ದೊಡ್ಡಬಳ್ಳಾಪುರ: ಡಕಾಯಿತಿ ಮತ್ತು ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ (Police) ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳಿಗೆ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಶೈಲು ಶಿಕ್ಷೆ (Prison sentence) ಹಾಗೂ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಘಟನೆ ವಿವರ
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಡಕಾಯಿತಿ ಮತ್ತು ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಆರೋಪಿಗಳಾದ ಹೇಮಂತ್ ಕುಮಾರ್ ಹಾಗೂ ಸೋನು ಅವರನ್ನು ಬಂಧಿಸಲು ತೆರಳಿದ್ದರು.
ಆರೋಪಿಗಳು ಕಾರಿನಲ್ಲಿ ದೊಡ್ಡಬಳ್ಳಾಪುರ – ಡಾಬಸ್ ಪೇಟೆ ಮೂಲಕ ತುಮಕೂರು ಕಡೆಗೆ ಹೋಗುತ್ತಿರುತ್ತಾರೆಂದು ಬಂದ ಮಾಹಿತಿ ಮೇರೆಗೆ, ಪೊಲೀಸರು ಸರ್ಕಾರಿ ವಾಹನಗಳಲ್ಲಿ ಕೊಡಿಗೇಹಳ್ಳಿ ಕಡೆಯಿಂದ ಆರೋಪಿಗಳನ್ನು ಹಿಂಬಾಲಿಸಿಕೊಂಡು ಬಂದು ಕೆಸ್ತೂರು ಗ್ರಾಮದ ಬಳಿ ಬಂಡಿಜಾಡು ರಸ್ತೆಯಲ್ಲಿ ಆರೋಪಿಗಳ ಕಾರನ್ನು ಅಡ್ಡ ಹಾಕಿದ್ದಾರೆ.
ಈ ವೇಳೆ ಬಂಧಿಸಲು ಹೋದಾಗ ಇಬ್ಬರೂ ಆರೋಪಿತರುಗಳು ಕೈಗಳಲ್ಲಿ ಚಾಕುಗಳನ್ನು ಹಿಡಿದುಕೊಂಡು ಬಂದು, ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿಡಿದುಕೊಳ್ಳಲು ಹೋದ ಪೊಲೀಸರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದರಂತೆ. ಈ ಕುರಿತು ಆರೋಪಿಗಳ ವಿರುದ್ಧ ಅಂದಿನ ತನಿಖಾಧಿಕಾರಿಗಳಾಗಿದ್ದ ಪೊಲೀಸ್ ಇನ್ಸೆಕ್ಟರ್ ಕುಮಾರ್ ಎ.ವಿ ಅವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಸದರಿ ಪ್ರಕರಣವು ದೊಡ್ಡಬಳ್ಳಾಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಸದರಿ ಪ್ರಕರಣದಲ್ಲಿ ಆರೋಪಿತರು ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿರ್ಮಲ. ಕೆ ಅವರು ಪ್ರಕರಣದ ಇಬ್ಬರೂ ಆರೋಪಿತರಿಗೆ ಶಿಕ್ಷೆ ವಿಧಿಸಿದ್ದಾರೆ.
ಇದರ ಅನ್ವಯ ಆರೋಪಿಗಳಿಗೆ ಐ.ಪಿ.ಸಿ ಕಲಂ;307 ರ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10,000 ರೂ ದಂಡ. ಐ.ಪಿ.ಸಿ ಕಲಂ;332 ರ ಅಪರಾಧಕ್ಕಾಗಿ 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ತಲಾ 5,000 ರೂ ದಂಡ. ಮತ್ತು ಐ.ಪಿ.ಸಿ ಕಲಂ; 353 ಅಪರಾಧಕ್ಕಾಗಿ 2 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜನೆ ಇಲಾಖೆ ವತಿಯಿಂದ ಸರ್ಕಾರಿ ಅಭಿಯೋಜಕರಾದ ಟಿ.ಎನ್ ನಟರಾಜ ಅವರು ವಾದ ಮಂಡಿಸಿದ್ದರು.