
ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ (Ragi) ಖರೀದಿಗೆ ರೈತರ ನೋಂದಣಿ ಮುಕ್ತಾಯವಾಗಿರುವುದರಿಂದ ರಾಗಿ ಬೆಳೆದಿರುವ ರೈತರಿಗೆ ಅನಾನುಕೂಲವಾಗಲಿದ್ದು, ಕೂಡಲೇ ಸರ್ಕಾರ ರಾಗಿ ಖರೀದಿ ನೋಂದಣಿ ದಿನಾಂಕವನ್ನು ವಿಸ್ತರಿಸಬೇಕು ಹಾಗೂ ಇದಕ್ಕೆ ಪೂರಕವಾಗಿ ರಾಗಿ ಖರೀದಿ ಗುರಿ ಏರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದ ಎಪಿಎಂಸಿ ಎಪಿಎಂಸಿ ಖರೀದಿ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡರು, ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಕನಿಷ್ಠ ಬೆಲೆ ಯೋಜನೆ ಅಡಿಯಲ್ಲಿ ಕೆಲವು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಿತಿ ಹಾಗೂ ದಿನಾಂಕದ ನೆಪದಲ್ಲಿ ತಡೆಯೊಡ್ಡುವುದು ಸರಿಯಿಲ್ಲ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಳೆ ಕಾರಣದಿಂದಾಗಿ ರಾಗಿ ಕೊಯ್ಲಿನಲ್ಲಿ ರೈತರು ತೊಂಡಗಿಸಿಕೊಂಡಿದ್ದರಿಂದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆ ನಿಧಾನವಾಗಿದೆ. ಪೂರ್ಣ ಪ್ರಮಾಣದ ರೈತರ ನೋಂದಣಿ ಕಾರ್ಯವು ಇನ್ನು ಸಾಕಷ್ಟು ಪ್ರಮಾಣದಲ್ಲಿ ಇದ್ದು ಅಂತ ರೈತರು ಈ ಯೋಜನೆ ಅಡಿಯಲ್ಲಿ ಅನುಕೂಲವನ್ನು ಪಡೆಯಲು ಸಾಧ್ಯವಾಗಿಲ್ಲ.
ಈ ನಿಟ್ಟಿನಲ್ಲಿ ರಾಗಿ ಖರೀದಿ ನೋಂದಣಿ ದಿನಾಂಕವನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕು ಅಥವಾ ಒಂದು ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡಲು ವ್ಯವಸ್ಥೆ ಮಾಡಬೇಕು.
ರಾಗಿ ಖರೀದಿ ನೋಂದಣಿಗೆ ಕೊನೆಯ ದಿನಾಂಕ ತಿಳಿಸದೇ, ಕೆಲವೇ ದಿನಗಳು ಇದ್ದಾಗ ಏಕಾಏಕಿ ಹೇಳಿ ನಿಲ್ಲಿಸಲಾಗಿದೆ. ಕೊನೆಯ ದಿನಾಂಕದಂದು ಮಧ್ಯಾಹ್ನ 12 ಗಂಟೆಗೆ ಬಂದ್ ಆಗಿದೆ.
ಇನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಾವಿರಾರು ರೈತರು ನೋಂದಣಿ ಮಾಡಿಸುವವರಿದ್ದಾರೆ. ರಾಗಿ ಧಾನ್ಯಕ್ಕೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಸರ್ಕಾರ ರೈತರಿಂದ ರಾಗಿ ಖರೀದಿ ಮಾಡಿ, ಶೇಖರಣೆಗೆ ಆಧುನಿಕ ತಂತ್ರಜ್ಞಾನ ಬಳಸಿ ರೈತರಿಗೆ ನೆರವಾಗಬೇಕಿದೆ ಎಂದರು.
ಸ್ಥಳಕ್ಕೆ ಆಗಮಿಸಿದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರವೀಣ್ ಮಾತನಾಡಿ, ರಾಜ್ಯದಲ್ಲಿ 60 ಲಕ್ಷ ಕ್ವಿಂಟಾಲ್ ರಾಗಿ ಖರೀದಿ ಗುರಿ ಹೊಂದಲಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 12,687 ರೈತರಿಂದ 2,40,106 ಕ್ವಿಂಟಾಲ್ ನೋಂದಣಿಯಾಗಿದ್ದು, ಕಳೆದ ಸಾಲಿಗಿಂತ 60 ಸಾವಿರ ಕ್ವಿಂಟಾಲ್ ಹೆಚ್ಚಾಗಿದೆ.
ರೈತರು ರಾಗಿ ಖರೀದಿ ದಿನಾಂಕ ವಿಸ್ತರಿಸಲು ಹಾಗೂ ಖರೀದಿ ಗುರಿಯ ಮಿತಿ ಹೆಚ್ಚಿಸುವ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಿಗಮದ ಕೇಂದ್ರ ಕಚೇರಿಗೂ ವರದಿ ಕಳುಹಿಸಿದ್ದೇವೆ. ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುವ ವಿಚಾರವಾಗಿದ್ದು, ಬೆಳಗಾಗಿ ಅಧಿವೇಷನ ಮುಗಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.