ನವದೆಹಲಿ: ದೇಶದಲ್ಲಿ ಪೆಟ್ರೊಲ್ ಡಿಸೆಲ್ ಸಮಸ್ಯೆ ಇಲ್ಲಾ. ಎಲ್ ಪಿಜಿ (LPG) ಗಲ್ಪ್ ದೇಶಗಳಿಂದ ಬರುವುದು ನಿಂತಿದೆ. ನನ್ನ ಪ್ರಕಾರ ಅದೂ ಆದಷ್ಟು ಬೇಗ ಆರಂಭವಾಗಲಿದೆ. ಮುಂದಿನ ಒಂದು ವಾರದಲ್ಲಿ ಬಹುತೇಕ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ದೇಶದಲ್ಲಿ ಆಂತರಿಕ ಉತ್ಪಾದನೆ ಹೆಚ್ಚಳ ಮಾಡಬೇಕಾಗುತ್ತದೆ. ಲಾಜೆಸ್ಟಿಕ್ಸ್ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಅದರಿಂದ ಇರಾನಿನಲ್ಲಿ ನಮ್ಮ ದೇಶದ ಮೂರು ಹಡಗುಗಳಿಗೆ ಇರಾನ್ ಅವಕಾಶ ಕಲ್ಪಿಸಿದೆ. ಇದು ಮೋದಿ ಸರ್ಕಾರದ ಸಕಾರಾತ್ಮಕ ಪರಿಣಾಮವಾಗಿದೆ. ಆ ಕಾರಣದಿಂದ ಪೆಟ್ರೊಲ್ ಮತ್ತು ಡಿಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಈಗ ಎಲ್ ಪಿಜಿ ಸಮಸ್ಯೆ ಇದೆ. ಆ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಪ್ರತಿಪಕ್ಷದವರು ದೇಶದ ಯಾವುದೇ ಭಾಗದಲ್ಲಿ ಏನೇ ನಡೆದರೂ, ಎಲ್ಲಿಯೇ ನಾಯಿಯೆ ಕಡಿದರೂ ಅದಕ್ಕೆ ಮೋದಿಯವರಿಗೆ ಲಿಂಕ್ ಮಾಡುತ್ತಾರೆ. ಅವರ ಪರಿಸ್ಥಿತಿ ಅಷ್ಟು ಕೆಟ್ಟಿದೆ. ದೇಶದ ಬಗ್ಗೆ ಅವರು ಯಾವತ್ತೂ ಯೋಚನೆ ಮಾಡಿಲ್ಲ.
ಇಡಿ ಜಗತ್ತು, ದೇಶ ಚಿಂತೆಯಲ್ಲಿದೆ. ಬೇರೆ ದೇಶಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ಅವರು ನೋಡಬೇಕು. ನಮ್ಮ ದೇಶದಲ್ಲಿ ಬೇರೆ ದೇಶಗಳಿಗಿಂತ ಉತ್ತಮ ಪರಿಸ್ಥಿತಿ ಇದೆ. ಅವರಿಗೆ ಎಲ್ಲದರಲ್ಲೂ ರಾಜಕಾರಣ ಮಾಡಬೇಕಿದೆ. ದೇಶದ ಅಭಿವೃದ್ದಿಯಲ್ಲಿ ಸಂಕಷ್ಟದಲ್ಲಿಯೂ ರಾಜಕಾರಣ ಮಾಡಲು ಬಯಸುತ್ತಾರೆ ಎಂದು ಆರೋಪಿಸಿದರು.