ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ (News channel) ಧರ್ಮಸ್ಥಳ ಪ್ರಕರಣ ಸಂಬಂಧಿಸಿ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಎಂಬುವರು ನೀಡಿದ ದೂರಿನನ್ವಯ ಎಸ್. ಜೆ.ಪಾರ್ಕ್ ಠಾಣೆಯಲ್ಲಿ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚರ್ಚೆಯ ವಿಷಯ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 13 ವರ್ಷಗಳಾಗಿದ್ದ ಹಿನ್ನೆಲೆ 2025ರ ಅಕ್ಟೋಬರ್ 9ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಮತ್ತು ಚರ್ಚಾ ವಸಂತ್ ಗಿಳಿಯಾರ್ ಭಾಗವಹಿಸಿದರು.
ಈ ಚರ್ಚೆ ವೇಳೆ ಕೆಲ ವಾಗ್ವಾದ ನಡೆದಿತ್ತು. ಕಾರ್ಯಕ್ರಮ ಮುಗಿದು ಹರೀಶ್ ಭೈರಪ್ಪ ಮನೆಗೆ ತೆರಳುವ ವೇಳೆ, ವಸಂತ್ ಗಿಳಿಯಾರ್ ತಮ್ಮ ಸಹಚರರನ್ನು ಸುದ್ದಿ ವಾಹಿನಿಯ ಕಚೇರಿಗೆ ಕರೆಸಿಕೊಂಡು ಹರೀಶ್ ಮತ್ತು ಇತರರೊಂದಿಗೆ ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಹರೀಶ್ ಭೈರಪ್ಪ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು,
ಇತ್ತೀಚೆಗೆ ಕನ್ನಡ ಟಿವಿಯ ಚರ್ಚಾ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ಪತ್ರಿಕಾ ಧರ್ಮದ ಮೌಲ್ಯಗಳನ್ನು ಬದಿಗೊತ್ತಿ, ನಿರಪೇಕ್ಷತೆಯ ಬದಲು ಪಕ್ಷಪಾತದ ಧೋರಣೆಯನ್ನು ತೋರಿಸಿದ ನಡವಳಿಕೆಯನ್ನು ಹಲವರು ಗಮನಿಸಿದ್ದೀರಿ.
ಚರ್ಚೆಯ ಹೆಸರಿನಲ್ಲಿ ಬೆಂಗಳೂರಿಗೆ ಬಂದು, ಮಾತನಾಡುವ ಬದಲು ಪೋಸ್ ಕೊಡುವುದು, ಗಂಭೀರ ವಿಚಾರಗಳನ್ನು ರೌಡಿ ಶೈಲಿಯಲ್ಲಿ ನಮ್ಮನ್ನೇ ಬೆದರಿಸಲು ಬಂದರೆ ಹೆದರಿ ಕೂರಲು ನಾವು ಸಾವರ್ಕರ್ ಸಂತತಿಯಲ್ಲ ಬಾಬಾ ಸಾಹೇಬರ ಆಶಯಗಳನ್ನು ಮುನ್ನಡೆಸುವ ಹುಲಿಗಳು ಅನ್ನೋದು ನೆನಪಿರಲಿ ಎಂದು ನಾನು ಅಂದೇ ಸ್ಪಷ್ಟವಾಗಿ ಹೇಳಿದ್ದೆ. ಇದನ್ನು ಸುಮ್ಮನೆ ಬಿಡೋದಿಲ್ಲ ಅನ್ನೋದು ಕೇವಲ ಮಾತಲ್ಲ ಅನ್ನೋದೂ ಈಗ ಸ್ಪಷ್ಟವಾಗಿದೆ.
ಕಾರ್ಯಕ್ರಮದ ಮುಖ್ಯಸ್ಥರಾದ ಶೋಭಾ ಮಳವಳ್ಳಿ ಅವರಿಗೆ ನೇರವಾಗಿ ಕೇಳಿದ್ದೆ FIR ಬಗ್ಗೆ ನಿಮ್ಮ ನಿಲುವೇನು ಎಂದು. ಅವರು“ಮಾಡಿಸಿ, ಒಂದಷ್ಟು ಬುದ್ಧಿ ಬರಲಿ” ಎಂಬ ಅವರ ಮಾತಿಗೆ ಗೌರವ ನೀಡಿ, ಕಾನೂನು ದಾರಿಯನ್ನೇ ಹಿಡಿದಿದ್ದೇನೆ.
ಇದು ಯಾರ ಮೇಲೂ ವೈಯಕ್ತಿಕ ದ್ವೇಷದಿಂದಲ್ಲ. ಆದರೆ ಪತ್ರಿಕೋದ್ಯಮ ಮತ್ತು ಬೆಂಗಳೂರನ್ನು ವೇದಿಕೆಯಾಗಿಸಿಕೊಂಡು ಅತಿರೇಕ ತೋರಿಸುವವರಿಗೆ ಒಂದು ಸಣ್ಣ ರಿಮೈಂಡರ್ ಅಷ್ಟೇ.
ಇನ್ನೂ ವಸಂತ್ ಮನೆಹಾಳ್ ಸ್ವಲ್ಪ ತಾಳ್ಮೆ ಇರಲಿ ಶಾಕ್ಗಳು ಸೀರಿಯಲ್ ಎಪಿಸೋಡ್ ತರಹ ಬರಬಹುದು ಇನ್ನೊಂದು 15 ರಿಂದ 20 ದಿದ ಕಾದು ನೋಡಿ ಎಂದು ಹರೀಶ್ ಬೈರಪ್ಪ ಬರೆದಿದ್ದಾರೆ.