ಮಂಡ್ಯ: ಜೆಡಿಎಸ್-ಬಿಜೆಪಿಯ (JDS -BJP) ಶಕ್ತಿ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯವಲ್ಲ. ಮೈತ್ರಿ ಶಾಶ್ವತವಾಗಿ ಉಳಿದುಕೊಳ್ಳಬೇಕು ಅನ್ನೋದಿದ್ರೆ ಕುಳಿತು ಚರ್ಚೆ ಮಾಡಿ, ಕುಮಾರಣ್ಣನ ಮನೆಬಾಗಿಲು ಯಾವಾಗಲೂ ತೆರೆದಿರುತ್ತೆ ಎಂದು ಮಾಜಿ ಸಚಿವ ನಾರಾಯಣಗೌಡ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಬಿಜೆಪಿ ರಾಷ್ಟ್ರೀಯ ಪಕ್ಷ, ಜೆಡಿಎಸ್ ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ನಾಯಕರು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿರುವ ವಿಚಾರ. ಎರಡೂ ಪಕ್ಷದ ಕಾರ್ಯಕರ್ತರ ಗೌರವ ಇದು. ಚಿತ್ರದುರ್ಗದಿಂದ ಚಾಮರಾಜನಗರದವರೆಗೆ NDA ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್-ಬಿಜೆಪಿಯ ಶಕ್ತಿ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯ ಅಲ್ಲ ಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
ಮುಂದುವರೆದು ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷದ ಚೌಕಟ್ಟಿನಲ್ಲಿ ಕರೆದು ಜಿಲ್ಲಾ ನಾಯಕರ ಜೊತೆ ಸಭೆ ಮಾಡಿದಾಗ ಸಾಮಾನ್ಯ ಕಾರ್ಯಕರ್ತ ಅಂತ ನಾನು ಹೇಳಿದ್ದೇನೆ. ಇದು ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಚಾರ ಅಲ್ಲ. ಅಂತಹ ಅನಿವಾರ್ಯ ಕೂಡ ಸೃಷ್ಟಿ ಆಗಿಲ್ಲ. ಕಾಮನ್ ಸೆನ್ಸ್ ಇರುವ ವ್ಯಕ್ತಿ ಯಾವ ರೀತಿ ಮಾತನಾಡಬೇಕು ಅನ್ನೋದ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ನನ್ನ ಚುನಾವಣೆ ಸೋಲಿನ ಮೇಲೆ ನಾಯಕತ್ವ ನಿರ್ಣಯ ಆಗಲ್ಲ
ಕೆ.ಆರ್.ಪೇಟೆಯಲ್ಲಿ ಏಕೈಕ ಶಾಸಕ ಮಂಜಣ್ಣ ಆಯ್ಕೆ ಆಗಿದ್ದಾರೆ. ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಹಜವಾಗಿ ಹೇಳಿದ್ದೆ ಅಷ್ಟೆ, ತಪ್ಪೇನು? ಮೈತ್ರಿ ಮೇಲ್ಮಟ್ಟದಲ್ಲಿ ಚರ್ಚೆ ಆಗಿದೆ. ಮೈತ್ರಿ ಶಾಶ್ವತವಾಗಿ ಉಳಿದುಕೊಳ್ಳಬೇಕು ಅನ್ನೋದಿದ್ರೆ ಬನ್ನಿ ಕುಳಿತು ಚರ್ಚೆ ಮಾಡಿ. ನನ್ನ ಚುನಾವಣೆ ಸೋಲಿನ ಮೇಲೆ ರಾಜಕಾರಣದ ನಾಯಕತ್ವ ಸೃಷ್ಟಿ ಆಗುತ್ತೋ, ಸೃಷ್ಟಿ ಆಗಿಲ್ವೋ ಅನ್ನೋದು ನಿರ್ಣಯ ಆಗಲ್ಲ ಎಂದು ಮಾಜಿ ಸಚಿವ ನಾರಾಯಣ ಗೌಡ ವಿರುದ್ಧ ನಿಖಿಲ್ ಕಿಡಿ ಕಾರಿದ್ರು.
ಇನ್ನು ಕುಮಾರಣ್ಣ ನಡತೆ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿದೆ.
ಯಾವತ್ತೂ ಕೂಡ ಕಾರ್ಯಕರ್ತರನ್ನ ಬೇದ-ಭಾವ ಮಾಡಿಲ್ಲ. ಕುಮಾರಣ್ಣ ವ್ಯಕ್ತಿತ್ವ ರಾಜ್ಯದ ಜನತೆಗೆ ಗೊತ್ತಿದೆ. ಜನರ ಕಷ್ಟ ಅರಿತು ಕೆಲಸ ಮಾಡ್ತಿರೋ ಕೇಂದ್ರ ಮಂತ್ರಿ ಅವರು. ಕುಮಾರಣ್ಣನ ಮೇಲೆ ಗೂಬೆ ಕೂರಿಸುವುದು ಬೇಡ ಎಂದರು. ಇನ್ನು ಸ್ಥಳೀಯ ಚುನಾವಣೆಯಲ್ಲಿ ಬ್ಯಾಲೆಟ್ ಪೆಪರ್ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆದ್ದರೆ ಅಂತಹ ರಾಜ್ಯಗಳಲ್ಲಿ ಇವಿಎಂ ಮಿಷನ್ ಚೆನ್ನಾಗಿ ವರ್ಕ್ ಆಗುತ್ತೆ. ಸೋಲುವ ಕಡೆ ಇವಿಎಂ ಟ್ಯಾಪಿಂಗ್ ಅಂತ ಹೇಳ್ತಾರೆ. ಟೆಕ್ನಾಲಜಿ ಬಹಳ ಮುಂದುವರಿದಿದೆ. ಈ ಸಂದರ್ಭದಲ್ಲಿ ಬ್ಯಾಲೆಟ್ ಪೇಪರ್ ಅಗತ್ಯತೆ ಸರಿಯಲ್ಲ. ಟೆಕ್ನಾಲಜಿ ಬಳಸಿಕೊಳ್ಳವುದನ್ನ ಬಿಟ್ಟು ಬ್ಯಾಲೆಟ್ ಪೇಪರ್ ಬಳಕೆ ಅರ್ಥವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು 2019ರಲ್ಲಿ ಒಬ್ಬ ನಿಖಿಲ್ ಕುಮಾರಸ್ವಾಮಿ ಸೋಲಿಸಲು ಯಾರ್ಯಾರು ಸಂಚು ರೂಪಿಸಿದ್ರು? ನನ್ನ ಚುನಾವಣೆಯ ಸೋಲಿನ ಮೇಲೆ ನನ್ನ ರಾಜಕಾರಣದ ನಾಯತ್ವ ಸೃಷ್ಟಿ ಆಗುತ್ತೋ, ಆಗಲ್ವೋ ಅನ್ನೋದು ನಿರ್ಣಯ ಆಗಲ್ಲ ಎಂದು ತಿರುಗೇಟು ನೀಡಿದರು.
ಫಲಾಯನ ಮಾಡಿ ಮಧ್ಯದಲ್ಲಿ ಹೋಗುವ ವ್ಯಕ್ತಿತ್ವ ನನ್ನದಲ್ಲ
ಸ್ಪರ್ಧೆ ವಿಚಾರಕ್ಕೆ ಮಾತನಾಡಿದ ಅವರು, ರಾಮನಗರ ಕುಮಾರಣ್ಣ ಮತ್ತು ದೇವೇಗೌಡರ ಮರುಸೃಷ್ಟಿ ಮಾಡಿರುವ ಪುಣ್ಯಭೂಮಿ. ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ. ನನ್ನ ನಂಬಿರುವ ಕಾರ್ಯಕರ್ತರ, ಮುಖಂಡರ ವರ್ಗ ಇದೆ. ಫಲಾಯನ ಮಾಡಿ ಮಧ್ಯದಲ್ಲಿ ಹೋಗುವ ವ್ಯಕ್ತಿತ್ವ ನನ್ನದಲ್ಲ ಎಂದು ಹೇಳಿದರು.
ಮಂಡ್ಯ ಜಿಲ್ಲೆ ನಮ್ಮದೆ ನಮ್ಮನ್ನ ಪ್ರೀತಿಸುವ ನಾಡು
ನಮ್ಮ ಕಾರ್ಯಕರ್ತರು ಎಲ್ಲಿ ಬೆಳಿಸಿದ್ದಾರೋ ಅದನ್ನ ಅರಿತು ಹೆಜ್ಜೆ ಹಾಕುವ ಜವಾಬ್ದಾರಿ ಇದೆ, ಕರ್ತವ್ಯ ಇದೆ.
ಹಾಗೇ ಮುಂದುವರಿಯುತ್ತೇವೆ. ಸಮಯ ಬಂದಾಗ ಎಲ್ಲ ಗೊತ್ತಾಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.