ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಡಿ.ಸಿ. ಶಶಿಧರ್ (D.C. Shashidhar) ದೊಡ್ಡಬಳ್ಳಾಪುರ ಕಾಂಗ್ರೆಸ್ (Doddaballapura Congress) ಪಕ್ಷದಿಂದ ಅಂತರ ಕಾಯ್ದುಕೊಂಡಿರುವುದು, ರಾಜಕಾರಣದಿಂದ ತಟಸ್ಥವಾಗಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
21ನೇ ವಯಸ್ಸಿಗೆ ರಾಜಕಾರಣಕ್ಕೆ ಕಾಲಿಟ್ಟ ದೊಡ್ಡಬೆಳವಂಗಲದ ಡಿ.ಸಿ. ಶಶಿಧರ್, 2005 ರಲ್ಲಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, 2008 ರಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, 2012ರಲ್ಲಿ ಯೂತ್ ಕಾಂಗ್ರೆಸ್ ಪಾರ್ಲಿಮೆಂಟ್ ಅಧ್ಯಕ್ಷರಾಗಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ.
ಬಳಿಕ ದೊಡ್ಡಬೆಳವಂಗಲ ಗ್ರಾಮಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಡಿ.ಸಿ. ಶಶಿಧರ್ ನಂತರ ಗ್ರಾಮಪಂಚಾಯಿತಿ ಅಧ್ಯಕ್ಷರಾದರೂ, ಆನಂತರ ನಡೆದ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ, ಕಾಂಗ್ರೆಸ್ ಪಕ್ಷದಲ್ಲಿನ ತೀವ್ರ ಸ್ಪರ್ಧೆಯ ನಡುವೆಯೂ ಅಧ್ಯಕ್ಷರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಯಲ್ಲಿ ಹಲವು ಮಹತ್ತರ ಕಾರ್ಯಗಳನ್ನು ಮಾಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಜನತೆ ಹಾಗೂ ಎಲ್ಲಾ ಪಕ್ಷಗಳ ಸದಸ್ಯರ ಮನ್ನಣೆಗೆ ಪಾತ್ರರಾಗಿದ್ದರು.
ಆದರೆ ವಿಧಾನಸಭೆ ಚುನಾವಣೆಯ ಬಳಿಕ ಡಿ.ಸಿ. ಶಶಿಧರ್ ಅವರು ಏಕಾಏಕಿ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಲಕ್ಷಣಗಳು ಕಂಡುಬರುತ್ತಿದೆ.
ಡಿ.ಸಿ. ಶಶಿಧರ್ ತಟಸ್ಥವಾಗಲು ಕಾರಣವೇನು..?
ಡಿ.ಸಿ. ಶಶಿಧರ್ ಅವರ ಆತ್ಮೀಯ ವಲಯದ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಬೆಲೆ ಸಿಗುತ್ತಿಲ್ಲ, ಹಣ ಬಲ ಉಳ್ಳವರಿಗೆ ಮಾತ್ರ ಹುದ್ದೆಗಳು ದೊರಕುತ್ತಿದೆ, ಪಕ್ಷ ನಿಷ್ಟೆ ಹೊಂದಿದವರಿಗೆ ಅವಕಾಶಗಳು ಸಿಗುತ್ತಿಲ್ಲ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಯಕರ್ತರ ಕೇಳುವವರು ಇಲ್ಲವಾಗಿದೆ ಎಂಬ ಬೇಸರ ಅವರಿಗೆ ಕಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಪ್ರಬಲವಾದ ಹಿಡಿತ ಹೊಂದಿರುವ ಶಶಿಧರ್ ಅವರು ಸಚಿವ ಕೃಷ್ಣಾ ಬೈರೇಗೌಡ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡವರು. ಆದರೆ ಈಗ ಬೈರೇಗೌಡರ ಸಲಹೆಗೂ ಶಶಿಧರ್ ಮೌನವೇ ಉತ್ತರ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಅಲ್ಲದೆ ಬೆಂಗಳೂರು ಗ್ರಾಮಾಂತರ ಯೂತ್ ಕಾಂಗ್ರೆಸ್ ಅಧ್ಯಕ್ಷ ಶರತ್ ಪಟೇಲ್, ದೊಡ್ಡಬಳ್ಳಾಪುರ ಯೂತ್ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಗೌಡ ಮಲ್ಲೋಹಳ್ಳಿ ಶಶಿಧರ್ ಅವರ ಬೆಂಬಲಿಗರಾಗಿದ್ದಾರೆ. ಆದರೆ ಏಕಾಏಕಿ ಡಿ.ಸಿ. ಶಶಿಧರ್ ಅವರು ತಟಸ್ಥವಾಗಿರುವುದು ಅವರ ಹಿಂಬಾಲಕರಿಗೆ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಶಶಿಧರ್ ಬೇರೆ ಪಕ್ಷಕ್ಕೆ ತೆರಳಿದರೆ ಗತಿ ಯಾರು ಎಂಬ ಆತಂಕ ಅವರದ್ದಾಗಿದೆ.
ಕೆಲವೇ ತಿಂಗಳುಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಘೋಷಣೆಯಾಗಲಿದ್ದು, ದೊಡ್ಡಬಳ್ಳಾಪುರ ಕಾಂಗ್ರೆಸ್ ಡಿ.ಸಿ.ಶಶಿಧರ್ ಅಂತಹ ನಾಯಕರನ್ನು ಓಲೈಸಿ ಸಕ್ರಿಯರನ್ನಾಗಿಸದಿದ್ದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಪ್ರತಿಕ್ರಿಯೆ ನೀಡಲು ಮೌನ
ಈ ಎಲ್ಲಾ ಬೆಳವಣಿಗೆ ಕುರಿತು ಹರಿತಲೇಖನಿ ಡಿ.ಸಿ.ಶಶಿಧರ್ ಅವರನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಯಿತು. ಆದರೆ, ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಮೌನ ವಹಿಸಿದರು.