ದೊಡ್ಡಬಳ್ಳಾಪುರ: ಪಾಲನಜೋಗಿಹಳ್ಳಿಯ ಗಣೇಶಪ್ಪ ಚೌಟ್ರಿಯಲ್ಲಿ ಇಂದು ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದಿಂದ ಪದವಿ ಪ್ರದಾನ (Abacus graduation ceremony) ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಎಂಎಸ್ವಿ ಪಬ್ಲಿಕ್ ಶಾಲೆಯ (MSV Public School) ಅಧ್ಯಕ್ಷ ಸುಬ್ರಹ್ಮಣ್ಯ (Subramya) ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಬಾಕಸ್ ರೀತಿಯ ತರಬೇತಿಗಳು ಬಹಳಷ್ಟು ಸಹಕಾರಿ. ವಿದ್ಯಾರ್ಥಿಗಳಲ್ಲಿನ ಬುದ್ದಿಮತ್ತಿಕೆಯನ್ನು ಹೆಚ್ಚಿಸಲು ಇದು ಮುಖ್ಯ ಪಾತ್ರವಹಿಸುತ್ತದೆ.

ಅಬಾಕಸ್ ತರಬೇತಿಯಿಂದ ಗಣಿತ ಪಠ್ಯಕ್ಕೆ ಬಹಳಷ್ಟು ಸಹಕಾರಿಯಾಗಿದ್ದು, ಈ ರೀತಿಯಾದ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಮಕ್ಕಳನ್ನು ಸಿದ್ದಪಡಿಸಿರುವುದು, ಅಚ್ಚುಕಟ್ಟಾದ ವ್ಯವಸ್ಥೆ ಪ್ರಶಂಸನೀಯ.

ಪೋಷಕರು ವಿದ್ಯಾರ್ಥಿಗಳನ್ನು ಕೇವಲ ಪಠ್ಯ ಚಟುವಟಿಕೆಗೆ ಮಾತ್ರ ಸೀಮಿತವಾಗಿಸದೆ. ಪಠ್ಯತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಜೊತೆಗೆ ಉತ್ತಮವಾದ ನ್ಯೂಸ್ ಚಾನಲ್ಗಳನ್ನು ನೋಡಲು ಮಕ್ಕಳನ್ನು ಪ್ರೇರೇಪಿಸುವ ಕೆಲಸ ಮಾಡಬೇಕಿದೆ ಎಂದರು.

ಈ ವೇಳೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನಗರ ಪ್ರದೇಶಕ್ಕೆ ಸೀಮಿತವಾದ ಅಬಾಕಸ್ ಅನ್ನು ಪರಿಚಯಿಸಿ, ಯಶಸ್ವಿಯಾಗಿರುವ ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥೆ ಪುಷ್ಪ ಅವರ ಶ್ರಮ ಅಪಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀ ದೇವರಾಜ್ ಅರಸ್ ಅಂತರ ರಾಷ್ಟ್ರೀಯ ವಸತಿ ಶಾಲೆಯ ವ್ಯವಸ್ಥಾಪಕ ಎಸ್. ರವಿಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಪಡೆಯಲು 21 ವಯಸ್ಸಾಗಿರಬೇಕು. ಅಂತದರಲ್ಲಿ ಅಬಾಕಸ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಕೇವಲ 12 ರಿಂದ 13 ವಯಸ್ಸಿಗೆ ಪದವಿ ಪಡೆಯುತ್ತಿರುವುದು ಪ್ರಶಂಸನೀಯ ಎಂದರು.

ಅಬಾಕಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ನೀಲ್ಕಮಲ್ ಸ್ವರ್ಣಾಕರ್ ಮಾತನಾಡಿ, ಐದು ಮಕ್ಕಳಿಂದ ಆರಂಭವಾದ ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರ ಇಂದು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಹಾಗೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡುತ್ತಿರುವುದು, ತರಬೇತಿ ಮುಗಿಸಿದ 27 ಮಕ್ಕಳಿಗೆ ಪದವಿ ವಿತರಣೆ ಪ್ರಶಂಸನೀಯ.
ರಾಷ್ಟ್ರ ಮಟ್ಟದಲ್ಲಿ ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಮಾದರಿಯಾಗಿದೆ. ಗ್ರಾಮಾಂತರ ಪ್ರದೇಶವಾದರೂ ಕೂಡ, ಮಕ್ಕಳ ಸಾಧನೆ, ಪೋಷಕರ ಆಸಕ್ತಿ ಯಾವ ಜಿಲ್ಲಾ ಕೇಂದ್ರಗಳಿಗೆ ಕಡಿಮೆ ಇಲ್ಲದಂತಿದೆ ಎಂದರು.

ಅಬಾಕಸ್ ತರಬೇತಿ ಕುರಿತು ಪೋಷಕರಾದ ಕೆ.ಪಿ. ಮಧುಶ್ರೀ, ಕೆ.ಟಿ. ರಾಮಮೂರ್ತಿ, ದಿವ್ಯ, ಭೈರಮ್ಮ, ಸಂಜೀವ್ ರಾಜ್, ಉಮ್ಮೇ ಸಾಧಿಯ ಅವರು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ 27 ಮಕ್ಕಳಿಗೆ ಪದವಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಂಎಸ್ವಿ ಶಾಲೆಯ ಉಪಾಧ್ಯಕ್ಷ ಸ್ವರೂಪ್, ಉದ್ಯಮಿ ಸುಮಲತಾ ರಾಮಕೃಷ್ಣಪ್ಪ, ದೊಡ್ಡಬಳ್ಳಾಪುರ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥೆ ವಿ.ಎ.ಪುಷ್ಪ ಸೇರಿದಂತೆ ನೂರಾರು ಮಂದಿ ಪೋಷಕರು, ವಿದ್ಯಾರ್ಥಿಗಳು ಇದ್ದರು.