ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮಿತಿಮೀರಿ ಹೆಚ್ಚುತ್ತಿರುವ ಹೊರ ರಾಜ್ಯದ ವಲಸಿಗರಿಂದಾಗಿ ( Migrants) ಸ್ಥಳೀಯರಿಗೆ ಉದ್ಯೋಗಕ್ಕೆ ಕೊಕ್ಕೆ ಬೀಳುತ್ತಿದೆ ಎಂಬ ಆಕ್ರೋಶದ ಬೆನ್ನಲ್ಲೇ, ಇತ್ತೀಚೆಗೆ ಬಾಂಗ್ಲಾ ದೇಶದ ವಲಸಿಗರು ಅಕ್ರಮವಾಗಿ ನುಸುಳಿದ್ದಾರೆಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಈ ಕುರಿತಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ಬಣದ ಕಾರ್ಯಕರ್ತರು ಡಿವೈಎಸ್ಪಿ ರವಿ ಅವರನ್ನು ಭೇಟಿಯಾಗಿ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಬಾಂಗ್ಲ ವಲಸಿಗರು ಇತರೆ ರಾಜ್ಯಗಳ ವಲಸಿಗರನ್ನು ಪತ್ತೆ ಹಚ್ಚಿ ಅವರ ಹಾವಳಿ ತಪ್ಪಿಸುವಂತೆ ಮನವಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಹರಿತಲೇಖನಿಯೊಂದಿಗೆ ಮಾತನಾಡಿದ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 20 ಕಿಮೀ ಮಾತ್ರ ಇದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜವಳಿ ಪಾರ್ಕ್, ಹಲವು ಕೈಗಾರಿಕೆಗಳು ಇದ್ದು, ನೂತನವಾಗಿ ಫಾಕ್ಸ್ ಕಾನ್ ಕಂಪನಿ ಆರಂಭವಾಗಿ ನಗರವು ಅತಿವೇಗವಾಗಿ ಬೆಳೆಯುತ್ತಿದೆ.
ಉದ್ಯೋಗವನ್ನರಸಿ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಜನ ದೊಡ್ಡಬಳ್ಳಾಪುರ ವ್ಯಾಪ್ತಿಗೆ ಬರುತ್ತಿದ್ದು ಇವರು ಹೊರ ರಾಜ್ಯದವರೋ, ಇಲ್ಲ ಬಾಂಗ್ಲಾದೇಶದಿಂದ ಅಕ್ರಮವಾಗಿ ಬರುತ್ತಿರುವ ತಿಳಿಯುತ್ತಿಲ್ಲ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅಕ್ರಮ ಬಾಂಗ್ಲ ವಲಸಿಗರ ವದಂತಿ ಚರ್ಚೆ ನಡೆಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುತ್ತಿದೆ. ಅಲ್ಲದೆ ಇತರೆ ರಾಜ್ಯದ ವಲಸಿಗರ ಸಂಖ್ಯೆ ಹೆಚ್ಚಾಗಿ ಕಳ್ಳತನ, ದರೋಡೆ, ಬೆದರಿಕೆ ಒಡ್ಡುವುದು ನಡೆಯುತ್ತಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ನೇಕಾರ ಮುಖಂಡರ ತುರ್ತು ಸಭೆ ನಡೆಸಿರುತ್ತಾರೆ. ಆದರೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ, ರೈಲ್ವೆ ನಿಲ್ದಾಣ, ಕೊನಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾವು ಮತ್ತು ತಮ್ಮ ಮೇಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಲಸಿಗರಿಗೆ ಎಚ್ಚರಿಕೆ ನೀಡಬೇಕಿದೆ.
ಅಲ್ಲದೆ ಇಂತವರಿಗೆ ಬಾಡಿಗೆ ನೀಡುವ ಮನೆಯ ಮಾಲೀಕರಿಗೆ, ಬಾಡಿಗೆ ನೀಡುವಾಗ ವಲಸಿಗರ ಪೂರ್ಣ ವಿಳಾಸವನ್ನು ಠಾಣೆಗೆ ಸಲ್ಲಿಸುವಂತೆ ಆದೇಶ ಮಾಡಬೇಕೆಂದು ಮನವಿ ಮಾಡಿದ್ದೇವೆ.
ಈ ಕುರಿತಂತೆ ಡಿವೈಎಸ್ಪಿ ರವಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಈ ವೇಳೆ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣದ) ಪ್ರಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಖಜಾಂಚಿ ಆನಂದ್, ನಗರ ಅಧ್ಯಕ್ಷರು ಶ್ರೀ ನಗರ ಬಶೀರ್, ಉಪಾಧ್ಯಕ್ಷರು ಮಂಜುನಾಥ್, ಶ್ರೀನಿವಾಸ್, ಹಮಾಮ್ ಮಂಜುನಾಥ್, ರಮೇಶ್ ಮತ್ತಿತರರು.