ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸುವ ಶಕ್ತಿ ಹೊಂದಿದೆ ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

ನಾಗ್ಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ಶಾಂತಿಯನ್ನು ಉತ್ತೇಜಿಸುವಲ್ಲಿ ಭಾರತದ ಪಾತ್ರವನ್ನು ವಿವಿಧ ದೇಶಗಳ ಧ್ವನಿಗಳು ಗುರುತಿಸುತ್ತಿವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ.
“ಯುದ್ಧವು ಸ್ವಾರ್ಥ ಹಿತಾಸಕ್ತಿಯ ಪರಿಣಾಮವಾಗಿದೆ, ಜಗತ್ತಿಗೆ ಸಾಮರಸ್ಯ ಬೇಕು, ಸಂಘರ್ಷವಲ್ಲ” ಎಂದು ಭಾಗವತ್ ಹೇಳಿದ್ದು, ಸುಮಾರು 2,000 ವರ್ಷಗಳಿಂದ ಜಗತ್ತು ಸಂಘರ್ಷಗಳನ್ನು ಪರಿಹರಿಸಲು ವಿವಿಧ ವಿಧಾನಗಳನ್ನು ಪ್ರಯತ್ನಿಸಿದೆ, ಆದರೆ ಅನೇಕ ಸವಾಲುಗಳು ಉಳಿದಿವೆ ಎಂದು ಅವರು ಹೇಳಿದ್ದಾರೆ.
ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರಗಳು ಮತ್ತು ಶ್ರೇಷ್ಠತೆ ಮತ್ತು ಕೀಳರಿಮೆಯ ಕಲ್ಪನೆಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದು ಅವರು ಗಮನಸೆಳೆದ್ದಾರೆ.
ಭಾರತದ ಸಾಂಪ್ರದಾಯಿಕ ತತ್ವಶಾಸ್ತ್ರವು ಏಕತೆ ಮತ್ತು ಪರಸ್ಪರ ಸಂಬಂಧವನ್ನು ಉತ್ತೇಜಿಸುತ್ತದೆ ಎಂದು ಭಾಗವತ್ ಎತ್ತಿ ತೋರಿಸಿದ್ದಾರೆ.
ಭಾರತೀಯ ಚಿಂತನೆಯು ಎಲ್ಲರೂ ಸಂಪರ್ಕ ಹೊಂದಿದ್ದಾರೆ ಎಂಬ ಕಲ್ಪನೆಯನ್ನು ಆಧರಿಸಿದೆ ಮತ್ತು ಆಧುನಿಕ ವಿಜ್ಞಾನ ಕೂಡ ನಿಧಾನವಾಗಿ ಈ ತಿಳುವಳಿಕೆಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಧಿಕಾರ ಹೋರಾಟಗಳಿಂದ ಶಾಶ್ವತ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ, ಬದಲಾಗಿ ಏಕತೆ, ಶಿಸ್ತು ಮತ್ತು ಧರ್ಮ ಪಾಲನೆಯಿಂದ ಮಾತ್ರ ಸಾಧ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ಧರ್ಮವು ಕೇವಲ ಧರ್ಮಗ್ರಂಥಗಳಿಗೆ ಸೀಮಿತವಾಗಿರಬಾರದು, ದೈನಂದಿನ ನಡವಳಿಕೆಯಲ್ಲಿ ಪ್ರತಿಫಲಿಸಬೇಕು.
ಭಾರತ ಮತ್ತು ಪ್ರಪಂಚದ ಇತರ ಭಾಗಗಳ ನಡುವಿನ ವ್ಯತ್ಯಾಸವನ್ನು ಚಿತ್ರಿಸುತ್ತಾ ಹೇಳಿರುವ ಭಾಗವತ್ ಅವರು, “ಭಾರತವು ಮಾನವೀಯತೆಯ ನಿಯಮವನ್ನು ಅನುಸರಿಸುತ್ತದೆ, ಇತರರು ಅತ್ಯುತ್ತಮವಾದವರ ಬದುಕುಳಿಯುವಿಕೆಯನ್ನು ನಂಬುತ್ತಾರೆ.”
ಜಗತ್ತಿನಲ್ಲಿ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುವ ಜವಾಬ್ದಾರಿ ಭಾರತಕ್ಕಿದೆ ಎಂದು ಭಾಗವತ್ ಹೇಳಿದ್ದಾರೆ. “ಭಾರತದ ಜನರು ಮಾನವೀಯತೆಯ ನಿಯಮವನ್ನು ಅನುಸರಿಸುತ್ತಾರೆ, ಆದರೆ ಉಳಿದ ಪ್ರಪಂಚವು ಕಾಡಿನ ನಿಯಮವನ್ನು ಅನುಸರಿಸುತ್ತದೆ. ಎಡವಿ ಬೀಳುತ್ತಿರುವ ಜಗತ್ತಿನಲ್ಲಿ ಧರ್ಮದ ಅಡಿಪಾಯವನ್ನು ನೀಡುವ ಮೂಲಕ ಸಮತೋಲನವನ್ನು ಪುನಃಸ್ಥಾಪಿಸುವುದು ನಮ್ಮ ಕೆಲಸ” ಎಂದು ಅವರು ಹೇಳುವ ಮೂಲಕ ಪ್ರಧಾನಿ ಮೋದಿ ಅವರ ಜವಾಬ್ದಾರಿ ಏನೆಂದು ನೆನಪಿಸಿದ್ದಾರೆಂದು ನೆಟ್ಟಿಗರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.