ಕೆ.ಎಂ.ಸಂತೋಷ್, (ಆರೂಢಿ), ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಾತ್ಯತೀತ ಜನತಾದಳ (JDS) ಪಕ್ಷದ ಅಧ್ಯಕ್ಷರಾಗಿ ಮಂಜುನಾಥ್ ಕೆ.ವಿ (Manjunath K.V) ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ತನು, ಮನ, ಧನವನ್ನ ಅರ್ಪಿಸಿದ್ದ ಬಿ.ಮುನೇಗೌಡ (B. MuneGowda) ಅವರನ್ನು ತಬ್ಬಲಿ ಮಾಡಲಾಗಿದೆ ಎಂಬ ಆಕ್ರೋಶ ತೀವ್ರವಾಗಿದೆ.
ಹೌದು ಬಿ.ಮುನೇಗೌಡ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅವರ ಸ್ಥಾನಕ್ಕೆ ದೇವನಹಳ್ಳಿಯ ಮಂಜುನಾಥ್ ಆಯ್ಕೆಯಾಗಿದ್ದಾರೆ.

ಈ ಕುರಿತು ಜನವರಿ 29ರಂದು ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ನೇಮಕಾತಿ ಆದೇಶಕ್ಕೆ ಸಹಿ ಮಾಡಿದ್ದಾರೆ. ಆದರೆ 9 ದಿನಗಳ ಬಳಿಕ ಈ ಆದೇಶ ಹೊರಬಿದ್ದಿದೆ. ಕಾರಣ ನಿಗೂಢವಾಗಿದೆ.
ಈ ಆದೇಶದ ಮೂಲಕ ಬಿ.ಮುನೇಗೌಡ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ತಮಗಿರುವ ಪ್ರಬಲವಾದ ಅಡ್ಡಿ ದೂರಾಗಲಿದೆ ಎಂಬ ಉದ್ದೇಶ ಹೊಂದಿರುವವರಿಗೆ ಗೆಲುವಾಗಿದೆ.
ಅಷ್ಟೇ ಅಲ್ಲದೆ ಕಳೆದ ಕೆಲ ದಿನಗಳಿಂದ ಒಳಗೊಳಗೆ ನಡೆಯುತ್ತಿದ್ದ, ಇತ್ತೀಚೆಗಷ್ಟೇ ಕಾರ್ಯಕರ್ತರ ಸಭೆಯಲ್ಲಿ ಸ್ಪೋಟಗೊಳ್ಳಲು ಕಾರಣವಾಗಿದ್ದ ಪಕ್ಷದಲ್ಲಿನ ಜೆಡಿಎಸ್ ಮುಖಂಡರ ಬಣಬಡಿದಾಟದಲ್ಲಿ ಒಂದು ಬಣಕ್ಕೆ ದೊಡ್ಡ ಮಟ್ಟದ ಗೆಲುವಾಗಿದೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ವ್ಯಾಪಕವಾಗಿದೆ.
ಮುಂದಿನ ಜೆಡಿಎಸ್ ಪಕ್ಕದಲ್ಲಿನ ಬೆಳವಣಿಗೆ ಅಚ್ಚರಿ ಮೂಡಿಸಿದೆ.