
ಗುವಾಹಟಿ (ಅಸ್ಸಾಂ): ರಾಜಧಾನಿ ಎಕ್ಸ್ಪ್ರೆಸ್ (Rajdhani Express) ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಕಾಡಾನೆಗಳು (Elephants) ಸಾವನ್ನಪ್ಪಿದ್ದು, ಒಂದು ಆನೆ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಹೋಜಾಯಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಆನೆಗಳ ಹಿಂಡು ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಸೈರಂಗ್-ನವದೆಹಲಿ ನಡುವೆ ಸಂಚರಿಸುತ್ತಿದ್ದ ರಾಜಧಾನಿ ಎಕ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ದುರಂತ ನಡೆದಿದೆ.
ಡಿಕ್ಕಿ ರಭಸಕ್ಕೆ ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ. ಆದರೆ, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಆಗಿಲ್ಲ.
ಶನಿವಾರ ನಸುಕಿನ ಜಾವ 2:17ಕ್ಕೆ ಹೋಜಾಯಿ ಜಿಲ್ಲೆಯ ಚಾಂಗ್ಜುರಾಯಿ ಬಳಿ ಅವಘಡ ನಡೆದಿದೆ ಎಂದು ನಾಗೌನ್ ವಲಯ ಅರಣ್ಯಾಧಿಕಾರಿ ಸುಹಾಸ್ ಕದಂ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕದಂ ಸೇರಿ ಇತರೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ಅಪಘಾತದಿಂದಾಗಿ ಜಮುನಾಮುಖ್-ಕಂಪುರ ವಿಭಾಗದ ಮೂಲಕ ತೆರಳುವ ರೈಲುಗಳನ್ನು ಉತ್ತರ ಪ್ರದೇಶ ಮಾರ್ಗದ ಮೂಲಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ರೈಲ್ವೆ ಹಳಿ ತಪ್ಪಿರುವ ಬೋಗಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. (ವೈರಲ್ ಫೋಟೋ ಬಳಸಲಾಗಿದೆ)