ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಸಿಸಿ ಟಿವಿ ಕ್ಯಾಮೆರಾ (CCTV camera) ಅಳವಡಿಸಿಕೊಂಡು ಅಪರಾಧ ಪ್ರಕರಣಗಳಿಂದ ಎಚ್ಚರಿಕೆ ವಹಿಸುವಂತೆ ಪೊಲೀಸರು (Police) ಸಾರ್ವಜನಿಕರಿಗೆ ಪ್ರಚಾರ ಮಾಡುತ್ತಾರೆ. ಆದರೆ ಪೊಲೀಸರೇ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾಗಳು ರಿಚಾರ್ಜ್ ಇಲ್ಲದೆ ಸ್ಥಗಿತಗೊಂಡಿರುವ ಘಟನೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಇತ್ತೀಚೆಗಷ್ಟೇ ವರ್ಗಾವಣೆಯಾದ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ದನ್ ಅವರು ಜನಪರ ಕಾಳಜಿಯಿಂದ, ವಿವಿಧ ಸಂಘ ಸಂಸ್ಥೆ, ಗ್ರಾಮಪಂಚಾಯಿತಿಗಳ ಆರ್ಥಿಕ ನೆರವಿನೊಂದಿಗೆ ಅಪರಾಧ ಪ್ರಕರಣಗಳನ್ನು ತಡೆಯಲು, ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಠಾಣೆ ವ್ಯಾಪ್ತಿಯಲ್ಲಿ 23ಕ್ಕೂ ಹೆಚ್ಚು ಸೋಲಾರ್ ಆಧಾರಿತ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಬಂಕೇನಗಳ್ಳಿಯಿಂದ ಲಿಂಗಧೀರನಹಳ್ಳಿ ವರೆಗೆ, ನೆಲ್ಲುಕುಂಟೆ ಕ್ರಾಸ್ನಿಂದ ಆರೂಢಿ ವರೆಗೆ ಅಳವಡಿಸಲಾಗಿರುವ ಈ ಎಲ್ಲಾ ಸಿಸಿ ಟಿವಿ ಕ್ಯಾಮೆರಾಗಳು ಕಳೆದ 3 ತಿಂಗಳಿಂದ ರೀಚಾರ್ಜ್ ಮಾಡದ ಕಾರಣ ಸ್ಥಗಿತಗೊಂಡಿವೆ.
ಇದರಿಂದಾಗಿ ರಾವ್ ಗಣೇಶ್ ಜನಾರ್ದನ್ ಅವರು ಕಾಳಜಿಯಿಂದ ಅಳವಡಿಸಿದ ಸಾವಿರಾರು ರೂ ಮೌಲ್ಯದ ಸಿಸಿ ಟಿವಿ ಕ್ಯಾಮೆರಾಗಳು ವ್ಯರ್ಥವಾಗುತ್ತಿವೆ.
ಹೊಸಹಳ್ಳಿ ಪೊಲೀಸ್ ಠಾಣೆಗೆ ಜನಪರ ಪೊಲೀಸ್ ಠಾಣೆ ಎಂಬ ಮಾನ್ಯತೆ ಹೊಂದಿದೆ. ಆದರೆ ಇನ್ಸ್ಪೆಕ್ಟರ್ ವರ್ಗಾವಣೆ ಬಳಿಕ ಹುದ್ದೆ ನೇಮಕವಾಗದೆ ಉಳಿದಿದ್ದು, ಅನುದಾನದ ಕೊರತೆಯಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ರೀಚಾರ್ಜ್ ಮಾಡಿಸಲಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದೆ.
ಇದರ ನಡುವೆ ಕೆಲ ಸಿಬ್ಬಂದಿಗಳು ವಾಹನಗಳನ್ನು ತಡೆದು ದಂಡ ವಿಧಿಸಲು ಮಾತ್ರ ಸೀಮಿತರಾಗಿದ್ದು, ಬೀಟ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂಬ ಆಕ್ರೋಶ ಕೂಡ ಸಾರ್ವಜನಿಕರದ್ದಾಗಿದೆ.