ದೊಡ್ಡಬಳ್ಳಾಪುರ: ಚಳಿಗಾಲ ಮಾಸುವ ಮುನ್ನವೇ ಬೇಸಿಗೆ (Summer) ಬಿಸಿ ತಟ್ಟಲಾರಂಭಿಸಿದ್ದು, ಬಿಸಿಯ ಧಗೆಗೆ ಮಾನವರು, ವನ್ಯ ಜೀವಿಗಳು ಬಸವಳಿಯುವ ವಾತಾವರಣ ಕಂಡುಬರುತ್ತಿದೆ.
ಇದರ ಬೆನ್ನಲ್ಲೇ ಬೇಸಿಗೆಯಲ್ಲಿ ವನ್ಯ ಜೀವಿಗಳಿಗೆ ಉಂಟಾಗುವ ಆಹಾರ ಕೊರತೆ ನೀಗಿಸಲು ನಗರಸಭೆ ಸದಸ್ಯ ಮುನಿರಾಜು ಎಂ ಅವರು, ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿ ದಾಸೋಹ ಟ್ರಸ್ಟ್ ವತಿಯಿಂದ ಆಹಾರ ವಿತರಣೆ ಕಾರ್ಯವನ್ನು ಇಂದಿನಿಂದ ಆರಂಭಿಸುತ್ತಿದ್ದಾರೆ.
ಇದಕ್ಕಾಗಿಯೇ ಸಿದ್ಧತೆ ನಡೆಸಿದ್ದು, ನೂತನವಾಗಿ ಹಣ್ಣಿನ ಅಂಗಡಿ ತೆರೆದು ಅಲ್ಲಿ ಉಳಿಯುವ ಹಣ್ಣುಗಳನ್ನು ಪ್ರಾಣಿ ಪಕ್ಷಿಗಳಿಗೆ ವಿತರಿಸಲು ವಾಹನಗಳ ವ್ಯವಸ್ಥೆ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿದ ನಗರಸಭೆ ಸದಸ್ಯ ಮುನಿರಾಜು ಅವರು, ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿ ದಾಸೋಹ ಟ್ರಸ್ಟ್ ವತಿಯಿಂದ ಹಲವು ವರ್ಷಗಳಿಂದ ಕಾಡುಗಳ ಅಂಚಿಗೆ ತೆರಳಿ ಪ್ರಾಣಿ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡಲಾಗುತ್ತಿತ್ತು. ಆದರೆ ದಾನಿಗಳ ಕೊರತೆಯಿಂದ ಈ ಕಾರ್ಯ ಕೆಲ ದಿನ ಸ್ಥಗಿತಗೊಂಡಿತು.
ಜನರಿಗೆ ಹಣ ನೀಡಿದರೆ ಮತ ನೀಡುತ್ತಾರೆ, ಪ್ರಾಣಿ, ಪಕ್ಷಿಗಳಿ ದಾನ ಮಾಡಿದರೆ ಲಾಭವೇನು ಎಂದು ಚಿಂತಿಸುವವರೆ ಹೆಚ್ಚಾಗಿದ್ದಾರೆ. ಇದರ ನಡುವೆಯೂ ಬೆಸಿಗೆ ಆರಂಭದ ಹಿನ್ನೆಲೆಯಲ್ಲಿ, ಪ್ರಾಣಿ ಪಕ್ಷಿಗಳಿಗೆ ಆಹಾರದ ಪೂರೈಸಲು ಹಣ್ಣಿನ ಅಂಗಡಿ ತೆರೆಯಲಾಗುತ್ತಿದ್ದು, ಅದರಲ್ಲಿ ಬರುವ ಲಾಭದಲ್ಲಿ ಸ್ವಲ್ಪ ಪ್ರಾಮಾಣ ಪ್ರಾಣಿ ಪಕ್ಷಿಗಳ ಸೇವಾ ಕಾರ್ಯಕ್ಕೆ ಮೀಸಲು ಇಡಲಾಗುತ್ತಿದೆ.
ಅಲ್ಲದೆ ಪ್ರತಿ ದಿನ ಇಲ್ಲಿ ಉಳಿಯುವ ಹಣ್ಣನ್ನು ಕೊಂಡೊಯ್ದು ವನ್ಯಜೀವಿಗಳಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಆದರೆ ಇದಕ್ಕೂ ಕೆಲವರು ಅಡ್ಡಿಯುಂಟುಮಾಡುತ್ತಿದ್ದು, ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಮುನಿರಾಜು, ಯಾರು ಎಷ್ಟೇ ಅಡ್ಡಿ ಮಾಡಿದರು ಪ್ರಾಣಿಪಕ್ಷಿಗಳ ಸೇವೆ ಮತ್ತೆ ಮುಂದುವರೆಸಲಾಗುವುದು ಎಂದರು.