದರೆ ಈ ನಗರದ ಬಗ್ಗೆ ಇವರು ಅಪಾರ ಕಾಳಜಿ ಹೊಂದಿದ್ದಾರೆ. ವಿದೇಶಿಯರು ಬೆಂಗಳೂರಿಗೆ ಬಂದರೆ ಇಲ್ಲಿನ ಸ್ವಚ್ಛತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ಆವರು ಗ್ರಾಮೀಣ ಭಾಗದಿಂದ ಬಂದವರಾದರೂ ಬೆಂಗಳೂರಿನ ಬಗ್ಗೆ ಪ್ರೀತಿ ಹೊಂದಿದ್ದಾರೆ” ಎಂದು ಪ್ರೀತಿಪೂರ್ವಕ ಮಾತುಗಳನ್ನಾಡಿದರು.
ರಸ್ತೆ ವಿನ್ಯಾಸ ಸ್ಪರ್ಧೆ ಏರ್ಪಡಿಸಲು ಸಲಹೆ
ಬೆಂಗಳೂರಿನ ರಸ್ತೆಗಳು ಹೇಗಿರಬೇಕು ಎಂದು ‘ವಿನ್ಯಾಸ ಸ್ಪರ್ಧೆ’ ಏರ್ಪಡಿಸಿದರೆ ಜನರಿಗೆ ಬೇಕಾದಂತಹ ರಸ್ತೆ ಜನರಿಂದಲೇ ದೊರೆಯಲಿದೆ. ಈ ಕಲ್ಪನೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ನೆಹೇಶ್ ಎಂಬುವರು ತಮ್ಮ ಆಲೋಚನೆ ಹಂಚಿಕೊಂಡರು. ಇದನ್ನು ಶ್ಲಾಘಿಸಿದ ಡಿಸಿಎಂ ಅವರು “ಆಲೋಚನೆ ತುಂಬಾ ಚೆನ್ನಾಗಿದೆ. ಇವರ ದೂರವಾಣಿ ಸಂಖ್ಯೆಯನ್ನು ಪಡೆಯಿರಿ. ಇವರ ಬಳಿ ಚರ್ಚೆ ಮಾಡೋಣ” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ
“ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳು. ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕಬ್ಬನ್ ಪಾರ್ಕ್ ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಹವಾಲು ಸ್ವೀಕರಿಸಿ ಮಾತನಾಡಿದರು.
“ಕಬ್ಬನ್ ಉದ್ಯಾನವನದ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಮಿಕ್ಕ ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಉದ್ಯಾನದ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಇವುಗಳ ರಕ್ಷಣೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತೇವೆ” ಎಂದರು.
“ಉದ್ಯಾನದಲ್ಲಿ ಸರ್ಕಾರದ ವತಿಯಿಂದಲೇ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಆಲೋಚನೆ ಮಾಡಲಾಗುವುದು. ನಾನು ನೋಡಿದಂತೆ ಕಬ್ಬನ್ ಪಾರ್ಕ್ ಅನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ನಾನು ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿಯನ್ನ ಕಬ್ಬನ್ ಪಾರ್ಕ್ ತೋರಿಸಲು ಕರೆದುಕೊಂಡು ಬಂದಿದ್ದೆ. ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಇಲ್ಲಿಗೆ ಬಂದು ಸಮಯ ಕಳೆಯುತ್ತಿದ್ದೆವು” ಎಂದರು.
“ಅರಣ್ಯ ಇಲಾಖೆಯ ಜೊತೆ ಚರ್ಚೆ ಮಾಡಿ ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳಲ್ಲಿ ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಮಾದರಿಯಲ್ಲಿ ಉದ್ಯಾನಗಳ ಅಭಿವೃದ್ಧಿ ಮಾಡಿ, ‘ಟ್ರೀ ಪಾರ್ಕ್’ ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಇದರಿಂದ ಕಾಡಿನ ಸಂರಕ್ಷಣೆಯೂ ಆದಂತೆ ಆಗುತ್ತದೆ. ಲಾಲ್ ಬಾಗ್ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂಪಾಯಿ ಘೋಷಣೆ ಮಾಡಿದ್ದೇನೆ” ಎಂದರು.
ನಗರದ ಒಳಗೆ ಹೈಕೋರ್ಟ್ ಸ್ಥಳಾಂತರಕ್ಕೆ ಸ್ಥಳ ಪರಿಶೀಲನೆ
“ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಹೈಕೋರ್ಟ್ ಸ್ಥಳಾಂತರಕ್ಕೆ 15- 20 ಎಕರೆ ಜಾಗ ನೀಡಿ ಎಂದು ವಕೀಲರು, ಮುಖ್ಯ ನ್ಯಾಯಮೂರ್ತಿಗಳು ಮನವಿ ಮಾಡಿದ್ದರು. ಸರ್ಕಾರದ ಮುಂದೆಯೂ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹತ್ತಿರದಲ್ಲಿ ಎಲ್ಲಿ ಸ್ಥಳಾವಕಾಶ ದೊರೆಯಬಹುದು ಎಂದು ಪರಿಶೀಲನೆ ಮಾಡಲಾಗುವುದು. ಹಳೆಯ ಐತಿಹಾಸಿಕ ಕಟ್ಟಡವಾದ ಕಾರಣಕ್ಕೆ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸ್ಥಳವಾಕಾಶ ಚಿಕ್ಕದಿದೆ” ಎಂದರು.
ಹೈಕೋರ್ಟ್ ಅನ್ನು ನಗರದ ಹೊರಗೆ ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಕ್ಷಿದಾರರು, ಲಾಯರ್ ಗಳಿಗೆ ಅನುಕೂಲವಾಗುವಂತಹ ಸ್ಥಳ ನೋಡಬೇಕಿದೆ. ಒಂದಷ್ಟು ಜನ ವಕೀಲರು ಭೇಟಿ ಮಾಡಿ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ತಿಳಿಸಿದರು. ಒಂದಷ್ಟು ಕಾನೂನಾತ್ಮಕ ತೊಡಕುಗಳು ಇರುವ ಕಾರಣಕ್ಕೆ ಆನಂತರ ಅದರ ಬಗ್ಗೆ ಆಲೋಚನೆ ಮಾಡೋಣ ಎಂದು ತಿಳಿಸಿದ್ದೇನೆ” ಎಂದರು.
“ಈ ಮೊದಲು ಎಲ್ಲಾ ಹೋರಾಟಗಳು, ಪ್ರತಿಭಟನೆಗಳು ಕಬ್ಬನ್ ಪಾರ್ಕ್ ಅಲ್ಲಿಯೇ ನಡೆಯುತ್ತಿತ್ತು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಇದನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಯಿತು. ನಗರದ ಶ್ವಾಸಕೋಶದಂತೆ ಇರುವ ಈ ಉದ್ಯಾನ ಉಳಿಸಿಕೊಳ್ಳಲು ಏನು ಮಾಡಬೇಕೊ ಅದನ್ನು ನಾನು ಮಾಡುತ್ತೇನೆ. ಎಷ್ಟು ಗಂಟೆಗೆ ಯಾರು ಒಳ ಬಂದರು ಹೊರ ಹೋದರು ಎಂಬುದನ್ನು ದಾಖಲು ಮಾಡಲು ಕಬ್ಬನ್ ಪಾರ್ಕ್ ನಲ್ಲಿ ಹೈಟೆಕ್ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಬೇಕು. ಆಯುಕ್ತರ ಕಚೇರಿಯಲ್ಲಿಯೂ ಸಹ ಇದರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.
“ಬೆಂಗಳೂರು ನಗರದ ಉತ್ತಮ ಆಡಳಿತಕ್ಕಾಗಿ 5 ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಮೂಲಕ ಎಲ್ಲರ ಆಸ್ತಿಗಳನ್ನು ಭದ್ರಗೊಳಿಸಲಾಗುತ್ತಿದೆ. ಬಿ ಖಾತೆಯಿಂದ ಎ ಖಾತೆ ಬದಲಾವಣೆ ವಿಚಾರವಾಗಿ ಸಾವಿರಾರು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಒಂದಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಇದರಿಂದ ಅನೇಕರಿಗೆ ಉಪಯೋಗವಾಗಲಿದೆ. ಇದೊಂದು ಕ್ರಾಂತಿಕಾರಕ ಆಲೋಚನೆ” ಎಂದರು.
“ಬೀದಿ ದೀಪ ವ್ಯವಸ್ಥೆ, ಪಾದಚಾರಿ ಮೇಲ್ಸೆತುವೆ ವ್ಯವಸ್ಥೆ ಹಾಗೂ ಕಾಚೇನಹಳ್ಳಿ ರಸ್ತೆ, ಹಾಳಾದ ಮರಗಳು ಹಾಗೂ ಕೊಂಬೆ ತೆರವು, ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೀದಿ ದೀಪ ಇಲ್ಲದಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಬೀದಿ ನಾಯಿಗಳ ಸಮಸ್ಯೆ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು ಎಂದು ಜನರು ಮನವಿ ಸಲ್ಲಿಸಿದ್ದಾರೆ. ಖಾಸಗಿ ಬಸ್ ಗಳ ಹಾವಳಿ, ಇಂದಿರಾಗಾಂಧಿ ಮಕ್ಕಳ ಗ್ರಂಥಾಲಯವನ್ನು ಉನ್ನತೀಕರಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಆಯುರ್ವೇದ ಉದ್ಯಾನವನ್ನ ಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಎಲ್ಲಾ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲಾಗುವುದು” ಎಂದರು.
“ಚಿಕ್ಕಪೇಟೆ ಸೇರಿದಂತೆ ಪ್ರಮುಖ ಪೇಟೆ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದರ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತಿಳಿಸಲಾಗುವುದು. ರಸ್ತೆ ನಿಯಮ ಉಲ್ಲಂಘನೆ ಮಾಡಿದವರ ದಂಡದ ಪ್ರಮಾಣ ಹೆಚ್ಚಿಸಬೇಕು. ಹೈಕೋರ್ಟ್ ಸುತ್ತಲು ಪಾರ್ಕಿಂಗ್ ಹಾಗೂ ಕಸದ ಸಮಸ್ಯೆ ಹೆಚ್ಚಿದೆ ಎಂದು ಗಮನ ಸೆಳೆಯಲಾಗಿದೆ. ಆದಷ್ಟು ಬೇಗ ಇದನ್ನು ಬಗೆಹರಿಸಲಾಗುವುದು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರ ಜತೆ ಚರ್ಚೆ ನಡೆಸಿ ಯಾವ ಅನುದಾನದ ಮೂಲಕ ಇವುಗಳನ್ನು ಬಗೆಹರಿಸಬಹುದು ಎಂದು ಚರ್ಚೆ ನಡೆಸಲಾಗುವುದು” ಎಂದರು.
“ಜೆಪಿ ಪಾರ್ಕ್, ಕೋರಮಂಗಲ, ಕೆ ಆರ್ ಪುರಂ, ಕೆಂಗೇರಿ ಭಾಗದ ಪಾರ್ಕ್ ಗಳಲ್ಲಿ ಸಾವಿರಾರು ಜನರ ಸಮಸ್ಯೆಗಳನ್ನು ಈಗಾಗಲೇ ಆಲಿಸಿದ್ದೇನೆ. ಲಾಲ್ ಬಾಗ್ ನಲ್ಲಿ 50 ಮನವಿಗಳು, ಜೆಪಿ ಪಾರ್ಕ್ ನಲ್ಲಿ 68 ಮನವಿಗಳು, ಕೆ.ಆರ್.ಪುರಂನಲ್ಲಿ 99 ಮನವಿಗಳು, ಕೋರಮಂಗಲ 42, ಕೆಂಗೇರಿಯಲ್ಲಿ 85, ಕಬ್ಬನ್ ಪಾರ್ಕ್ ನಲ್ಲಿ 35 ಮಂದಿ ಅರ್ಜಿಗಳನ್ನು ನೀಡಿದ್ದಾರೆ. ನಗರದಾದ್ಯಂತ ಹೆಚ್ಚು, ಹೆಚ್ಚು ಜನರು ಭಾಗವಹಿಸಬೇಕು ಎಂಬುದು ನಮ್ಮ ಅಭಿಲಾಷೆ. ಈ ಹಿಂದೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ಮೂಲಕ ಸಾವಿರಾರು ಸಮಸ್ಯೆಗಳನ್ನು ಬಗೆಹರಿಸಲಾಗಿತ್ತು. ಹೆಚ್ಚು ಜನರು ಭಾಗವಹಿಸಿದಷ್ಟು ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬಹುದು” ಎಂದರು.
“ಸರ್ಕಾರ ಏನೇ ತಪ್ಪು ಮಾಡಿದ್ದರು ತಿದ್ದಿಕೊಳ್ಳಲು ನಾವು ತಯಾರಿದ್ದೇವೆ. ಜನರು ಅದನ್ನು ತಿಳಿಸುವ ಕೆಲಸ ಮಾಡಬೇಕು. ಶಾಸಕರಾದ ಬೈರತಿ ಬಸವರಾಜು, ರಿಜ್ವಾನ್, ಹ್ಯಾರಿಸ್, ಎಸ್.ಟಿ.ಸೋಮಶೇಖರ್ ಅವರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ” ಎಂದರು.
ನಡಿಗೆ ಕಾರ್ಯಕ್ರಮದ ನಂತರ ನಡೆದ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾಗರಿಕರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ವೇಳೆ ಮಾತನಾಡಿದ ನಾಗರಿಕರೊಬ್ಬರು ಹಣ ಪಡೆದು ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದೆ. ಇದರಿಂದ ಉತ್ತಮ ಅಭ್ಯರ್ಥಿಗಳ ಆಯ್ಕೆ ಕಷ್ಟವಾಗಿದೆ ಎಂದಾಗ ಉತ್ತರಿಸಿದ ಡಿಸಿಎಂ ಅವರು, “ಯಾವ ಪಕ್ಷದವರು ಸಹ ಹಣ ಪಡೆದು ಟಿಕೆಟ್ ನೀಡುವುದನ್ನು ನಾನು ನೋಡಿಲ್ಲ. ಅರ್ಜಿ ಸಲ್ಲಿಕೆಗೆ ಹಣ ಇಂತಿಷ್ಟು ಹಣ ಪಡೆಯಲಾಗುವುದು. ಇದರ ಬಗ್ಗೆ ಮಾಹಿತಿ ಇದ್ದರೆ ಇಂದು ಸಂಜೆಯೇ ತನಿಖೆಗೆ ಆದೇಶ ನೀಡುತ್ತೇನೆ” ಎಂದರು.
“ಜಿಬಿಎ ಚುನಾವಣೆ ವೇಳೆ ಜನರಿಗೆ ಹೆಚ್ಚು ಸ್ಪಂದಿಸುವವರು ಅರ್ಜಿ ಸಲ್ಲಿಸಲಿ. ಅಂತಹವರಿಗೆ ಅವಕಾಶ ಕಲ್ಲಿಸಿಕೊಡಲಾಗುವುದು” ಎಂದರು. ಆಗ ನಾಗರಿಕರು ಕಳೆದ 10-15 ವರ್ಷಗಳಿಂದಲೂ ಒಬ್ಬರೇ ಪಾಲಿಕೆ ಸದಸ್ಯರಿದ್ದಾರೆ ಎಂದಾಗ, “ನಾನು 35 ವರ್ಷಗಳಿಂದ ಶಾಸಕನಿದ್ದೇನೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬೆಸ್ಕಾಂನಿಂದ ಅಕ್ರಮ ಕಟ್ಟಡಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿ ಸಂಸ್ಥೆಗೆ ನಷ್ಟ ಉಂಟು ಮಾಡಲಾಗುತ್ತಿದೆ ಎನ್ನುವ ದೂರಿನ ಬಗ್ಗೆ ನಾಗರಿಕರು ಮನವಿ ಸಲ್ಲಿಸಿದರು. “ಕೂಡಲೇ ಇದರ ಬಗ್ಗೆ ಕ್ರಮ ವಹಿಸಲು ಸೂಚಿಸುವೆ” ಎಂದರು.
“ದೇವನಹಳ್ಳಿ, ನೈಸ್ ರಸ್ತೆ ಸಂತ್ರಸ್ತ ರೈತರ ಪರವಾಗಿ ಡಿಸಿಎಂ ಅವರು ನಿಲ್ಲಬೇಕು” ಎಂದು ರೈತ ಮುಖಂಡರೊಬ್ಬರು ಮನವಿ ಮಾಡಿದರು.
“330 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕ್ ಈಗ 196 ಎಕರೆಗೆ ಕುಗ್ಗಿದೆ. ಇದನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಪಾರ್ಕಿನ ಒಳಗೆ ಇರುವ ಎಲ್ಲಾ ಗುತ್ತಿಗೆ ಕಟ್ಟಡಗಳನ್ನು ತೆರವುಗೊಳಿಸಬೇಕು, ವಾಣಿಜ್ಯೀಕರಣ ಮಾಡಬೇಡಿ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ನಾಗರಿಕರೊಬ್ಬರು ಮನವಿ ಸಲ್ಲಿಸಿದರು.