ದೊಡ್ಡಬಳ್ಳಾಪುರ: ಕನ್ನಡ ದಿನಪತ್ರಿಕೆಗಳ ಓದುವ ಹವ್ಯಾಸದಿಂದ ಕನ್ನಡ ಭಾಷಾ ಸಾಮಾರ್ಥ್ಯ ಹೆಚ್ಚಿಸುವುದರೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ ಆಗುತ್ತದೆ ಎಂದು ಅನಿಕೇತನ ಟ್ರಸ್ಟ್ ಕಾರ್ಯದರ್ಶಿ, ಹಿರಿಯ ಪತ್ರಕರ್ತ ನಾಗಸಂದ್ರ ನಟರಾಜ್ (Senior journalist Nagasandra Nataraj) ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಕ್ಷಿಪಣಿ ಮನುಷ್ಯ ಮತ್ತು ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ದಿನಪತ್ರಿಕೆಗಳ ಓದು ಅವರು ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು. ದಿನಪತ್ರಿಕೆಗಳನ್ನು ಹಂಚಿ ಉಳಿದ ಐದಾರು ದಿನಪತ್ರಿಕೆಗಳನ್ನು ಅಬ್ದುಲ್ ಕಲಾಂ ಓದುತ್ತಿದ್ದರು. ಅದು ಅವರ ಜ್ಞಾನದ ವಿಕಾಸಕ್ಕೆ ಅಡಿಪಾಯವಾಯಿತು ಎಂದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಕೊಳ್ಳಬೇಕು. ಪತ್ರಿಕೆಗಳ ಭಾಷೆ ಸರಳವಾಗಿರುತ್ತದೆ. ವಿಷಯಗಳ ನಿಖರತೆ ಇರುತ್ತದೆ. ಓದುವ ಹವ್ಯಾಸ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ಜ್ಞಾನದೊಂದಿಗೆ ಲೋಕ ಜ್ಞಾನವು ಪಡೆಯುವ ಮೂಲಕ ವ್ಯಕ್ತಿತ್ವದ ಸರ್ವಾಂಗೀಣ ಬೆಳೆವಣಿಗೆಗೆ ಅನುಕೂಲವಾಗುತ್ತದೆ.
ಕನ್ನಡ ದಿನಪತ್ರಿಕೆ ಓದುವುದರಿಂದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಬಹುದು, ಸಾಮಾನ್ಯ ಜ್ಞಾನ ಹೆಚ್ಚಿಸಬಹುದು, ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬಹುದು ಎಂದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ. ಡಾ.ಹುಲಿಕಲ್ ನಟರಾಜು ಮಾತನಾಡಿ, ಇಂದು ವಿಜ್ಞಾನ ಸಾಕಷ್ಟು ಬೆಳೆದಿದೆ. ಆದರೆ ಮಾನವೀಯತೆ ಬೆಳೆಯಬೇಕಾಗಿದೆ. ಮಾನವೀಯ ಸಂವಹನವನ್ನು ವಿಜ್ಞಾನ ಬೆಳೆಸದಿದ್ದರೆ ಅದಕ್ಕೆ ಬೆಲೆ ಇಲ್ಲದಾಗುತ್ತದೆ.
ವಿದ್ಯಾರ್ಥಿಗಳು ಸಕಾರಾತ್ಮಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಆಲೋಚನೆ, ಚಿಂತನೆ, ಪ್ರಶ್ನೆ ಮಾಡುವ ಮನೋಭಾವದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಕೂ ಅಗಾಧವಾದ ಚೈತನ್ಯ, ನೈಪುಣ್ಯ ಇರುತ್ತದೆ. ಅದನ್ನು ಸಕಾಲದಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮೌಢ್ಯತೆಯಿಂದ ದೂರ ಉಳಿಯಬೇಕಾದವರು ಪಂಚಾಂಗ ನೋಡುವುದನ್ನು ಬಿಟ್ಟು, ಪಂಚ ಅಂಗಗಳ ಕಡೆಗೆ ಗಮನಕೊಡಬೇಕೆಂದರು.
ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಡಾ.ಎಚ್.ಎಸ್.ದಾಕ್ಷಾಯಿಣಿ, ಹಿರಿಯ ಶಿಕ್ಷಕರಾದ ಪೂರ್ಣಿಮ, ನಾಗಭೂಷಣ್, ಚಿಕ್ಕೇಗೌಡ, ಎನ್.ಆನಂದಮ್ಮ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಎ.ಜಯರಾಮ್, ವಿ.ಎಸ್.ಹೆಗಡೆ, ವೆಂಕಟರಾಜು, ಡಿ.ಪಿ.ಆಂಜನೇಯ, ಮಂಜುನಾಥ್ ಬಾಶೆಟ್ಟಿಹಳ್ಳಿ, ದರ್ಗಾಜೋಗಿಹಳ್ಳಿ ಮಲ್ಲೇಶ್, ಸೆಲ್ವರಾಜ್ ಮುಂತಾದವರು ಭಾಗವಹಿಸಿದ್ದರು.