ಬೆಂಗಳೂರು: ಹದಿನಾರು ಬಜೆಟ್ ಗಳನ್ನು ಮಂಡಿಸಿ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿರುವ ಭೂಪರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು ಹರಿಸಿದರು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು (H.D. Deve Gowda) ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಗುರುವಾರ ನಡೆದ ಮಾಲೂರು ವಿಧಾನಸಭೆ ಕ್ಷೇತ್ರದ ಹಿರಿಯ ಮುಖಂಡರಾದ ಹೂಡಿ ವಿಜಯಕುಮಾರ್ ಅವರ ಪಕ್ಷ ಸೇರ್ಪಡೆ ಹಾಗೂ ಅವರ ನೇತೃತ್ವದ ಸ್ವಾಭಿಮಾನಿ ಜನತಾ ಪಕ್ಷದ ವಿಲೀನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಜಿ ಪ್ರಧಾನಿಗಳು ಮಾತನಾಡಿದರು.
ನದಿಯ ನೀರು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ರಾಜಧಾನಿಯ ಕೊಚ್ಚೆ ನೀರನ್ನು ಆ ಎರಡು ಜಿಲ್ಲೆಗಳ ಜನರಿಗೆ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಕೋಲಾರದ ಟೊಮ್ಯಾಟೊ ಎಂದರೆ ಜಗತ್ತಿಗೇ ಪ್ರಸಿದ್ಧಿ. ಆದರೆ, ಈಗ ಅದನ್ನು ತಿನ್ನಬೇಡಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆ ಆ ಗಲೀಜು ನೀರು ಮತ್ತು ಕಾಂಗ್ರೆಸ್ ಸರಕಾರವೇ ಕಾರಣ ಎಂದು ದೇವೇಗೌಡರು ದೂರಿದರು.
ನಾನು ಈ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ಖಖಾನೆ ಖಾಲಿ ಮಾಡಿದ್ದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕೋಲ್ಕತಾದ ಪಿಯರ್ ಲೆಸ್ ಕಂಪನಿಯಿಂದ ₹200 ಕೋಟಿ ಸಾಲ ತಂದಿದ್ದರು. ಅಂಥ ಸಂದರ್ಭದಲ್ಲಿ ನಾನು ಈ ರಾಜ್ಯವನ್ನು ಹೇಗೆ ನಡೆಸಿರಬೇಕು ಎಂಬುದನ್ನು ಊಹೆ ಮಾಡಿಕೊಳ್ಳಿ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಅವತ್ತು ಇವತ್ತಿನ ಮುಖ್ಯಮಂತ್ರಿಗಳನ್ನು ನನ್ನ ಸಂಪುಟದಲ್ಲಿ ಹಣಕಾಸು ಮಂತ್ರಿ ಆಗಿದ್ದರು. ಎಲ್ಲವೂ ಅವರಿಗೂ ಗೊತ್ತಿದೆ. ಧರ್ಮಸಿಂಗ್ ಅವರು ಹಣಕಾಸು ಖಾತೆ ಮಾತ್ರ ಕೊಟ್ಟು ಅಬಕಾರಿ ಖಾತೆ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಮಹಾನುಭಾವರು ಮುನಿಸಿಕೊಂಡಿದ್ದರು ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಎಂಬ ಅತ್ಯುತ್ತಮ ಯೋಜನೆಗಳನ್ನು ಘೋಷಿಸಿದ್ದರು. ಉಚಿತ ಮನೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉದ್ಯೋಗ ಎಲ್ಲವನ್ನು ಭರವಸೆ ನೀಡಿದ್ದರು. ಕಾಂಗ್ರೆಸ್ ನವರು ಕೊನೆ ಘಳಿಗೆಯಲ್ಲಿ ಗ್ಯಾರಂಟಿ, ಫ್ರೀ ಫ್ರೀ ಎಂದರು. ಜನರು ಮಾರು ಹೋದರು. ಈಗ ನೋಡಿದರೆ ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆ ಆಗುತ್ತವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳು ಗುಡುಗಿದರು.
ಜೆಡಿಎಸ್ ಬಲಿಷ್ಟವಾಗಿದೆ. ನಾವು ಎನ್ಡಿಎ ಮೈತ್ರಿಯಲ್ಲಿ ಇದ್ದೇವೆ. ಮೈತ್ರಿಯನ್ನು ಉಳಿಸಿಕೊಳ್ಳುತ್ತೇವೆ ಹಾಗೂ ಪಕ್ಷವನ್ನು ಕೂಡ ಕಟ್ಟುತ್ತೇವೆ. ಅದಕ್ಕೆ ಮಾಲೂರು ಮುಖಂಡರ ಸೇರ್ಪಡೆ ಒಂದು ಆರಂಭವಷ್ಟೇ ಎಂದು ಮಾಜಿ ಪ್ರಧಾನಿಗಳು ಹೇಳಿದರು.
8 ವರ್ಷ ಮುಖ್ಯಮಂತ್ರಿ, ಆದರೂ ನಿರ್ಧಾರ ಇಲ್ಲ ಏಕೆ..?
ಬಳಿಕ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಎಂಟು ವರ್ಷಗಳಿಂದ ಮುಖ್ಯಮಂತ್ರಿ ಆಗಿದ್ದಾರೆ. ದೇವರಾಜು ಅರಸು ಅವರ ದಾಖಲೆ ಮುರಿದಿದ್ದಾರೆ. ಅಹಿಂದಾ ನಾಯಕರು ಎಂದು ಹೇಳಿಕೊಳ್ಳುತ್ತಾರೆ. ಜಾತಿ ಜಾತಿಯ ಹೆಸರು ಹೇಳಿಕೊಂಡು ರಾಜಕೀಯ ಲಾಭ ಮಾಡಿಕೊಂಡಿದ್ದಾರೆ. ಆದರೂ ಈವರೆಗೆ ಒಳ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಸಾಮಾಜಿಕ ನ್ಯಾಯ ಎನ್ನುವ ಅವರು ಚುನಾವಣೆ ಬಂದಾಗ ಅಥವಾ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದಾ ನೆನಪಾಗುತ್ತದೆ. ಆಮೇಲೆ ಅವರೆಲ್ಲೋ, ಅಹಿಂದಾ ಎಲ್ಲೋ? ಇದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎಂಬುದನ್ನು ಅಕ್ಷರಶಃ ಪಾಲಿಸಿ ಅದರಂತೆ ನಡೆದವರು ದೇವೇಗೌಡರು ಮಾತ್ರ. ತಳಮಟ್ಟದ ಎಷ್ಟೋ ಸಮುದಾಯಗಳಿಗೆ ಅವರು ಮೀಸಲು ಸೌಲಭ್ಯ ನೀಡಿ ಅವಕಾಶದ ಬಾಗಿಲುಗಳನ್ನು ತೆರೆದರು. ಅದರ ಫಲ ಇವತ್ತು ಸರಕಾರಿ ನೇಮಕಾತಿ, ವಿಧಾಸಭೆಯಲ್ಲಿ ಕಾಣುತ್ತಿದೆ. ಆದರೆ, ಯಾವ ಸಮುದಾಯಕ್ಕೂ ಏನೂ ಮಾಡದವರು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ನಾನು ಬಹಳ ದಿನದಿಂದಲೂ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ಕಳೆದ ಎಂಟು – ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದ ಸಮುದಾಯಗಳು ಯಾವುವು? ಎಷ್ಟು ಪ್ರಮಾಣದಲ್ಲಿ ಪಡೆದಿದ್ದಾರೆ? ಎಂಬ ಬಗ್ಗೆ ಪಟ್ಟಿ ಕೊಡಿ ಎಂದು ಕೇಳುತ್ತಿದ್ದೇನೆ. ಬಹುಶಃ ಈ ಪಟ್ಟಿಯನ್ನು ಅವರು ಹೊರಕ್ಕೆ ಬಿಟ್ಟರೆ ಈ ಮುಖ್ಯಮಂತ್ರಿಯ ಅಸಲಿ ಬಣ್ಣ ಗೊತ್ತಾಗುತ್ತದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ರಾಜ್ಯದ ಎಲ್ಲಾ ಸಮುದಾಯಗಳಿಗೆ ನಾನು ಒಂದು ಕರೆ ನೀಡಲು ಬಯಸುತ್ತೇನೆ. ಜನಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಐದು ವರ್ಷಗಳ ಸರಕಾರಕ್ಕೆ ಆಶೀರ್ವಾದ ಮಾಡಿ. ಇವರು ಮಾಡಿರುವ ಅನ್ಯಾಯ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಮೀಸಲಾತಿ ವಿಷಯ ಕೆದಕಿ ರಾಜಕೀಯ ಲಾಭ ಮಾಡಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ಸಾಮಾಜಿಕವಾಗಿ ಅಶಾಂತಿ, ಸಂಘರ್ಷ, ಅಪನಂಬಿಕೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇವತ್ತು ಸಂಪುಟದಲ್ಲಿ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಒಳ ಮೀಸಲು ಬಗ್ಗೆ ಸಂಪುಟದಲ್ಲಿ ಎರಡು ಮೂರು ಗುಂಪುಗಳು ಆಗಿವೆ. ಇದು ಅನಾರೋಗ್ಯಕರ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಎಂ. ಕೃಷ್ಣಾರೆಡ್ಡಿ, ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕ ಮತ್ತು ಕೋಲಾರ ಜಿಲ್ಲಾಧ್ಯಕ್ಷ ವೆಂಕಟ ಶಿವಾರೆಡ್ಡಿ, ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಹೂಡಿ ವಿಜಯಕುಮಾರ್ ಅವರಿಗೆ ಪಕ್ಷದ ಬಾವುಟವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಹೂಡಿ ವಿಜಯಕುಮಾರ್ ಅವರು ತಮ್ಮ ಸ್ವಾಭಿಮಾನಿ ಜನತಾ ಪಕ್ಷವನ್ನು ಜೆಡಿಎಸ್ ನಲ್ಲಿ ವಿಲೀನ ಮಾಡಿದರಲ್ಲದೆ, ಅವರ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭೆ ಸದಸ್ಯ ಮಲ್ಲೇಶ್ ಬಾಬು, ಹೂಡಿ ವಿಜಯ್ ಕುಮಾರ್, ಪ್ರಭಾಕರ್, ರಾಮೇಗೌಡ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.