ಬೆಂಗಳೂರು: “ಕಾಂಗ್ರೆಸ್ ಸರಕಾರದ ಕಾಲದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಆಗಬಾರದು ಎಂಬ ಅಸೂಯೆ, ಕುತಂತ್ರ ಬಿಜೆಪಿಯದು. ಡಿ.ಕೆ. ಶಿವಕುಮಾರ್ (D.K. Shivakumar) ಅವರು ಬೆಂಗಳೂರಿಗೆ ಶಾಶ್ವತ ಪರಿಹಾರ ನೀಡುತ್ತಿದ್ದಾರೆ. ಬಿಜೆಪಿಯಿಂದ ಸಾಧ್ಯವಾಗದ್ದನ್ನು ನಾವು ತೀರ್ಮಾನ ಮಾಡಿದ್ದೇವೆ ಎಂಬ ಅಸೂಯೆ ಅವರದು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ (D.K. Suresh) ಅವರು ಹರಿಹಾಯ್ದಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಟನಲ್ ರಸ್ತೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, ಬಿಜೆಪಿಯವರೇ ಹಾಗೆ. ಅವರಿಗೆ ಬೆಂಗಳೂರು ಅಭಿವೃದ್ಧಿ ಆಗಬಾರದು. ತೇಜಸ್ವಿ ಸೂರ್ಯ ಅವರಿಗೆ ಪರ್ಯಾಯ ಪರಿಹಾರ ಏನು ಎಂದು ಕೇಳಿದರೆ, ಬೆಂಗಳೂರಿನ ನಾಗರೀಕರು ಕಾರುಗಳನ್ನು ಬಿಟ್ಟು ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಬಳಸುವಂತೆ ಶಿವಕುಮಾರ್ ಅವರು ಕರೆ ನೀಡಬೇಕು ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರು, ಸಂಸದರು, ಕೇಂದ್ರ ಸಚಿವರು, ಶಾಸಕರು ಎಲ್ಲರೂ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ನೀವು ಕಾರು ಖರೀದಿ ಮಾಡಬೇಡಿ, ಸಂಚಾರ ದಟ್ಟಣೆ ನಿಯಂತ್ರಿಸಿ ಎಂದು ಕರೆ ನೀಡಲಿ. ಅವರು ಕೂಡ ಕಾರು ಬಳಸದಂತೆ ಪ್ರಧಾನಿ ಅವರ ಬಳಿ ದೀಕ್ಷೆ ಪಡೆದು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ, ಮಾದರಿಯಾದರೆ ನಾವು ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮತದಾರರಿಗೆ ಅದನ್ನು ಹೇಳಬಹುದು. ಆಗ ಸಂಚಾರ ದಟ್ಟಣೆ ನಿವಾರಿಸಬಹುದು ಎಂದು ತಿವಿದರು.
ಟನಲ್ ರಸ್ತೆ: ಮೋದಿ ಮಾಡಿದರೆ ಚಮತ್ಕಾರ, ಕಾಂಗ್ರೆಸ್ ಮಾಡಿದರೆ ಬಲತ್ಕಾರ
ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೆ ಅವಕಾಶ ಕೊಡುವ ಬಗ್ಗೆ ಕೇಳಿದಾಗ, ಅವರು ಏನೇನೋ ಹೇಳುತ್ತಿರುತ್ತಾರೆ. ಅವರ ಪ್ರಕಾರ ಮೋದಿ ಅವರು ಟನಲ್ ರಸ್ತೆ ಮಾಡಿದರೆ ಚಮತ್ಕಾರ, ಕಾಂಗ್ರೆಸ್ ಸರ್ಕಾರ ಮಾಡಿದರೆ ಬಲತ್ಕಾರ. ಬಾಂಬೆಯಲ್ಲಿ ಟನಲ್ ರಸ್ತೆ ಮಾಡಲಾಗಿದೆ.
ನಮ್ಮಲ್ಲಿ ಮೆಟ್ರೋ ಯೋಜನೆಗೂ ಟನಲ್
ರೂಪಿಸಿದ್ದೇವೆ. ಬೆಂಗಳೂರಿನಲ್ಲಿ ಎಲ್ಲೂ ನೇರವಾದ ರಸ್ತೆ ಇಲ್ಲ. ಮಹದೇವಪುರದಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾಗಿ 7 ವರ್ಷವಾಗಿದೆ. ಬಿಜೆಪಿ ಕಾಲದಲ್ಲಿ ಕೈಗೆತ್ತಿಕೊಂಡ ಯೋಜನೆ ಅಗಲೀಕರಣ ಸಾಧ್ಯವಾಗಿಲ್ಲ. ಈ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಎಲ್ಲರಿಗೂ ಪರಿಹಾರ ನೀಡಿ ರಸ್ತೆ ಅಗಲಿಕರಣ ಮಾಡಲು ಸಾವಿರಾರು ಕೋಟಿ ಹಣ ಬೇಕಾಗುತ್ತದೆ.
ಈ ಎಲ್ಲಾ ಸಾಧಕ ಬಾಧಕ ಚರ್ಚಿಸಿ ಮುಂದುವರಿಯಬೇಕು. ಯಾವುದೇ ಯೋಜನೆ ಒಂದೇ ದಿನದಲ್ಲಿ ಮ್ಯಾಜಿಕ್ ಮೂಲಕ ಆಗುವುದಿಲ್ಲ. ಕನಿಷ್ಠ 3-8 ವರ್ಷ ಬೇಕಾಗುತ್ತದೆ. ಸಿಎಂ, ಡಿಸಿಎಂ, ಸಚಿವರುಗಳು ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲು ಗುರಿ ಹೊಂದಿದ್ದಾರೆ. ಇದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ 10% ಅನುದಾನ ನೀಡುತ್ತದೆ. ತೇಜಸ್ವಿ ಸೂರ್ಯ ತಾನೇ ಈ ಯೋಜನೆ ತಂದಿರುವಂತೆ ವರ್ತಿಸುತ್ತಾರೆ. ಕರ್ನಾಟಕ ಮೆಟ್ರೋಗೆ 10% ಅನುದಾನ ನೀಡುವ ಕೇಂದ್ರ ಸರ್ಕಾರ ಅಹಮದಾಬಾದ್ ಮೆಟ್ರೋಗೆ 20% ಅನುದಾನ ನೀಡುತ್ತಿದೆ. ಇದರ ಬಗ್ಗೆ ನೀವು ಪ್ರಸ್ತಾಪ ಮಾಡುವುದಿಲ್ಲ ಯಾಕೆ ಎಂದು ಅವರನ್ನು ಕೇಳಿ. ನಮ್ಮ ರಾಜ್ಯಕ್ಕೂ 20% ಅನುದಾನ ನೀಡಬಹುದಲ್ಲವೇ? ಇವರ ಧ್ವನಿ ಕೇಂದ್ರ ಸರ್ಕಾರ ಬಳಿ ಇರುವುದಿಲ್ಲ, ಕೇವಲ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಂದೆ ಇರುತ್ತದೆ. ಅವರು ರಾಜಕೀಯಕ್ಕೆ ಧ್ವನಿ ಎತ್ತುತ್ತಿದ್ದಾರೆ ಹೊರತು ಜನರ ಹಿತಕ್ಕಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಲಂಪಿಕ್ಸ್ ಆತಿಥ್ಯಕ್ಕೆ ಸಿದ್ಧತೆ; ದಕ್ಷಿಣ ಭಾರತಕ್ಕೆ ಅನ್ಯಾಯ
2036ರ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಬಿಡ್ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಇದಕ್ಕೆ ಯಾವ ರಾಜ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ? ಗುಜರಾತಿನ 50 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಮಾಡಲು ಮುಂದಾಗಿದ್ದಾರೆ. ಗುಜರಾತ್ ಕೇಂದ್ರಿಕೃತವಾಗಿಸಿಕೊಂಡು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಧ್ವನಿ ಎತ್ತಿದ್ದು. ಈ ವಿಚಾರವಾಗಿ ಸಂಸದರು ಮಾತನಾಡಬೇಕಲ್ಲವೇ? ಒಲಂಪಿಕ್ಸ್ ಆತಿಥ್ಯ ನಮಗೆ ಸಿಗುತ್ತದೆಯೋ ಇಲ್ಲವೋ, ಅದಕ್ಕೆ ಅಗತ್ಯ ಸಿದ್ಧತೆ ಮಾಡುವಾಗ ದಕ್ಷಿಣ ಭಾರತಕ್ಕೂ ಆದ್ಯತೆ ನೀಡಬೇಕಲ್ಲವೇ? ದಕ್ಷಿಣ ಭಾರತದಲ್ಲಿ ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಚ್ಚಿ ಸೇರಿದಂತೆ ಅನೇಕ ನಗರಗಳಿವೆ. ಸಮಾನತೆ ಇರಬೇಕು ಎಂಬುದಾದರೆ ಈ ನಗರಗಳಿಗೆ ಆದ್ಯತೆ ನೀಡಬಹುದಿತ್ತಲ್ಲವೇ? ಈ ಬಗ್ಗೆ ತೇಜಸ್ವಿ ಸೂರ್ಯ ಮಾತನಾಡಲಿ.
ವಿದ್ಯೆ ಕಲಿತಿದ್ದೇನೆ, ಮಾತನಾಡುತ್ತೇನೆ ಎಂದು ಟ್ವೀಟ್ ಮಾಡಿಕೊಂಡು, ಮಾಧ್ಯಮಗಳನ್ನು ಹೈಜಾಕ್ ಮಾಡಿಕೊಂಡು ಕನ್ನಡಿಗರಿಗೆ ಆಗುವ ಅನ್ಯಾಯ ಮರೆಮಾಚುತ್ತಿದ್ದಾರೆ ಎಂದು ಕಿಡಿಕಾರಿದರು.
ಯೋಜನೆ, ಅನುದಾನ ತಾರತಮ್ಯಗಳ ಸಂಸದರು ಮಾತನಾಡುತ್ತಿಲ್ಲ ಯಾಕೆ?
ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ 4 ಲಕ್ಷ ಕೋಟಿ ತೆರಿಗೆ ಪಾವತಿ ಮಾಡುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವ ಯೋಜನೆ, ಅನುದಾನ ಕೊಟ್ಟಿದೆ ಎಂದು ಸಂಸದರು, ಕೇಂದ್ರ ಮಂತ್ರಿಗಳು ಹೇಳಬೇಕು.
ಮಾಧ್ಯಮಗಳು ಕೇವಲ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೀರಿ. ನಿಜವಾದ ಸಮಸ್ಯೆಗಳ ಬಗ್ಗೆ, ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಬೇಕು. ನಾವು ಈ ವಿಚಾರದಲ್ಲಿ ಧ್ವನಿ ಎತ್ತಿದರೆ ದೇಶ ವಿಭಜನೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಇಲ್ಲಿ ಕನ್ನಡಿಗರು, ದಕ್ಷಿಣ ಭಾರತದ ಮೇಲೆ ಎಷ್ಟರ ಮಟ್ಟಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಬಹಳ ಮುಖ್ಯ. ಉತ್ತರ ಪ್ರದೇಶ, ಬಿಹಾರ, ಗುಜರಾತಿಗೆ ಎಷ್ಟು ಅನುದಾನ, ಯೋಜನೆ ನೀಡಿದ್ದಾರೆ ಎಂದು ಚರ್ಚೆ ಮಾಡಿ.
ಮಾಧ್ಯಮಗಳು ತೇಜಸ್ವಿ ಸೂರ್ಯ ಅವರಿಗೆ ಕೇವಲ ಟನಲ್ ಬಗ್ಗೆ ಮಾತ್ರ ಯಾಕೆ ಕೇಳುತ್ತೀರಿ? ಈ ವಿಚಾರವಾಗಿ ಯಾಕೆ ಪ್ರಶ್ನೆ ಮಾಡುವುದಿಲ್ಲ? ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಅವರದೇ ಸರ್ಕಾರ ಅಧಿಕಾರದಲ್ಲಿತ್ತು. ಆಗಲೂ ಸಂಚಾರ ದಟ್ಟಣೆ ಇತ್ತು. ಆಗ ಬಿಜೆಪಿ ಸರ್ಕಾರ ಯಾವ ಪರಿಹಾರ ಯೋಜನೆಗಳನ್ನು ಪ್ರಸ್ತಾಪಿಸಿತ್ತು? ಕೇಂದ್ರದಲ್ಲೂ ಅವರದೇ ಸರ್ಕಾರ ಇತ್ತು. ಈಗ ಮೆಟ್ರೋ ವಿಸ್ತರಣೆಗೆ ಪ್ರಸ್ತಾವನೆ ನೀಡುತ್ತಿದ್ದಾರಲ್ಲ, ಬಿಜೆಪಿ ಸರ್ಕಾರ ಇದ್ದಾಗ ಮೆಟ್ರೋ ಎಷ್ಟು ವಿಸ್ತರಣೆ ಮಾಡಿದ್ದರು? ಕೇವಲ ಪ್ರಚಾರಕ್ಕಾಗಿ, ಕಾಂಗ್ರೆಸ್ ಕಾರ್ಯಕ್ರಮ ವಿರೋಧಿಸಿ, ಬೆಂಗಳೂರಿನ ಅಭಿವೃದ್ಧಿ ತಡೆಯಲು ಈ ಷಡ್ಯಂತ್ರ ಮಾಡುತ್ತಿದ್ದಾರೆ. ಮಾಧ್ಯಮಗಳು ಈ ಬಗ್ಗೆ ಗಟ್ಟಿ ಧ್ವನಿಯಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.
ರೈಲ್ವೇ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ
ಕಾಂಗ್ರೆಸ್ ನಾಯಕರೇ ಟನಲ್ ವಿಚಾರವಾಗಿ ಗಟ್ಟಿಯಾಗಿ ಮಾತನಾಡುತ್ತಿಲ್ಲ ಎಂದು ಕೇಳಿದಾಗ, ಮಾಧ್ಯಮಗಳಿಗೆ ಸ್ವಾಯತ್ತತೆ ಇದೆ. ನಿಮಗೆ ನಿಮ್ಮದೇ ಆದ ವಿಚಾರಧಾರೆಗಳಿವೆ. ಅವರು ಹೇಳಿದ್ದಕ್ಕೆಲ್ಲಾ ಪ್ರಚಾರ ನೀಡಬೇಕು ಎಂದು ಇಲ್ಲ. ಅವರು ಪ್ರಚಾರಕ್ಕಾಗಿ ವಿರೋಧ ಮಾಡಿದರೆ, ನೀವು ಅದನ್ನು ಪ್ರಚಾರ ಮಾಡಿದರೆ ಅವರು ವಿಜೃಂಭಿಸಿದಂತೆ ಆಗುತ್ತದೆ.
ಸಬ್ ಅರ್ಬನ್ ರೈಲು ಯೋಜನೆ ವಿಚಾರವಾಗಿ ಬಿಜೆಪಿ ಸಂಸದರು ಅನೇಕ ಸಭೆ ಮಾಡಿದ್ದಾರೆ. ಆದರೂ ಇದುವರೆಗೂ ಯಾಕೆ ಯಶಸ್ಸು ಸಾಧಿಸಲಿಲ್ಲ? ಯೋಜನೆ ನೀಲನಕ್ಷೆಯೇ ಆರಂಭವಾಗಿಲ್ಲ. ಸಲಹೆಗಳನ್ನು ನೀಡುತ್ತಾರೆ. ಅವರು ಕೇವಲ ಮಾತನಾಡುತ್ತಿದ್ದಾರೆ.
ರೈಲ್ವೇ ಯೋಜನೆಗಳಿಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆಗೆ ಎಷ್ಟು ಅನುದಾನ ನೀಡುತ್ತಾರೆ ಎಂದು ಹೇಳಬೇಕು. ರೈಲ್ವೇ ಯೋಜನೆಗಳಲ್ಲಿ ಕರ್ನಾಟಕಕ್ಕೆ ಯೋಜನೆಯ 25% ಅನುದಾನ ಮಾತ್ರ ನೀಡುತ್ತಾರೆ. ಉಳಿದ 75% ಹಣ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ರಾಜ್ಯದ ಮೇಲೆ ಬೀಳುತ್ತದೆ. ಆದರೆ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ 50% ಅನುದಾನ ನೀಡುತ್ತಿದೆ.
ಈ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿಲ್ಲವೇ? ಇದರ ಬಗ್ಗೆ ಬಿಜೆಪಿ ನಾಯಕರು ಧ್ವನಿ ಎತ್ತಲು ಆಗುವುದಿಲ್ಲವೇ? ಬೆಂಗಳೂರು ಜನರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವುದು ಒಂದೇ ಫೇಸ್ ಬುಕ್, ಟ್ವಿಟರ್ ನಲ್ಲಿ ಟೀಕೆ ಮಾಡುವುದು ಮಾತ್ರ. ನಿಜವಾದ ಪರಿಸ್ಥಿತಿ ಬಹಳಷ್ಟು ಖಾರವಾಗಿರುತ್ತದೆ. ಕಾಂಗ್ರೆಸ್ ಸರ್ಕಾರ ಕಟುವಾಗಿ ಹೇಳುವುದು ಅವರಿಗೆ ಇಷ್ಟವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
500 ಕೋಟಿಯಲ್ಲಿ ಬೆಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ಸಾಧ್ಯವೇ?
“ಕೇಂದ್ರ ಸರ್ಕಾರ ನಿರ್ಮಿಸಿರುವ ನೂರು ಸ್ಮಾರ್ಟ್ ಸಿಟಿ ಎಲ್ಲಿ ಕಾಣಿಸುತ್ತಿದೆ? ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ 500 ಕೋಟಿ ನೀಡಿದ್ದಾರೆ. ಇದರಲ್ಲಿ ಸ್ಮಾರ್ಟ್ ಸಿಟಿ ಸಾಧ್ಯವೇ? ಮಾಧ್ಯಮಗಳು ಸಿಂಗಾಪುರ, ಹಾಂಗ್ ಕಾಂಗ್, ಮಲೇಷ್ಯಾದ ಫೋಟೋ ಹಾಕಿ ಪ್ರಚಾರ ನೀಡಿ ನಮ್ಮ ಜನರ ತಲೆ ಕೆಡಿಸಿದವು. ಯಾವುದಾದರೂ ಒಂದು ಸ್ಮಾರ್ಟ್ ಸಿಟಿ ತೋರಿಸುತ್ತೀರಾ? ಮಾಧ್ಯಮಗಳು ಈ ಹಿಂದೆ ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ಒಮ್ಮೆ ನೋಡಿ” ಎಂದು ತಿಳಿಸಿದರು.
ಜನವರಿ ವೇಳೆಗೆ ರಸ್ತೆ ಗುಂಡಿಗಳು ಒಂದು ಹಂತಕ್ಕೆ ನಿವಾರಣೆ
ರಸ್ತೆಗುಂಡಿ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ವಿರೋಧ ಪಕ್ಷವಾಗಿ ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕೂಡ ಅದಕ್ಕೆ ತಕ್ಕಂತೆ ಮಳೆ ನಿಂತಿರುವ ಹಿನ್ನೆಲೆಯಲ್ಲಿ ಸಿಎಂ ರಸ್ತೆ ನಿರ್ವಹಣೆಗೆ 2 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಜನವರಿ ಒಳಗೆ ಎಲ್ಲಾ ರಸ್ತೆಗಳು ಒಂದು ಹಂತಕ್ಕೆ ಬರಲಿವೆ” ಎಂದು ತಿಳಿಸಿದರು.