ಬೆಂಗಳೂರು ಗ್ರಾಮಾಂತರ ಜಿಲ್ಲೆ: ದೇವನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಮೈ ಭಾರತ್ ಇಲಾಖೆ ಸಹಯೋಗದಲ್ಲಿ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು (National Voters Day) ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಿ.ಎಸ್.ಶ್ರೀನಾಥಗೌಡ, ಸಂವಿಧಾನದ 324ನೇ ವಿಧಿಯನ್ವಯ ಸ್ಥಾಪಿಸಲಾದ ರಾಷ್ಟ್ರೀಯ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಪ್ರಯುಕ್ತ 2011ನೇ ಸಾಲಿನಿಂದ ಪ್ರತಿ ವರ್ಷವು ಜನವರಿ-25 ರಂದು ರಾಷ್ಟ್ರೀಯ ಮತದಾರ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ.

ಈ ಕಾರ್ಯದಲ್ಲಿ ಮತದಾನದ ಅರಿವು, ಯುವ ಮತದಾರರ ಹಕ್ಕುಗಳು ಮತ್ತು ಚುನಾವಣೆಯಲ್ಲಿ ಮತಗಟ್ಟೆಗೆ ಬರುವ ಮತದಾರರಿಗೆ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಅರ್ಥಪೂರ್ಣವಾಗಿ ಕಾರ್ಯಗಳನ್ನು ದೇಶವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯೋಜನಾ ನಿರ್ದೇಶಕ ಹಾಗೂ ಸಹಾಯಕ ಮತದಾರ ನೋಂದಾಣಿಧಾರಿ ರಮೇಶ್, ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದ ಧ್ವನಿಯಾಗಿ ಯುವ ಮತದಾರರು ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ಚುನಾವಣೆಯನ್ನು ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೇ ನ್ಯಾಯಸಮ್ಮತವಾಗಿ ಮತ್ತು ವಿವೇಚನೆಯ ಮತದಾನ ಮಾಡಲು ಎಲ್ಲಾ ಯುವ ಮತದಾರರಿಗೆ ಕರೆ ನೀಡಿದರು.
ತಹಶಿಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಎಲ್ಲಾ ಅರ್ಹ ಯುವ ಮತದಾರರು ಮತದಾರರಾಗಿ ನೋಂದಣಿ ಮಾಡಿಸಲು ಕಾಲಕಾಲಕ್ಕೆ ತಾಲ್ಲೂಕು ಆಡಳಿತದಿಂದ ವಿಶೇಷ ನೋಂದಣಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. ಅಲ್ಲದೆ ಅನ್ಲೈನ್ ನೋಂದಣಿಗೆ ಸಹ ಅವಕಾಶ ಕಲ್ಪಿಸಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶ್.ಎನ್, ಜನರಿಗೆ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿರುವ ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಇಲ್ಲಿ ಮತದಾರರಿಗೆ ಪ್ರಭುಗಳಾಗಿದ್ದು, ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೇ ನ್ಯಾಯಸಮ್ಮತ ಮತದಾನ ಮಾಡಬೇಕಿದೆ.
ಚುನಾವಣೆಗೆ ವಿವೇಚನೆಯ ಮತದಾನ ಮಾಡಲು ಮತ್ತು ಎಲ್ಲಾ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳುವ ಮೂಲಕ ದೇಶದ ಭವಿಷ್ಯದ ದೃಷ್ಠಿಯಿಂದ ಜಾಗೃತ ಮತದಾರರಾಗಿ ಯುವ ಮತದಾರರು ಪರಿವರ್ತನೆಗೊಳ್ಳಲು ಕರೆ ನೀಡಿದರು.

ಕಾರ್ಯಕ್ರಮ ಅಂಗವಾಗಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ಮತ್ತು ಬಿ.ಎಲ್.ಓ ಗಳಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು.
ಮೈಭಾರತ್ ಸಂಸ್ಥೆಯ ಶ್ರೀವಾಣಿ, ದೇವನಹಳ್ಳಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಸಾದ್, ಮಂಜುಳ, ಸುನೀತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮಹಾಂತೇಶ್ಓಲೇಕಾರ್, ರಂಗಪ್ಪ, ಶರಣ್ಯ, ಎಂ.ಎಸ್.ಶ್ರೀಧರ್, ಸಿ.ಹಂಸ, ತಾಲ್ಲೂಕು ಪಂಚಾಯಿತಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.