ದೊಡ್ಡಬಳ್ಳಾಪುರ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಳಗ ವತಿಯಿಂದ ನಿನ್ನೆ ಇಹಲೋಕವನ್ನು ತ್ಯಜಿಸಿದ ವೃಕ್ಷ ಮಾತೆ ಸಾಲಮರದ ತಿಮ್ಮಕ್ಕ (Salumarada timmakka) ಅವರಿಗೆ ದೊಡ್ಡಬಳ್ಳಾಪುರದ ಡಿ ಕ್ರಾಸದ ಸಮೀಪದ ಡಾ.ರಾಜಕುಮಾರ್ ವೃತ್ತದ ಬಳಿ ಗಿಡಗಳನ್ನು ನೀಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, “ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಗಿಡಗಳನ್ನು ನೀಡಿ ಸಂತಾಪ ವ್ಯಕ್ತಪಡಿಸಲಾಗುತ್ತಿದ್ದು, ಈ ಮೂಲಕ ತಿಮ್ಮಕ್ಕ ಅವರ ಮಹಾನ್ ವ್ಯಕ್ತಿತ್ವ ಸಾರುವ ಸಣ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದರು.”
ಮರಗಳನ್ನೇ ಸ್ವಂತ ಮಕ್ಕಳೆಂದು ಬೆಳೆಸಿ ನೀರುಣಿಸಿದ ವೃಕ್ಷಮಾತೆ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಇಡೀ ಪರಿಸರವೇ ದುಃಖದಲ್ಲಿ ಇರುವಂತೆ ನಮಗೆ ಭಾಸವಾಗುತ್ತಿದೆ. “ಕೊಟ್ಟು ಹೋಗಬೇಕು ಅಥವಾ ಬಿಟ್ಟು ಹೋಗಬೇಕು” ಎನ್ನುವ ಮಾತಿದೆ. ಆ ಮಾತಿಗೆ ಅನ್ವಯದಂತೆ ಬದುಕಿದ ಮಹಾನ್ ತಾಯಿಗೆ ನಾವುಗಳು ಶಿರಬಾಗಿಸಿ ನಮಿಸುತ್ತೇವೆ. 114 ವರ್ಷಗಳ ತುಂಬು ಜೀವನ ನಡೆಸಿ ಹೊರಟಿದ್ದಾರೆ.
ಅವರು ಬೆಳೆಸಿದ ಮರಗಳು ಸೇರಿದಂತೆ ನಮ್ಮೆಲ್ಲರಲ್ಲಿ ಅವರು ಮೂಡಿಸಿದ ಜಾಗೃತಿ ಸದಾ ಜೀವಂತವಾಗಿರಲಿದೆ. ತಿಮ್ಮಕ್ಕ ಅವರು ಕರ್ನಾಟಕದ ಹಾಗೂ ಇಡೀ ಭಾರತದ ಹೆಮ್ಮೆ. ರಸ್ತೆ ಬದಿಯಲ್ಲಿ ಕಿಲೋಮೀಟರ್ ಗಟ್ಟಲೇ ಗಿಡಗಳನ್ನು ನೆಟ್ಟು ನಿತ್ಯ ನೀರು ಹಾಕಿ ಮರಗಳಾಗುವಂತೆ ಬೆಳೆಸಿದ್ದರು. ಮಕ್ಕಳಂತೆ ನೋಡಿಕೊಂಡಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವೆ 4.5 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದರು. ಆ ದಾರಿಯಲ್ಲಿ ಹೋದಾಗಲೆಲ್ಲಾ ಅವರೇ ನೆನಪಾಗುತ್ತಿದ್ದರು. ಈವರೆಗೆ 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಹೊಸ ಪೀಳಿಗೆಗೆ ಮಾದರಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಖಜಾಂಚಿ ಆನಂದ್, ಕಾರ್ಯದರ್ಶಿ ಮುಖೇನಳ್ಳಿ ರವಿ, ನಗರ ಉಪಾಧ್ಯಕ್ಷ ಮಂಜುನಾಥ್, ಸೂರಿ, ರಾಮು ಮಡಿವಾಳ, ಹಮಾಮ್ ಮಂಜುನಾಥ್, ಕೊಡಳ್ಳಿ ಶಾಖೆಯ ಅಧ್ಯಕ್ಷ ರವಿ, ಉಪಾಧ್ಯಕ್ಷ ಮುನೀಂದ್ರ, ಕಾರ್ಯದರ್ಶಿ ಶಶಿಕುಮಾರ್, ದಾದಾಪೀರ್, ನೂರಲ್ಲ, ಚಿಕ್ಕಣ್ಣ ಉಪಸ್ಥಿತರಿದ್ದರು