ದೊಡ್ಡಬಳ್ಳಾಪುರ: ಸಹೋದರರು ಒಂದೇ ಕಡೆ ಹಾಕಿದ್ದ ಬಣವೆಗೆ (Haystack) ಆಕಸ್ಮಿಕವಾಗಿ ಬೆಂಕಿ (Fire) ತಗುಲಿ, ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತಾಲೂಕಿನ ಅರೂಢಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಆರೂಢಿ ಗ್ರಾಮದ ನಿವಾಸಿಗಳಾದ ಲಕ್ಷ್ಮೀಕಾಂತ್ ಮತ್ತು ನಂಜರೆಡ್ಡಿ ಎಂಬ ಸಹೋದರರು ಮನೆಗೆ ಹೊಂದಿಕೊಂಡಂತೆ ಜಾನುವಾರುಗಳಿಗೆಂದು ಹುಲ್ಲಿನ ಬಣವೆ ಹಾಕಿದ್ದರು.
ಗುರುವಾರ ರಾತ್ರಿ 10.30 ರ ಸುಮಾರಿಗೆ ಏಕಾಏಕಿ ಬಣವೆಗೆ ಬೆಂಕಿ ಬಿದ್ದಿದ್ದು, ಕ್ಷಣಮಾತ್ರದಲ್ಲಿ ಹುಲ್ಲಿನ ಬಣವೆ ಭಸ್ಮವಾಗಿದೆ.
ಬೆಂಕಿಯನ್ನು ನಂದಿಸಲು ಸುಮಾರು 100 ಮಂದಿ ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಅಂತಿಮವಾಗಿ ಗೌರಿಬಿದನೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಮನೆಗೆ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ.
ಘಟನೆಯಲ್ಲಿ ಲಕ್ಷ್ಮೀ ಕಾಂತ್, ನಂಜರೆಡ್ಡಿ ಸಹೋದರ ಸುಮಾರು 6 ಲೋಡ್ ಜೋಳದ ಸಪ್ಪೆ, 3 ಲೋಡ್ ರಾಗಿ ಹುಲ್ಲು ಹಾಗೂ ಒಂದು ಲೋಡ್ ಹುರುಳಿ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದ್ದು, ಅಪಾರ ನಷ್ಟವಾಗಿದೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಸಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.