ದೊಡ್ಡಬಳ್ಳಾಪುರ; ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ (MSV Public School) 77ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಭಾಗವಹಿಸಿದ್ದರು.
ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರವನ್ನು ಪ್ರಾರಂಭಿಸಲಾಯಿತು.
ಬಳಿಕ ಮಾತನಾಡಿದ ಇನ್ಸ್ಪೆಕ್ಟರ್ ಅಮರೇಶ್ ಗೌಡ, ನಮ್ಮ ದೇಶವನ್ನು ಗಣರಾಜ್ಯವನ್ನಾಗಿ ರೂಪಿಸುವಲ್ಲಿ ಹಲವು ಮಹನೀಯರ ಪರಿಶ್ರಮವಿದೆ. ಇದರಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪಾತ್ರ ಮಹೋನ್ನತವಾದದ್ದು.

ರಾಷ್ಟ್ರದ ಉನ್ನತ ಪದವಿ ಅರ್ಹತೆ ಇತುವ ಸಾಮಾನ್ಯ ಪ್ರಜೆಗಳಿಗೂ ದೊರಕುವಂತಿರಬೇಕು ಎಂಬುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಾನತೆಯ ತತ್ವವಾಗಿತ್ತು. ಅಂತಹ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ದೇಶದ ಕಾನೂನುಗಳನ್ನು ನಾವೆಲ್ಲರೂ ಗೌರವಿಸಬೇಕೆಂದ ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ಅವರು ಮಾತನಾಡಿ, ಸಂವಿಧಾನವು 1949 ನವಂಬರ್ 26 ರಂದು ಅಂಗೀಕರಿಸಲ್ಪಟ್ಟಿತು. ನಂತರ 1950 ಜನವರಿ 26 ರಂದು ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಜಾರಿಗೆ ಬಂದಿತು. 1930 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ್ಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದ ದಿನಾಂಕವಾಗಿತ್ತು. ಇದನ್ನು “ಸಂಪೂರ್ಣ ಸ್ವರಾಜ್” ಎಂದು ಕರೆಯಲಾಗುತ್ತದೆ.

ಜನವರಿ 26 ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾಯತ್ತತೆ ಪಡೆದ ಕ್ಷಣವನ್ನು ಸ್ಮರಿಸುವ ಮತ್ತು ಪ್ರಜಾಪ್ರಭುತ್ಚ ಮೌಲ್ಯಗಳನ್ನು ಗೌರವಿಸುವ ಪ್ರಮುಖ ರಾಷ್ಟ್ರೀಯ ಹಬ್ಬವಾಗಿದೆ. ಇದು ದೇಶದ ಏಕತೆ, ಸಮಾನತೆ ಮತ್ತು ಭ್ರಾತೃತ್ವವನ್ನು ಉತ್ತೇಜಿಸುತ್ತದೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ಆಡಳಿತವನ್ನು ಈ ದಿನ ಆಚರಿಸಲಾಗುತ್ತದೆ. ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನಪಿಸುತ್ತದೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಸಂಕಲ್ಪ ಮಾಡುವುದು ಈ ದಿನದ ಮತ್ತೊಂದು ವಿಶೇಷವಾಗಿದೆ. ಜೊತೆಗೆ ದೇಶಭಕ್ತಿ, ರಾಷ್ಟ್ರೀಯ ಹೆಮ್ಮೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಪುನರುಚ್ಛರಿಸುವ ದಿನವಾಗಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆಯಾದ “ವಂದೇ ಮಾತರಂ: ಗೀತೆಯ 150 ವರ್ಷಗಳ ಇತಿಹಾಸವನ್ನು ಹೊಂದಿರುವುದರಿಂದ ಅದನ್ನು ಗೌರವಿಸುವ ದಿನವಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿವಿಧ ನೃತ್ಯ, ಗಾಯನ, ರಾಷ್ಟ್ರನಾಯಕರ ಛದ್ಮವೇಷ, ಪಿರಮಿಡ್ ಪ್ರದರ್ಶನ, ಮಕ್ಕಳ ಪಥಸಂಚಲನ, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.

ಶಾಲೆಯ ಕಾರ್ಯದರ್ಶಿಗಳಾದ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್ ಎಸ್. ಟ್ರಸ್ಟೀ ನಯನಾ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ ಬಿ.ವಿ., ಶಿಕ್ಷಕ ವೃಂದ, ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.