ದೊಡ್ಡಬಳ್ಳಾಪುರ: ತಾಲ್ಲೂಕಿನ ಸಿಂಪಾಡಿಪುರ ಗ್ರಾಮದ ವೀಣೆ ತಯಾರಕ ಪೆನ್ನ ಒಬಳಯ್ಯ ಅವರಿಗೆ 2025ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಆಯ್ಕೆ ಆಗಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಸಿಂಪಾಡಿಪುರ ಗ್ರಾಮದಲ್ಲಿ ವೀಣೆ ತಯಾರಿಕೆಯ ಪರಂಪರೆಯನ್ನು ಪ್ರಾರಂಭಿಸಿದ ಪೆನ್ನ ಒಬಳಯ್ಯ ಅವರು ವೀಣೆ ತಯಾರಕರಲ್ಲಿ ಕೆಲಸ ಮಾಡುತ್ತಾ ಕಲೆಯನ್ನು ಕಲಿತರು ಮತ್ತು ನಂತರ ತಮ್ಮ ಗ್ರಾಮ ಸಿಂಪಾಡಿಪುರ ಬಂದು ಈ ಕರಕುಶಲತೆಯನ್ನು ಗ್ರಾಮಸ್ಥರಿಗೆ ಕಲಿಸಿದರು.
ಕಳೆದ 50 ವರ್ಷಗಳಿಂದಲೂ ವೀಣೆ ತಯಾರಿಸುತ್ತಾ ಬಂದಿರುವ ಈ ಗ್ರಾಮವು ಈಗಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಮೈಸೂರು ವೀಣೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ.
ವೀಣೆ ತಯಾರಿಕೆಯ ಪರಂಪರೆಯನ್ನು ಮುಂದುವರಿಸಲು ಹೊಸ ತಲೆಮಾರಿನ ಪ್ರತಿಭೆಗಳು ಈ ಕರಕುಶಲತೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿವೆ.
ಸಿಂಪಾಡಿಪುರ ಗ್ರಾಮದಲ್ಲಿತ ಯಾರಾಗುವ ವೀಣೆಗಳು ಹೆಸರಾಂತ ಸಂಗೀತ ಕಲಾವಿದರ ಕೈಯಲ್ಲಿವೆ.
ಸಾಮಾನ್ಯವಾಗಿ ವೀಣೆಗಳು ಸಿದ್ಧಗೊಳ್ಳುವುದು ತಮಿಳುನಾಡಿನ ತಂಜಾವೂರಿನಲ್ಲಿ, ನಂತರ ವೀಣೆ ತಯಾರಿಕೆಯಲ್ಲಿ ಗಮನ ಸೆಳೆದಿರುವುದು ಬೆಂಗಳೂರು ಬಳಿಯ ಸಿಂಪಾಡಿಪುರ ಗ್ರಾಮ. ಕಳೆದ ಐವತ್ತು ವರ್ಷಗಳಿಂದ, ಈ ಊರಿನಲ್ಲಿ ವೀಣೆ ಮತ್ತು ತಂಬೂರಿಗಳನ್ನು ತಯಾರು ಮಾಡುತ್ತಿದ್ದಾರೆ.