ದೊಡ್ಡಬಳ್ಳಾಪುರ: ದಿನಾಂಕ ಗೊಂದಲದ ನಡುವೆ ನಾಳೆಯ ಸಂಕ್ರಾಂತಿ (Sankranti) ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನತೆ ಸಿದ್ದರಾಗುತ್ತಿದ್ದಾರೆ. ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ ಆಗಿದೆ.
ದಿನೇ ದಿನೇ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮಾಚರಣೆ ಇಲ್ಲದಿದ್ದರೂ, ಹಬ್ಬದ ಆಚರಣೆಗೆ ಸಿದ್ದತೆಗಳು ನಡೆಯುತ್ತಿವೆ.
ರಾಶಿ ರಾಶಿ ಅವರೆ ಕಾಯಿ, ಕಡಲೆ ಕಾಯಿ..
ದೊಡ್ಡಬಳ್ಳಾಪುರ ಸೇರಿದಂತೆ ಅಕ್ಕಪಕ್ಕದ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಉತ್ತಮ ಬೆಳೆ ರೈತರಿಗೆ ದೊರಕಿದ್ದು, ದೊಡ್ಡಬಳ್ಳಾಪುರ ನಗರದ ಮಾರುಕಟ್ಟೆ ಪ್ರದೇಶದಲ್ಲಿ, ಗ್ರಾಮಾಂತರ ಪ್ರದೇಶಗಳ ಪ್ರಮುಖ ಗ್ರಾಮಗಳಲ್ಲಿ ಮಾರುಕಟ್ಟೆಯಲ್ಲಿ ಅವರೆ ಕಾಯಿಣ ತೊಗರಿ ಕಾಯಿ ರಾಶಿ ರಾಶಿ ಸುರಿದುಕೊಂಡು ಭರದಿಂದ ವ್ಯಾಪಾರ ನಡೆಲಾಗುತ್ತಿದೆ.
ಕಳೆದ ವರ್ಷಕ್ಕಿಂತ ಬೆಲೆ ಕಡಿಮೆ..!
ಕೆ.ಜಿ ಕಡಲೇಕಾಯಿ 100 ರಿಂದ 130ರೂ, ಎಳ್ಳು ಬೆಲ್ಲ ಕೆಜಿಗೆ 200 ರೂ. ಗೆಣಸು 30ರೂ. ಕಬ್ಬು ಜಳವೆಗೆ 60 ರಿಂದ 80 ರೂ. ಅವರೇಕಾಯಿ ಕೆ.ಜಿಗೆ 60 ರೂ ಇದ್ದು, ಕಳೆದ ವರ್ಷಕ್ಕಿಂತ ಕಡಿಮೆ ಬೆಲೆ ಇದೆ.
ಕನಕಾಂಬರ ಕೆ.ಜಿಗೆ 800 ರಿಂದ 1000ರೂ ಇದ್ದರೆ ಶಾಮಂತಿಗೆ, ಗುಲಾಬಿ, ಸೇವಂತಿಗೆ ಮೊದಲಾದ ಹೂವಿನ ಬೆಲೆಗಳು 80 ರಿಂದ 200 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಾಧಾರಣವಾಗಿವೆ.
ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾಗಿದ್ದು, ಕಬ್ಬನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ.
ರಾಸುಗಳ ಸಂಖ್ಯೆ ಇಳಿಮುಖ
ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷದಂತೆ ಈ ಬಾರಿಯೂ ಕಾಟಿಮರಾಯನ ಹಬ್ಬದ ಆಚರಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಕಿಚ್ಚು ಹಾಯಿಸುವ ಅಚರಣೆಗಳು ಸಂಕ್ರಾಂತಿಯಂದು ನಡೆಯಲಿವೆ. ಆದರೆ ದಶಕಗಳ ಹಿಂದೆ ಮನೆ ಮನೆಯಲ್ಲಿಯೂ ಇದ್ದ ರಾಸುಗಳ ಸಂಖ್ಯೆ, ಈಗ ಊರೆಲ್ಲ ಹುಡುಕಿದರೂ ಎರಡು ಮೂರು ಜೊತೆ ದನಗಳು ಎನ್ನುವಂತಾಗಿದೆ.