ಬೆಂಗಳೂರು: ದ್ವೇಷ ಭಾಷಣ ತಡೆಗೆ ಕಾಂಗ್ರೆಸ್ ಸರ್ಕಾರ ಕಾನೂನು ತರಲು ಹೊರಟಿರುವುದು ಪ್ರಜಾಪ್ರಭುತ್ವ ಕೊಲೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಎಚ್ಚರಿಕೆ ನೀಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು; ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕ” ಮಸೂದೆ ಮಂಡನೆಗೆ ನಮ್ಮ ಪಕ್ಷದಿಂದ ವಿರೋಧವಿದೆ ಎಂದು ಹೇಳಿದರು.
ಸಂವಿಧಾನ ನಮಗೆ ನೀಡಿರುವ ವಾಕ್ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ವಿರೋಧ ಪಕ್ಷದ ಹಾಗೂ ಪತ್ರಿಕೋದ್ಯವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಪತನದ ದಿನ ದೂರವಿಲ್ಲ
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವು ಸಂವಿಧಾನ ನಮಗೆ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಈ ವಿಧೇಯಕದ ಮೂಲಕ ಕಾಂಗ್ರೆಸ್ ಸ ರ್ಕಾರವು 1975 ರ ತುರ್ತು ಪರಿಸ್ಥಿತಿಯನ್ನು ಮರುಕಳಿಸುವ ಕುತಂತ್ರ ಮಾಡುತ್ತಿದೆ, ಇದರಿಂದ ಕಾಂಗ್ರೆಸ್ ಸರ್ಕಾರದ ಪತನದ ದಿನ ದೂರವಿಲ್ಲ ಎಂದು ನಿಖಿಲ್ ಅವರು ವ್ಯಂಗ್ಯವಾಡಿದರು.
ಈ ವಿಧೇಯಕದವನ್ನ ಮಾನ್ಯ ಗೃಹ ಸಚಿವ ಪರಮೇಶ್ವರ್ ಅವರ ಮಂಡಿಸಿದ್ದಾರೆ. ಅವರಿಗೆ ಏನು ಗೊತ್ತಿಲ್ಲ, ಈ ಬಿಲ್ನನ್ನು ಬೇರೆ ಯಾರೋ ತಯಾರಿಸಿ ಗೃಹ ಸಚಿವರ ಮೂಲಕ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಆದರೆ ಏನು ಗೊತ್ತಿಲ್ಲದ ಮಂತ್ರಿಗಳು ಇಷ್ಟೊಂದು ಕಟುವಾದ ವಿಧೇಯಕ ಮಂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಕಾನೂನಿನ ಮೂಲಕ ಮಾಧ್ಯಮಗಳನ್ನು, ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಹಾಗೂ ವಿರೋಧ ಪಕ್ಷದ ಕಾರ್ಯಕರ್ತರನ್ನು ಹೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದು ಈ ಸರ್ಕಾರದಿಂದ ಸಾಧ್ಯವಿಲ್ಲ. ಈ ವಿಧೇಯಕದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಹೋರಾಟ ಮಾಡಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಉತ್ತರ ಕರ್ನಾಟಕ ರೈತರು ಸಂಕಷ್ಟದಲ್ಲಿದ್ದಾರೆ, ಕಾಟಾಚಾರದ ಅಧಿವೇಶನ ನಡೀತಿದೆ
ಆರು ತಿಂಗಳಿಂದ ಉತ್ತರ ಕರ್ನಾಟಕ ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಟಾಚಾರದ ಅಧಿವೇಶನ ನಡೀತಿದೆ. ರೈತರ ನೋವಿಗೆ ಸ್ಪಂದಿಸುವ ಅಧಿವೇಶನ ನಡಿಬೇಕು.ನಾಡಿನ ಸಮಗ್ರ ಬೆಳವಣಿಗೆಗೆ ಅಧಿವೇಶನ ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ಆಟ ನಡೀತಿದೆ
ಕಾಂಗ್ರೆಸ್ ನಲ್ಲಿ ಈಗಾಗಲೇ ಬ್ರೇಕ್ ಫಾಸ್ಟ್, ಲಂಚ್ ಆಯ್ತು. ಈಗ ಬೆಳಗಾವಿಯಲ್ಲಿ ಡಿನ್ನರ್ ಮೀಟಿಂಗ್ ನಡೀತಿದೆ..ಜನತೆಯ ಸಮಸ್ಯೆ ಕೈ ಬಿಟ್ಟು ಯಾರು ಸಿಎಂ ಕುರ್ಚಿಯಲ್ಲಿ ಕೂರಬೇಕು ಎಂಬ ಚರ್ಚೆ ಆಗ್ತಿದೆ.ರಾಜ್ಯ ಸರಕಾರದಲ್ಲಿ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಿದೆ ಎಂದು ಕಿಡಿಕಾರಿದರು.
ಜನರ ಬಗ್ಗೆ ಕಾಳಜಿ ಇಲ್ಲ, ಕುರ್ಚಿ ಕಮಿಟ್ಮೆಂಟ್ ಅಷ್ಟೇ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ನಲ್ಲಿ ಹೋಡಾಡುವುದಕ್ಕೆ 47 ಕೋಟಿ ಬಿಲ್ ಆಗಿದೆ. ಸಿದ್ರಾಮಣ್ಣ ರಸ್ತೆಯಲ್ಲಿ ಓಡಾಡಿದ್ರೆ ಗುಂಡಿ ಎಷ್ಟು ಇದ್ದಾವೆ ಅನ್ನೋದು ಗೊತ್ತಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಅಸಹಾಯಕತೆ ನೋಡೋಕೆ ಆಗ್ತಿಲ್ಲ.ಅವರೇ ಹೈಕಮಾಂಡ್ ಜೊತೆ ಮಾತಾಡುತ್ತೇವೆ ಅಂತಾರೆ. ಯತೀಂದ್ರ ಯಾಕೆ ಆ ರೀತಿ ಹೇಳ್ತಿದ್ದಾರೆ ಅನ್ನೋದು ಗೊತ್ತಿಲ್ಲ. ರಾಜ್ಯದ ಅರ್ಥಿಕ ಪರಿಸ್ಥಿತಿ ಏನಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು
ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ ಅವರು, ಮಾಜಿ ವಿಧಾನಪರಿಷತ್ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅವರು, ವಕ್ತಾರರಾದ ಶ್ರೀ ಗಂಗಾಧರ್ ಮೂರ್ತಿಅವರು, ಶ್ರೀ ಪ್ರದೀಪ್ ಕುಮಾರ್ ಅವರು ಜತೆಯಲ್ಲಿದ್ದರು.