ದೊಡ್ಡಬಳ್ಳಾಪುರ: ಸಾಮಾಜಿಕ ನ್ಯಾಯ ಹಾಗೂ ಏಕತೆ, ಸಮಗ್ರತೆಗಳನ್ನು ಅಳವಡಿಸಿಕೊಂಡು ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ರೂಪಿತವಾಗಿರುವ ಭಾರತದ ಸಂವಿಧಾನದಲ್ಲಿ ನೀಡಿರುವ ಮೀಸಲಾತಿ ಹಾಗೂ ಮೂಲಭೂತ ಹಕ್ಕುಗಳಿಂದಾಗಿ ದೇಶದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ನಮ್ಮ ಸಂವಿಧಾನದ ಆಶಯಗಳನ್ನು ನೆರವೇರಿಸಬೇಕಿರುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಹೇಳಿದರು.

ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 77ನೇ ಗಣರಾಜ್ಯೋತ್ಸವ (77th Republic Day) ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆ ಸ್ಥಂಭವೆನಿಸಿರುವ ಸುದ್ಧಿ ಮಾಧ್ಯಮ ಇಂದು ಸ್ವತಂತ್ರ್ಯವಾಗಿ ತಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಸಂವಿಧಾನ ಕಾರಣವಾಗಿದೆ. ಮತದಾನದ ಹಕ್ಕು ದೇಶದ ರಾಜಕೀಯವನ್ನು ರೂಪಿಸಲು ಮಹತ್ವದ ಫಾತ್ರ ವಹಿಸುತ್ತದೆ. ಚುನಾವಣೆಗಳಲ್ಲಿನ ಮೀಸಲಾತಿಯಿಂದಾಗಿ ಹಿಂದುಳಿದ ಸಮುದಯದವರು ಅಧಿಕಾರಕ್ಕೆ ಬರಲು ನೆರವಾಗಿದೆ. ಆತ್ಮ ನಿರ್ಭರ ಭಾರತ ಸಂಕಲ್ಪದ ಆಶಯವನ್ನು ಅಭಿವೃದ್ದಿ ಕಾರ್ಯಗಳನ್ನು ಜಿಲ್ಲಾಡಳಿತ ಮುನ್ನಡೆಸುತ್ತಿದೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, 2047ರ ವಿಕಸಿತ ಭಾರತ ಸಂಕಲ್ಪಕ್ಕೆ ಮುಂದಿನ ಪೀಳಿಗೆ ಸಜ್ಜಾಗಬೇಕಿದ್ದು, ಪ್ರಧಾನಿ ನರೇಂದ್ರ ಮೋದಿ ಆಶಯ ಈಡೇರಬೇಕಿದೆ. ಎಐ ತಂತ್ರಜ್ಞಾನ, ನವೋದ್ಯಮಗಳು ಇಂದಿನ ಸಮಾಝದ ಭವಿಷ್ಯ ಬದಲಾಯಿಸಬಹುದಾಗಿದೆ. ದೇಶದ ಉಜ್ವಲ ಭವಿಷ್ಯಕ್ಕೆ ಇಂದಿನ ಪೀಳಿಗೆ ಶ್ರಮ ವಹಿಸಬೇಕಾಗಿದ್ದು, ಮೊದಲು ಉತ್ತಮ ನಾಗರಿಕರಾಗಬೇಕಾಗಿದೆ. ಹಣ ಸ್ವಾರ್ಥ ಹೆಚ್ಚಾಗುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ. ಹಲವೆಡೆ ಜನಪ್ರತಿನಿಧಿಗಳ ಕೊರತೆ ಕಾಣುತ್ತಿದ್ದು, ಅಧಿಕಾರಿಗಳು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಬೀರೇಶ್.ಯು, ಕೃಷ್ಣಪ್ಪ.ಎಚ್, ಶಿವರೆಡ್ಡಿ (ಸಾಂಸ್ಕೃತಿಕ ಕ್ಷೇತ್ರ), ಸಮದ್ವ, ಹರೀಶ್.ಆರ್, ಹಿತಶ್ರೀ.ಕೆ.ಎಂ, ಯಶಪ್ರದ (ಕ್ರೀಡಾ ಕ್ಷೇತ್ರ), ಡಾ.ದತ್ತು ಸಿಂಗ್ (ವೈದ್ಯಕೀಯ), ನಾಗರತ್ನಮ್ಮ (ಪ್ರಗತಿಪರ ಸಂಘಟನೆ), ನವೀನ್ ಕುಮಾರ್ (ಸಮಾಜ ಸೇವೆ), ರಾಧಾಮಣಿ.ಬಿ, ವರಲಕ್ಷ್ಮಿ.ವಿ, ಜಯಶ್ರೀ(ಸಾರ್ವಜನಿಕ ಸೇವೆ), ಮುತ್ಯಾಲಕ್ಕ (ಪೌರ ಕಾರ್ಮಿಕರು) ಸಾಧಿಕ್ ಫಾಷಾ (ಪೊಲೀಸ್ ಇಲಾಖೆ), ಗುರು ಪ್ರಸಾದ್ (ಪತ್ರಿಕೋದ್ಯಮ), ರವಿಕುಮಾರ್.ಎಂ.ಜಿ. (ಪ್ರಗತಿಪರ ರೈತ) , ಕೀರ್ತನ.ಬಿ.ಎಸ್(ಬಾಲಪ್ರತಿಭೆ) ಅವರನ್ನು ಸನ್ಮಾನಿಸಲಾಯಿತು.
ಕಳೆದ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಬಾರಿ ಲ್ಯಾಪ್ಟ್ಯಾಪ್ ಬದಲಾಗಿ 50 ಸಾವಿರ ರೂಗಳನ್ನು ನೇರ ನಗದು ಪಾವತಿ ಮಾಡಲಾಗಿದ್ದು, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಾದ ಪ್ರಿಯಾಂಕ.ಕೆ.ಎಸ್, ನಮ್ರತಾ.ವಿ, ಗಿರೀಶ್.ಜಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಎನ್.ಸಿ.ಸಿ.ಅಧಿಕಾರಿ ಅಶ್ವಿನಿ.ಬಿ.ಕೆ ನೇತೃತ್ವದಲ್ಲಿ ಎನ್.ಸಿ.ಸಿ, ಸೇವಾದಳ, ಪೊಲೀಸ್ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬ್ಯಾಂಡ್ ಸೆಟ್ನ್ನೊಳಗೊಂಡ ಆಕರ್ಷಕ ಪಥಸಂಚಲನ ನಡೆಯಿತು.
ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಗೌರವ ವಂದನೆ ಸ್ವೀಕರಿಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ.ಕೆ.ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ತಹಶೀಲ್ದಾರ್ ಮಲ್ಲಪ್ಪ.ಕೆ.ಯರಗೋಳ, ಪೌರಾಯುಕ್ತ ಆರ್.ಕಾರ್ತಿಕೇಶ್ವರ, ತಾಲೂಕು ಪಂಚಾಯಿತಿ ಕಾರ್ಯ್ ನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ.ಟಿ.ಎಸ್, ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಸೇರಿದಂತೆ ನಗರಸಭೆ ಸದಸ್ಯರು ಹಾಜರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.