ದೊಡ್ಡಬಳ್ಳಾಪುರ: ಸಮಾಜದಲ್ಲಿ ಹೆಚ್ಚುತ್ತಿರುವ ನಶೆ, ಮದ್ಯಪಾನ, ಮಾದಕ ವ್ಯಸನ ಮತ್ತು ಧೂಮಪಾನದಂತಹ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದೊಡ್ಡಬಳ್ಳಾಪುರ ವತಿಯಿಂದ “ನಶಾಮುಕ್ತ ಅಭಿಯಾನ” ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ ನೈತಿಕ ಹಾಗೂ ಶಾರೀರಿಕ ಸದೃಢತೆಯ ಸಮಾಜ ನಿರ್ಮಾಣವೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಸ್ಟೇಷನ್ನ ಎಎಸ್ಐ ನಾರಾಯಣಸ್ವಾಮಿ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಯುವಕರು ಸುಲಭವಾಗಿ ನಶೆಗೆ ದಾಸರಾಗುತ್ತಿದ್ದಾರೆ. ಪೋಷಕರು ಮತ್ತು ಸಮಾಜವು ಅವರ ಮೇಲೆ ನಿಗಾ ಇಟ್ಟು ಸರಿಯಾದ ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ” ಎಂದರು.
ಪ್ರೊಫೆಸರ್ ಇಕ್ಬಾಲ್ ಮಾತನಾಡಿ, ಮಕ್ಕಳಲ್ಲಿ ವ್ಯಸನದ ಅಭ್ಯಾಸ ಹೇಗೆ ಆರಂಭವಾಗುತ್ತದೆ ಹಾಗೂ ಅದನ್ನು ತಡೆಗಟ್ಟಲು ಶಿಕ್ಷಣ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ರೈತ ಮುಖಂಡ ರಮೇಶ್ ಸಂಕ್ರಾಂತಿ ಮಾತನಾಡಿ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಕಾಲದಲ್ಲೇ ನಶೆ ಸೇವನೆಯನ್ನು ನಿಷೇಧಿಸಲಾಗಿತ್ತು ಎಂದು ಉಲ್ಲೇಖಿಸಿ, ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಜೀವನಶೈಲಿಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಕುರಿತು ಚಿಂತನೆ ವ್ಯಕ್ತಪಡಿಸಿದರು.
SDPI ದೊಡ್ಡಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್ ಮಾತನಾಡಿ: “ಯಾವುದೇ ಧರ್ಮದಲ್ಲೂ ನಶೆ ಸೇವಿಸುವುದು ನಿಷೇಧಿತವಾಗಿದೆ. ವ್ಯಸನವು ವ್ಯಕ್ತಿಯ ವಿಚಾರಶಕ್ತಿ, ಆರೋಗ್ಯ ಮತ್ತು ಧಾರ್ಮಿಕ ಜೀವನಕ್ಕೆ ಗಂಭೀರ ಆಘಾತ ಉಂಟುಮಾಡುತ್ತದೆ ಎಂದರು.”
ಡಾ. ವೆಂಕಟೇಶ್ ಪ್ರಸಾದ್ ಮಾತನಾಡಿ, ನಶೆ ಸೇವನೆಯ ಪರಿಣಾಮವಾಗಿ ಉಂಟಾಗುವ ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
SDPI ಜಿಲ್ಲಾ ನಾಯಕ ಅಯಾಜ್ ಅಹಮದ್ ಅವರು ನಶೆಯಿಂದ ಜೀವನ ನಾಶವಾಗಿದೆಯೆಂಬ ಯುವಕನ ಒಂದು ನಿದರ್ಶನವನ್ನು ವಿವರಿಸಿ, ಪೋಷಕರು ಹಾಗೂ ಸಮಾಜ ಹೆಚ್ಚು ಜಾಗೃತರಾಗಿರಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾನ್ ಅವರು ಮಕ್ಕಳ ಸುರಕ್ಷತೆ ಹಾಗೂ ವ್ಯಸನ ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತಂತೆ ಸ್ಪೂರ್ತಿದಾಯಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ SDPI ಜಿಲ್ಲಾ ಸದಸ್ಯ ಸೈಯದ್ ಬಾಬಾ, ದೊಡ್ಡಬಳ್ಳಾಪುರ ಕಾರ್ಯದರ್ಶಿ ಇಲಿಯಾಜ್ ಅಹಮದ್ ಮತ್ತಿತರರಿದ್ದರು.