ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ನೇಕಾರರು ತಯಾರು ಮಾಡುವ ಬಟ್ಟೆಗಳನ್ನು ಸೂರತ್ ಹಾಗೂ ರೇಪಿಯರ್ ಮಗ್ಗಗಳಲ್ಲಿ ನೇಯ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಪರಿಣಾಮ ದೊಡ್ಡಬಳ್ಳಾಪುರದ ನೇಕಾರಿಕೆ ಸಂಕಷ್ಟಕ್ಕೀಡಾಗಿದ್ದು, ಈ ದಿಸೆಯಲ್ಲಿ ವಿದ್ಯುತ್ ಮಗ್ಗಗಳ ಮೀಸಲು ಕಾಯ್ದೆ ರೂಪಿಸಬೇಕಿದೆ. ಹೊರ ರಾಜ್ಯಗಳಿಂದ ಬರುವ ಸೀರೆ ಮಾರಾಟ ತಡೆಯಬೇಕಿದ್ದು, ನೇಯ್ಗೆ ಉದ್ಯಮ ಭಿಕ್ಕಟ್ಟಿಗೆ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ, ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಟೆಕ್ಸ್ಟೈಲ್ಸ್ ವೀವರ್ಸ್ ಅಸೋಸಿಯೇಶನ್, ನೇಕಾರರ ಹೋರಾಟ ಸಮಿತಿ, ವಿವಿಧ ನೇಕಾರ ಸಂಘಟನೆಗಳ ನೇತೃತ್ವದಲ್ಲಿ ನೇಕಾರರಿಂದ ಬೃಹತ್ ಪ್ರತಿಭಟನಾ (Weavers’ protest) ನಡೆಸಲಾಯಿತು.
ನಗರದ ಕರೇನಹಳ್ಳಿ ಬಯಲು ಬಸವಣ್ಣ ದೇವಸ್ಥಾನದ ಬಳಿಯಿಂದ ಮರವಣಿಗೆ ತಾಲ್ಲೂಕು ಕಛೇರಿ ಮುಂಭಾಗದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ನೂರಾರು ನೇಕಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೇಪಿಯರ್ ಮತ್ತು ಸೂರತ್ನಿಂದ ತರುವ ಏರ್ಜೆಟ್ ಸೀರೆಗಳನ್ನು ಇಲ್ಲಿಗೆ ತಂದು ಮಾರುವುದನ್ನು ಈ ಕೂಡಲೇ ನಿಲ್ಲಿಸಬೇಕು. ರೇಪಿಯರ್ ಮಗ್ಗಗಳಲ್ಲಿ ಇಲ್ಲಿನ ಸೀರೆಗಳನ್ನು ನೇಯದಂತೆ ಸರ್ಕಾರ ಕಾನೂನು ಜಾರಿಗೆ ತರಬೇಕಿದೆ ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ದೊಡ್ಡಬಳ್ಳಾಪುರದಲ್ಲಿ 25ಸಾವಿರ ಮಗ್ಗಗಳಿದ್ದು, ಗುಡಿ ಕೈಗಾರಿಕೆಯಾಗಿರುವ ನೇಕಾರಿಕೆಯನ್ನು, ವಿವಿಧ ಹಂತಗಳ ನೇಕಾರರು ಹಾಗೂ ಕುಟುಂಬ ಸೇರಿ ಒಂದು ಲಕ್ಷ ಮಂದಿ ಅವಲಂಬಿಸಿದ್ದಾರೆ. ಈ ಮದ್ಯೆ ನಮ್ಮ ನೇಕಾರಿಕೆಯಲ್ಲಿ ನಾವು ಉತ್ಪಾದನೆ ಮಾಡುವ ಸೀರೆಗಳನ್ನು ಸೂರತ್ ನಲ್ಲಿರುವ ಆಧುನಿಕ ತಂತ್ರಜ್ಞಾನದ ರೇಪಿಯರ್ ವಿರ್ಜೆಟ್ ಮಗ್ಗಗಳಲ್ಲಿ ಉತ್ಪಾದನೆ ಮಾಡುತ್ತಿದ್ದು, ದೊಡ್ಡಬಳ್ಳಾಪುರಕ್ಕೆ ತಂದು ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ದೊಡ್ಡಬಳ್ಳಾಪುರ ನೇಕಾರಿಕೆ ಉದ್ಯಮವನ್ನು ಹಾಳು ಮಾಡುತ್ತಿದ್ದು, ಸರ್ಕಾರ ಈ ಬಗ್ಗೆ ಕಾಯ್ದೆ ರೂಪಿಸಿ, ನೇಕಾರರ ಹಿತ ಕಾಪಾಡಬೇಕಿದೆ ಎಂದರು.
ಮುಕ್ತ ವ್ಯಾಪರ ಒಪ್ಪಂದ, ಜಾಗತೀಕರಣದ ಪ್ರಭಾವದಿಂದಾಗಿ, ನೇಕಾರರು ಮಾರಾಟ ಮಾಡುವ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಹಿಂದೆ ನೇಕಾರರ ಹೋರಾಟದ ಫಲವಾಗಿ, ಉಚಿತ ವಿದ್ಯುತ್ ಮೊದಲಾದ ಸೌಲಭ್ಯಗಳು ಸರ್ಕಾರದಿಂದ ದೊರೆತಿತ್ತು. ಈಗ ಸರ್ಕಾರ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವುದರೊಂದಿಗೆ, ನೇಕಾರರು ಉತ್ಪಾದಿಸಿದ ಬಟ್ಟೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕಿದೆ. ಈ ಕುರಿತು ಡಿ.1ರಂದು ಸಂವಾದ ಏರ್ಪಡಿಸಲಾಗಿದೆ ಎಂದರು.
ನೇಕಾರರು ಭಾವನಾತ್ಮಕವಾಗಿರದೇ ವಾಸ್ತವ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇದು ಸರ್ಕಾರದ ಕಾಯ್ದೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನಿರಂತರ ಹೋರಾಟ ಹಾಗೂ ಒತ್ತಾಯದ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ನೇಯ್ಗೆ ಉದ್ಯಮದ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಪರಿಹಾರ ಸೂಚಿಸಬೇಕಿದ್ದು, ಅಧಿಕಾರಿಗಳು ಹಾಗೂ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಎಂದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಧೀರಜ್ ಮುನಿರಾಜು ಮಾತನಾಡಿ, ದೊಡ್ಡಬಳ್ಳಾಪುರದ ಸೀರೆಗಳನ್ನು ಮಿಲ್ಗಳಲ್ಲಿ ತಯಾರು ಮಾಡಲಾಗುತ್ತಿರುವುದು ನೇಕಾರರಿಗೆ ಸಂಕಷ್ಟವಾಗಿದೆ. ಇದಕ್ಕೆ ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳನ್ನು ತಯಾರಿಸಬಾರದು ಎಂದು 2006ರ ಕಾಯ್ದೆಯಲ್ಲಿ ಇರುವ ಅಂಶಗಳ ಆಧಾರದ ಮೇಲೆ ಈ ಅಧಿವೇಷನದಲ್ಲಿ ಸರ್ಕಾರದ ಗಮನಕ್ಕೆ ತಂದು ಕಾಯ್ದೆ ರೂಪಿಸಲು ಮನವಿ ಮಾಡಲಾಗುವುದು ಎಂದು ನೇಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ಕರ್ನಾಟಕ ರಾಜ್ಯ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್, ಜಿಲ್ಲಾ ಉಪನಿರ್ದೇಶಕ ಸುರೇಶ್ ಮೊದಲಾದವರು ಭಾಗವಹಿಸಿದ್ದರು.