ಬೆಂ.ಗ್ರಾ. ಜಿಲ್ಲೆ: ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ (Bank) ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಸಲುವಾಗಿ ಜಿಲ್ಲಾಡಳಿತ ಭವನದಲ್ಲಿ ವಿಶೇಷ ಅರಿವು ಶಿಬಿರವನ್ನು (Awareness camp) ಆಯೋಜಿಸಲಾಗಿದೆ.
ಶಿಬಿರವು ನವೆಂಬರ್ 21 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.
ಜಿಲ್ಲೆಯ ಸಾರ್ವಜನಿಕರು, ವಾರಸುದಾರರು ತಮ್ಮ ಸಂಬಂಧಿತ ಗುರುತಿನ ದಾಖಲೆಗಳು, ಬ್ಯಾಂಕ್ ದಾಖಲೆಗಳು ಮತ್ತು ಅರ್ಹತಾ ಪತ್ರಗಳೊಂದಿಗೆ ಶಿಬಿರದಲ್ಲಿ ಭಾಗವಹಿಸಿ ಅಗತ್ಯ ಸಲಹೆ ಮತ್ತು ಸವಲತ್ತುಗಳನ್ನು ಪಡೆಯಬಹುದು.
ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕ್, ವಿಮಾ ಮತ್ತು ಇತರ ಇಲಾಖಾ ಶಾಖೆಗಳಲ್ಲಿ 2025 ರ ಡಿಸೆಂಬರ್ 31 ರವರೆಗೆ ನಿಮ್ಮ ಹಣ ನಿಮ್ಮ ಹಕ್ಕು ಶಿಬಿರ ನಡೆಯಲಿದೆ. ಅದರಂತೆ, ದೀರ್ಘಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನುಬದ್ಧ ವಾರಸುದಾರರಿಗೆ ಮರುಪಡೆಯಲು ಸಹಾಯ ಮಾಡಲು ಈ ಶಿಬಿರವನ್ನು ನಡೆಸಲಾಗುತ್ತಿದೆ.
ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ಮತ್ತು ಹತ್ತು ವರ್ಷಗಳಿಗಿಂತ ಹಳೆಯದಾದ ಕ್ಲೈಮ್ ಮಾಡದ ಠೇವಣಿಗಳನ್ನು (ಮೊತ್ತಗಳು) ಆರ್ಬಿಐನ ಡಿಇಎ ನಿಧಿಗೆ ವರ್ಗಾಯಿಸಲಾಗುತ್ತದೆ.
ಆರ್ ಬಿಐ ನ ಯುಡಿಜಿಎಎಂ ವೆಬ್ಸೈಟ್ ನಲ್ಲಿ (https://udgam.rbi.org.in) ನೀವು ಅಥವಾ ನಿಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳು ಯಾವುದೇ ಸಮಯದಲ್ಲಿ ಅದನ್ನು ಕ್ಲೈಮ್ ಮಾಡಬಹುದು.
ಬ್ಯಾಂಕಿಂಗ್ ವಲಯ, ವಿಮಾ ವಲಯ, ಹಣಕಾಸು ವಲಯ ಮತ್ತು ಇತರ ವಲಯಗಳ ಅಧಿಕಾರಿಗಳು ಈ ಶಿಬಿರದಲ್ಲಿ ಭಾಗವಹಿಸಿ ಸಲಹೆ ನೀಡುತ್ತಾರೆ, ಶಿಬಿರದ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.