ಚಿಂತಾಮಣಿ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ನಿರತರಾಗಿದ್ದ ಶಿಕ್ಷಕ ವೈ.ವಿ. ರಾಮಕೃಷ್ಣ (58 ವರ್ಷ) ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ.
ಮೃತ ಶಿಕ್ಷಕ ರಾಮಕೃಷ್ಣ ಯಗವಕೋಟೆ ಕ್ಲಸ್ಟರ್ ವ್ಯಾಪ್ತಿಯ ದಿಗವಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು.
ನಿವೃತ್ತಿ ಅಂಚಿನಲ್ಲಿದ್ದ ರಾಮಕೃಷ್ಣ ಅವರಿಗೆ ಯ್ಯಾಂಡ್ರೈಡ್ ಮೊಬೈಲ್ ಬಳಕೆಯೂ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಸಮೀಕ್ಷಾ ಕಾರ್ಯ ತುಂಬಾ ನಿಧಾನಗತಿಯಲ್ಲಿ ಮಾಡುತ್ತಿದ್ದರಂತೆ. ನಿತ್ಯದ ಸಮೀಕ್ಷಾ ಸಾಧನೆ ಕಡಿಮೆಯಾಗಿತ್ತು.
ಹಿರಿಯ ಅಧಿಕಾರಿಗಳಿ ನೋಟಿಸ್ ಕೊಡುವುದಾಗಿ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಸಮೀಕ್ಷೆಯಲ್ಲಿ ನಿಗದಿತ ಗುರಿ ಸಾಧಿಸದಿದ್ದರೆ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂಬ ಸುತ್ತೋಲೆಯಿಂದ ಆತಂಕ, ಗಾಬರಿಗೆ ಒಳಗಾಗಿ. ಈ ಆತಂಕದಿಂದಲೇ ಅವರಿಗೆ ಹೃದಯಾಘಾತವಾಗಿದೆ ಎಂದು ಶಿಕ್ಷಕರ ಸಂಘಟನೆಗಳು ಆರೋಪಿಸಿವೆ.
ಭಾನುವಾರ ಮಧ್ಯಾಹ್ನದವರೆಗೂ ಮತ್ತೊಬ್ಬ ಶಿಕ್ಷಕರ ನೆರವಿನಿಂದ ಸಮೀಕ್ಷೆ ನಡೆಸಿದ್ದರು. ನಂತರ ಒಬ್ಬರೇ ಸಮೀಕ್ಷೆ ಕಾರ್ಯ ನಡೆಸಿದ್ದರಿಂದ. ಒತ್ತಡ ಹೆಚ್ಚಾಗಿ ಕೆಲಸ ಮಾಡಲು ಸಾಧ್ಯವಾಗದೆ ಅಸ್ವಸ್ಥಗೊಂಡಿದ್ದಾರೆ.
ಚಿಕತ್ಸೆಗೆ ನಗರದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸುವಷ್ಟರಲ್ಲೇ ಕೊನೆ ಉಸಿರೆಳೆದಿದ್ದಾರೆಂದು ವರದಿಯಾಗಿದೆ.