ದೊಡ್ಡಬಳ್ಳಾಪುರ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಲಿ (KIADB) ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ ಉದ್ದೇಶಿಸಿರುವ 2100 ಎಕರೆ ಭೂ ಸ್ವಾಧೀನದ ವಿರುದ್ಧ ರೈತರು ಕೆರಳಿದ್ದು, ಬಿರು ಬಿಸಿಲಿನಲ್ಲಿಯೂ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟುಹಿಡಿದಿದ್ದರು, ಅಧಿಕಾರಿಗಳು ರೈತರನ್ನು ಕಡೆಗಣಿಸುವುದನ್ನು ಸಹಿಸುವುದಿಲ್ಲ, ರೈತರು ಭೂಮಿ ಕಸೊದುಕೊಂಡರೆ ಅನ್ನ ಆಹಾರ ಹೇಗೆ ದೊರೆಯುತ್ತದೆ. ಸ್ಥಳಕ್ಕೆ ಡಿಸಿ ಬರದಿದ್ದರೆ ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ದೊಡ್ಡಬೆಳವಂಗಲ ಇನ್ಸ್ಪೆಕ್ಟರ್ ಕಲ್ಲಪ ಎಸ್ ಖರಾತ ಅವರು ತಹಶಿಲ್ದಾರರ ಮಲ್ಲಪ್ಪ ಯರಗೊಳ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ವಿಷಯ ತಿಳಿದ ತಹಶಿಲ್ದಾರರ ಮಲ್ಲಪ್ಪ ಯರಗೊಳ ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿ ಬಾಲಪ್ಪ ಅವರು ರೈತರಿಂದ ಮನವಿ ಪತ್ರ ಸ್ವೀಕರಿಸಿದರು.
ಬಳಿಕ ಮಾತನಾಡಿದ ವಿಶೇಷ ಭೂ ಸ್ವಾಧೀನ ಅಧಿಕಾರಿ ಬಾಲಪ್ಪ, ರೈತರು ಆತಂಕ ಪಡುವ ಅಗತ್ಯವಿಲ್ಲ, ಭೂ ಸ್ವಾಧೀನ ಪ್ರಕ್ರಿಯೆ ನೋಟಿಫಿಕೇಷನ್ ಆಗಿಲ್ಲ. ತಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಖಾನ್ ಮಠದಿಂದ ದೊಡ್ಡಬೆಳವಂಗಲ ನಾಡ ಕಚೇರಿವರೆಗೆ ಜಾಥಾ ನಡೆಸಿದ ರೈತರು, ನಾಡ ಕಚೇರಿ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ರೈತ ಸಂಘದ ಪ್ರಭ ಬೆಳವಂಗಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಿಗಮದ ಅಧ್ಯಕ್ಷ ವಿಶ್ವನಾಥ ರೆಡ್ಡಿ ಸೇರಿದಂತೆ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ ನಾರನಹಳ್ಳಿ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.