ಚಿಕ್ಕಬಳ್ಳಾಪುರ: ಮಹಾಶಿವರಾತ್ರಿಯನ್ನು (Mahashivratri) ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲು ಚಿಕ್ಕಬಳ್ಳಾಪುರ ಸದ್ಗುರು ಸನ್ನಿಧಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು.

ಬೆಳಿಗ್ಗೆ 6 ಗಂಟೆಯಿಂದಲೇ ಹತ್ತಾರು ಸಾವಿರ ಭಕ್ತರು ಮತ್ತು ನೂರಾರು ಸ್ವಯಂಸೇವಕರು ಆದಿಯೋಗಿ ಮತ್ತು ಯೋಗೇಶ್ವರ ಲಿಂಗ ದೇವಸ್ಥಾನಕ್ಕೆ ಶಿವನ ಅನುಗ್ರಹ ಪಡೆಯಲು ಭೇಟಿ ನೀಡುತ್ತಿದ್ದರು. ಇದರಿಂದಾಗಿ ಯೋಗದ್ವಾರದಿಂದ ಸದ್ಗುರು ಸನ್ನಿಧಿಯವರೆಗೆ 3 ಕಿ.ಮೀ ಉದ್ದದ ಸಾಲು ಕಂಡುಬಂದಿತು.
2026ರ ಮಹಾಶಿವರಾತ್ರಿ ಪ್ರಯುಕ್ತ, ಫೆಬ್ರವರಿ 14 ರಿಂದ 16 ರವರೆಗಿನ ಮೂರು ದಿನಗಳಲ್ಲಿ ಚಿಕ್ಕಬಳ್ಳಾಪುರದ ಆದಿಯೋಗಿ ಮತ್ತು ಆಶ್ರಮಕ್ಕೆ ಹತ್ತಾರು ಸಾವಿರ ಜನರು ಭೇಟಿ ನೀಡುವ ಮೂಲಕ ಅಭೂತಪೂರ್ವ ಭಕ್ತಿಯ ಪ್ರವಾಹಕ್ಕೆ ಸಾಕ್ಷಿಯಾದರು. ಇದರಲ್ಲಿ ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯರು, ಬೆಂಗಳೂರಿನಿಂದ ಆಗಮಿಸಿದ ಭಕ್ತರು ಹಾಗೂ ದೇಶ-ವಿದೇಶಗಳ ಪ್ರವಾಸಿಗರು ಸೇರಿದ್ದರು.

ಭಕ್ತರಿಗೆ ಮಹಾಶಿವರಾತ್ರಿಯ ಅವಿಸ್ಮರಣೀಯ ಅನುಭವವನ್ನು ನೀಡಲು ಮತ್ತು ಜನಸಂದಣಿಯನ್ನು ನಿರ್ವಹಿಸಲು ನೂರಾರು ಈಶ ಸ್ವಯಂಸೇವಕರು, ದೊಡ್ಡ ಸಂಖ್ಯೆಯ ಪೊಲೀಸರು, ಎನ್ಸಿಸಿ ಕೆಡೆಟ್ಗಳು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ಗಳೊಂದಿಗೆ ಕೈಜೋಡಿಸಿದರು.
ಭಕ್ತರು ಯೋಗೇಶ್ವರ ಲಿಂಗಕ್ಕೆ ಕ್ಷೀರಾಭಿಷೇಕ, ಬಿಲ್ವ ಪತ್ರೆ, ಪುಷ್ಪಗಳು, ತೆಂಗಿನಕಾಯಿ ಮತ್ತು ದೀಪಗಳ ಅರ್ಪಣೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದರು. ಇದರ ಜೊತೆಗೆ, ತನ್ನ ಪ್ರಭುವಿನೆಡೆಗಿನ ಭಕ್ತಿಗೆ ನಿಶ್ಚಲ ಸಾಕ್ಷಿಯಾದ 21 ಅಡಿಯ ಭವ್ಯ ನಂದಿಗೆ ತೈಲ ಅರ್ಪಣೆಯನ್ನು ಸಹ ಮಾಡಿದರು.
ಈ ವರ್ಷದ ಮಹಾಶಿವರಾತ್ರಿ ನೇರಪ್ರಸಾರವು ಸೈನ್ ಲ್ಯಾಂಗ್ವೇಜ್ (ಸಂಕೇತ ಭಾಷೆ) ನಲ್ಲಿಯೂ ಲಭ್ಯವಿತ್ತು. ಇದರಿಂದಾಗಿ ಶ್ರವಣದೋಷವುಳ್ಳವರು ಸಹ ವಿಶ್ವದಾದ್ಯಂತದ ಲಕ್ಷಾಂತರ ಜನರೊಂದಿಗೆ ಈ ಪವಿತ್ರ ರಾತ್ರಿಯ ಅನುಭವ ಪಡೆಯಲು ಸಾಧ್ಯವಾಯಿತು.
ಸಾವಿರಾರು ಜನರ ಹರ್ಷೋದ್ಗಾರದ ನಡುವೆ ಆದಿಯೋಗಿ ದಿವ್ಯ ದರ್ಶನವು ಅನಾವರಣಗೊಂಡಿತು. ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ, ನೇರಪ್ರಸಾರದ ಮೂಲಕ ಈಶ ಯೋಗ ಕೇಂದ್ರದ ಆಚರಣೆಗಳಲ್ಲಿ ಭಕ್ತರು ಸಂಭ್ರಮದಿಂದ ಭಾಗವಹಿಸಿದರು.
ಈಶ ಯೋಗ ಕೇಂದ್ರದ ಆದಿಯೋಗಿಯ ಸಮ್ಮುಖದಲ್ಲಿ ಸದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಶಕ್ತಿಯುತ ಮಧ್ಯರಾತ್ರಿಯ ಧ್ಯಾನದಲ್ಲಿ ಭಕ್ತರು ಪಾಲ್ಗೊಂಡಿದ್ದರಿಂದ, “ಓಂ ನಮಃ ಶಿವಾಯ” ಎಂಬ ಮಹಾಮಂತ್ರವು ಇಡೀ ರಾತ್ರಿಯ ವಾತಾವರಣವನ್ನು ಆವರಿಸಿತ್ತು.
ಈಶ ಯೋಗ ಕೇಂದ್ರದಲ್ಲಿ ನಡೆದ 2026 ರ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ಸದ್ಗುರುಗಳು ಗೌರವಾನ್ವಿತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಸ್ವಾಗತಿಸಿದರು.