ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಕೈಗಾರಿಕಾ ತ್ಯಾಜ್ಯಗಳಿಂದಾಗಿ ಕಲುಷಿತ ಕೆರೆಗಳು ಹಾಗೂ ತ್ಯಾಜ್ಯ ಶುದ್ದೀಕರಣದ ಘಟಕಗಳಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ (B. Veerappa) ಅವರು ಭೇಟಿ ನೀಡಿ, ಪರಿಶೀಲಿಸಿದ್ದು, ಅಧಿಕಾರಿಗಳ ಚಳಿ ಬಿಡಿಸಿದರು.
ಹೌದು ಉಪ ಲೋಕಾಯುಕ್ತ ಬಿ.ವೀರಪ್ಪ (B. Veerappa) ಅವರು ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕತುಮಕೂರು, ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮಗಳ ಕೆರೆಗಳು ಕೈಗಾರಿಕಾ ತ್ಯಾಜ್ಯಗಳಿಂದ ಕಲುಷಿತವಾಗಿರುವ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಕೆರೆಗಳ ವಸ್ತುಸ್ಥಿತಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ಚಿಕ್ಕತುಮಕೂರು ಕೆರೆಗೆ ತ್ಯಾಜ್ಯದ ಪದರವನ್ನು ನೋಡುವ ಸಲುವಾಗಿ ಸ್ವತಃ ಕಲ್ಲು ಎಸೆದು ಪರೀಕ್ಷಿಸಿದರು.
ಉಪಲೋಕಾಯುಕ್ತರ ಆಗಮನದ ವಿಷಯ ತಿಳಿದ ಸ್ಥಳೀಯ ಗ್ರಾಮಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಾ ಜೋರಾಗಿ ನಡೆದಿತ್ತು.
ಮಧ್ಯಾಹ್ನ ನಿಗದಿತ ಸ್ಥಳಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ (B. Veerappa) ಅವರು ಕಲುಷಿತ ನೀರು ಕಂಡು ಗರಂ ಆಗಿ, ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯರಿಂದ ಮಾಹಿತಿ ಪಡೆದ ಅವರು, ಒಂದು ವಾರದಲ್ಲಿ ತ್ಯಾಜ್ಯ ನೀರು ಕೆರೆಗೆ ಹರಿದು ಬರುವುದು ನಿಲ್ಲದಿದ್ದರೆ ಅಧಿಕಾರಿಗಳು ಜೈಲಿಗೆ ಹೋಗಲು ಸಿದ್ದರಾಗಿರಬೇಕು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ, ಕಲುಷಿತ ನೀರಿನಿಂದಾಗಿ ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಮಹಿಳೆಯರಿಗೆ ಗರ್ಭ ಕೋಶದ ಸಮಸ್ಯೆಗಳು, ಕಣ್ಣಿನ ಸಮಸ್ಯೆ ಮೊದಲಾದ ರೋಗಗಳಿಂದ ಬಳಲುತ್ತಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯ ಡಾ.ಎಚ್.ಜಿ. ವಿಜಯ ಕುಮಾರ್ ದೂರಿದರು.
ನಮಗೆ ವಿಷ ನೀರು ಉಣಿಸುತ್ತಿದ್ದು, ಈ ಬಗ್ಗೆ ದಾಖಲೆಗಳೋದಮಿಗೆ ಮಾಲಿನ್ಯ ನಿಯಂತ್ರಣ ಮಂಡಲಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೆರೆ ಹೋರಾಟ ಸಮಿತಿ ಮುಖಂಡರಾದ ಸತೀಶ್, ರಮೇಶ್, ದೂರಿದರು.
ನಮಗೆ ಶಾಶ್ವತ ಪರಿಹಾರ ಬೇಕು. ಕೈಗಾರಿಕೆಗಳ ತ್ಯಾಜ್ಯದಿಂದ ನಮಗೆ ಮುಕ್ತಿ ಬೇಕು ಎಂದು ಮುಖಂಡರಾದ ತಿ.ರಂಗರಾಜು ಗ್ರಾಮದ ಸಮಸ್ಯೆಗಳನ್ನು ಲೋಕಾಯುಕ್ತರ ಮುಂದಿಟ್ಟರು.
ಅರ್ಕಾವತಿ ನದಿ ಪಾತ್ರದ ಕೆರೆಗಳು ಮಲಿನವಾಗುತ್ತಿವೆ. ಕೈಗಾರಿಕಾ ತ್ಯಾಜ್ಯಗಳಿಂದಾಗುವ ಮಾಲಿನ್ಯದ ಬಗ್ಗೆ ಹಲವಾರು ದೂರುಗಳು ನೀಡಿದ್ದು, ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಯುವ ಸಂಚಲನದ ಚಿದಾನಂದ ದೂರಿದರು.
ಮಾಹಿತಿ ನೀಡಿ
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಕೆರೆ ವೀಕ್ಷಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೈಗಾರಿಕೆಗಳು ತ್ಯಾಜ್ಯ ನೀರು ಶುದ್ದೀಕರಿಸದೆ ಕೆರೆಗೆ ಹರಿದು ಬಿಡುತ್ತಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದರಿಂದ ಸಿಟ್ಟೆಗೆದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ‘ಜಿಲ್ಲಾಧಿಕಾರಿಗಳು ವಾಸ್ತವ ಸಂಗತಿಗಳನ್ನು ಹೇಳುತ್ತಿದ್ದರೆ ನೀನು ತಪ್ಪು ಮಾಹಿತಿ ನೀಡುವ ಮೂಲಕ ಕೈಗಾರಿಕೆಗಳವರನ್ನು ಸಮರ್ಥಿಸ ಬೇಡ. ಕೆರೆಗೆ ತ್ಯಾಜ್ಯ ನೀರು ಬಿಡುತ್ತಿರುವವರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ’ ಸೂಚಿಸಿದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ದೊಡ್ಡಬಳ್ಳಾಪುರ ನಗರಸಭೆ ವತಿಯಿಂದ ಒಳಚರಂಡಿ ನೀರು ಶುದ್ದೀಕರಿಸದೇ ಕೆರೆಗೆ ಹರಿದು ಬಿಡುತ್ತಿರುವ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಉಪಲೋಕಾಯುಕ್ತರ ಪ್ರಶ್ನೆಗೆ ‘ಕ್ರಿಮಿನಲ್ ಮೊಕದ್ದಮೆ’ ದೂರು ದಾಖಲಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
ಕಚೇರಿ ಇಲ್ಲಿಗೆ ಸ್ಥಳಾಂತರಿಸಿ
ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು,ಕಚೇರಿಗೆ ಅಗತ್ಯ ಇರುವ ಮನೆಯನ್ನು ದೊಡ್ಡಬಳ್ಳಾಪುರದಲ್ಲಿ ನೀಡಿದ್ದರು ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಏಕೆ ಬೆಂಗಳೂರಿನಲ್ಲೇ ಇದೆ ಎಂದು ಪ್ರಶ್ನೆ ಮಾಡಿದ ಉಪಲೋಕಾಯುಕ್ತರಿಗೆ ಉತ್ತರ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕಚೇರಿಗೆ ಯೋಗ್ಯವಿಲ್ಲದ ಕಟ್ಟಡ ನೀಡಿದ್ದಾರೆ ಎಂದು ಉತ್ತರಿಸಿದರು.
ಇದಕ್ಕೆ ಗರಂ ಆದ ಉಪಲೋಕಾಯುಕ್ತರು ‘ನೀನು ಮಾತ್ರ ಸುರಕ್ಷಿತವಾಗಿರಬೇಕು, ಕೈಗಾರಿಕೆಗಳವರು ಕೆರೆಗಳಿಗೆ ತ್ಯಾಜ್ಯ ನೀರು ಹರಿದು ಬಿಟ್ಟು ಸಾರ್ವಜನಿಕರು ಏನಾದರು ಹಾಳಾಗಿ ಹೋಗಲಿ ಎನ್ನುವ ನಿಮ್ಮ ದೋರಣೆ ಸರಿ ಇಲ್ಲ. ತಕ್ಷಣ ದೊಡ್ಡಬಳ್ಳಾಪುರ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತಾಕೀತು ಮಾಡಿದರು.
ಕೈಗಾರಿಕೆಗಳ ತ್ಯಾಜ್ಯದ ವರದಿ ನೀಡಿ
ಕೈಗಾರಿಕಾ ಪ್ರದೇಶದಲ್ಲಿ ಸುಮಾರು 200 ಕಾರ್ಖಾನೆಗಳಿದ್ದು, ಪ್ರತಿ ಕಾರ್ಕಾನೆಯ ತ್ಯಾಜ್ಯ ವಿಲೇವಾರಿ ಬಗ್ಗೆ ವರದಿ ಸಲ್ಲಿಸಬೇಕು. ಪ್ರತಿ 15 ದಿನಕ್ಕೊಮ್ಮೆ ಕೈಗಾರಿಕೆ ತ್ಯಾಜ್ಯದ ಬಗ್ಗೆ ತಪಾಸಣೆ ನಡೆಸಿ, ವರದಿ ನೀಡಿ. ಇದರೊಂದಿಗೆ ನಮ್ಮ ತಾಂತ್ರಿಕ ತಂಡವನ್ನು ಸಹ ಕಳುಹಿಸುತ್ತೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕೆಗಳ ತ್ಯಾಜ್ಯ ಶುದ್ದೀಕರಣ ಘಟಕ (ಎಸ್.ಟಿ.ಪಿ) ಆದರೆ ಸಮಸ್ಯೆಗೆ ಪರಿಹಾರ ದೊರಕಲಿದ್ದು,ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.
ಕಾರ್ಖಾನೆಗಳಿಗೆ ಭೇಟಿ
ಇಲ್ಲಿನ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಹಾಗೂ ಇಂಡಿಗೋ ಬ್ಲೂ ಕಾರ್ಖಾನೆಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಭೇಟಿ ನೀಡಿ ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ಪರಿಶೀಲಿಸಿ ವರದಿ ಪಡೆದರು.
ತ್ಯಾಜ್ಯ ಶುದ್ದೀಕರಣ ವೈಜ್ಞಾನಿಕವಾಗಿ ಮಾಡುತ್ತಿದ್ದೇವೆ. ಇಲ್ಲಿಂದ ಯಾವುದೇ ನೀರು ಹೊರ ಹೋಗುವುದಿಲ್ಲ ಎಂದು ಕಾರ್ಖಾನೆ ವ್ಯವಸ್ಥಾಪಕರು ನೀಡಿದ ಉತ್ತರಕ್ಕೆ ಇಂದಿಗೆ ಆಯಿತು. ಇನ್ನು ಮುಂದೆ ಯಾವುದೇ ದೂರು ಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದರು.
ಇಲ್ಲಿನ ಜನರಿಗೆ ಸಿ.ಎಸ್ಆರ್ ಅನುದಾನದಲ್ಲಿ ಕೆರೆಗಳನ್ನು ಶುದ್ದೀಕರಣ ಮಾಡಿ, ಒಳ್ಳೆಯ ವಾತಾವರಣ ನಿರ್ಮಿಸಿ ಎಂದು ಸೂಚಿಸಿದರು.
ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿ
ಜನರಿಗೆ ಶುದ್ದ ನೀರು ನೀಡಬೇಕಾಗಿರುವುದು ಕಾನೂನಿನಲ್ಲಿದ್ದರೂ ಪಾಲನೆಯಾಗುತ್ತಿಲ್ಲ. ಇಂದಿನ ಭೇಟಿಯ ವೇಳೆ ಅಧಿಕಾರಿಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡದೇ ಇರುವುದು ಕೆರೆಗಳ ದುಸ್ಥಿತಿಗೆ ಕಾರಣವಾಗಿದೆ. ಈಗಾಗಲೇ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 7(2) ಸ:ವಾ 9(3) ರಡಿ ಸ್ವಯಂ ಪ್ರೇರಿತ ದೂರು (ಸುಮೋಟೋ) ದಾಖಲಿಸಿಕೊಳ್ಳಲಾಗಿದ್ದು, ಈ ಪರಿಸ್ಥಿತಿ ನೋಡಿ, ಇನ್ನೂ ಹೆಚ್ಚಿನದಾಗಿ ಎದರುದಾರರನ್ನು ಸೇರಿಸುತ್ತೇನೆ. ಎಲ್ಲೂ ಇಲ್ಲದ ಕಲುಷಿತ ವಾತಾವರಣ ಬೆಂಗಳೂರು ಸಮೀಪದಲ್ಲಿದೆ. ನಾನು ಇನ್ನೂ ಮೂರು ವರ್ಷ ಇರಲಿದ್ದು, ಪ್ರತಿ ತಿಂಗಳು ನಿಗಾ ವಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ದಂಡು
ಉಪಲೋಕಾಯುಕ್ತರು ಮಂಗಳವಾರ ಕೆರೆಗಳ ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ದೊಡ್ಡಬಳ್ಳಾಪುರ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹತ್ತಾರು ಕಾರುಗಳೊಂದಿಗೆ ಭೇಟಿ ನೀಡಿದ್ದರು.
ಹಾಗೆಯೇ ನೂರಾರು ಜನ ಸ್ಥಳೀಯ ಗ್ರಾಮಗಳ ಜನರು ಇದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಭೇಟಿ, ಸಭೆಗಳು ಸುಮಾರು 6 ವರ್ಷಗಳಿಂದಲು ಹತ್ತಾರು ಬಾರಿ ನಡೆದಿವೆ. ಆದರೆ ಇದುವರೆಗೂ ಕೆರೆಗೆ ಕಲುಷಿತ ನೀರು ಬರುವುದು ಮಾತ್ರ ನಿಂತಿಲ್ಲ. ಲೋಕಾಯುಕ್ತರ ಭೇಟಿಯಿಂದಲು ತ್ಯಾಜ್ಯ ನೀರು ಕೆರೆಗೆ ಹರಿದು ಬರುವುದು ನಿಲ್ಲದೇ ಇದ್ದರೆ ನಮ್ಮ ಮುಂದಿನ ಹೋರಾಟದ ರೂಪರೇಷೆಗಳನ್ನು ಬದಲಾಯಿಸಿಕೊಳ್ಳಬೇಕಾಗಲಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಹೋರಾಟ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಒ ಡಾ.ಕೆ.ಎನ್.ಅನುರಾಧ, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ತಾಲೂಕು ಪಂಚಾಯಿತಿ ಇಒ ಮಂಜುನಾಥ ಹರ್ತಿ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಾದ ಶಿವಕುಮಾರ್, ಸೇರಿದಂತೆ ಸ್ಥಳೀಯ ಗ್ರಾಮಗಳ ಮುಖಂಡರು ಹಾಗೂ ಅರ್ಕಾವತಿ ಹೋರಾಟ ಸಮಿತಿ ಸದಸ್ಯರು ಇದ್ದರು.