ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟಿಎಪಿಎಂಸಿಎಸ್ ಚುನಾವಣೆಯನ್ನು ರಾಜಕೀಯ ಪಕ್ಷಗಳ ಮುಖಂಡರು ಈ ಬಾರಿ ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ವಿಧಾನ ಸಭಾ ಚುನಾವಣೆಯಷ್ಠೆ ಜೋರಾಗಿ 13 ಜನ ನಿರ್ದೇಶಕರ ಆಯ್ಕೆಗೆ ಮತದಾನ ನಡೆದಿತ್ತು.
ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಟಿಎಪಿಎಂಸಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಸಿದ್ದರಾಮಯ್ಯ ಅವರು ಮಾತನಾಡಿ, ಸಂಘದಲ್ಲಿ ಈ ಹಿಂದೆ ಉತ್ತಮ ಆಡಳಿತ ನೀಡಿರುವುದನ್ನು ಗುರುತಿಸಿ ಎರಡನೇ ಬಾರಿಗೂ ಜನರು ಆರ್ಶೀವಾದ ಮಾಡಿದ್ದಾರೆ. ಹಾಗೆಯೇ ಪಕ್ಷದ ಮುಖಂಡರು ಸಹ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ತಾಲ್ಲೂಕಿನಲ್ಲೇ ಅತ್ಯಂತ ಹಳೇಯ ಸಹಕಾರಿ ಸಂಸ್ಥೆಯಾಗಿರುವ ಟಿಎಪಿಎಂಸಿಎಸ್ ಎಷ್ಟೇ ಲಾಭಗಳಿಸಿದರು ಅದು ಷೇರುದಾರರಿಗೆ ತಲುಪಲಿದೆ. ಈ ನಂಬಿಕೆಯಲ್ಲೇ ಬಹುತೇಕ ಗ್ರಾಹಕರು ಟಿಎಪಿಎಂಸಿಎಸ್ ವತಿಯಿಂದ ನಡೆಸಲಾಗುತ್ತಿರುವ ಜನತಾ ಬಜಾರ್ಶಾಖೆಗಳಲ್ಲಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಗ್ರಾಹಕರ ಹಾಗೂ ಪಕ್ಷದ ಮುಖಂಡರ ನಂಬಿಕೆಯನ್ನು ಮತ್ತಷ್ಟು ಹೆಚ್ಚು ಮಾಡುವ ರೀತಿಯಲ್ಲಿ ಉತ್ತಮ ಆಡಳಿತ ನೀಡಲಾಗುವುದು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರೈತರ ಅನುಕೂಲಕ್ಕಾಗಿ ರಸಗೊಬ್ಬರ, ಪಶುಆಹಾರ, ಗುಣಮಟ್ಟದ ದಿನಸಿ ಸೇರಿದಂತೆ ಸಾಕಷ್ಟು ವಹಿವಾಟು ನಡೆಸಲಾಗುತ್ತಿದೆ.
ತಾಲ್ಲೂಕಿನಲ್ಲಿ ಸಂಘವು 6 ಸಾವಿರ ಜನ ಷೇರುದಾರರು ಹೊಂದಿರುವ ದೊಡ್ಡ ಸಹಕಾರಿ ಸಂಸ್ಥೆಯಾಗಿದೆ. ಕಾಂಗ್ರೆಸ್ ಪಕ್ಷವು ಸದಾ ಸಹಕಾರಿ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುತ್ತಲೇ ಬರುತ್ತಿದೆ. ಈ ನಂಬಿಕೆಯ ಮೇಲೆಯೇ ಕ್ಷೇತ್ರದ ಜನರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್ ಹಾಗೂ ಸಂಘದ ನಿರ್ದೆಶಕರು ಇದ್ದರು.