ದೊಡ್ಡಬಳ್ಳಾಪುರ: ಗೋತಳಿಗಳನ್ನು ಸಂರಕ್ಷಿಸುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರು ಕೃಷಿಯಲ್ಲಿ ತೊಡಗುವ ಮೂಲಕ ಗೋ ಸಂಪತ್ತನ್ನು ರಕ್ಷಿಸಿ ನಾಡಿಗೆ ಸೇವೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪವಿರುವ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯಲ್ಲಿ ಬೃಂದಾವನ – ಕೃಷಿ ಅರಣ್ಯ ಯೋಜನೆಯ ಸಸಿ ನೆಡು ಸಪ್ತಾಹದಲ್ಲಿ ಶುಕ್ರವಾರ ಭಾಗವಹಿಸಿ, ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಅವರು ಮಾತನಾಡಿದರು.
ಗುಡ್ಡಗಾಡು ಪ್ರದೇಶದ ಮಧ್ಯೆ ಸಹ, ಕೃಷಿ ಅರಣ್ಯವನ್ನು ಬೆಳಸುತ್ತಿದ್ದು, ರೈತರು ಮನಸ್ಸು ಮಾಡಿದರೆ, ಎಲ್ಲಾದರೂ ಸಹ ಕೃಷಿ ಮಾಡಲು ಸಾಧ್ಯ ಎಂದು ತೋರಿಸಿದ್ದು, ನಾಡಿನ ರೈತರಿಗೆ ಪ್ರೇರಣೆಯಾಗಿದೆ. ಇದೊಂದು ಅದ್ಬುತ ಕೆಲಸವಾಗಿದ್ದು, ರೈತರಿಗೆ ಅನುಕೂಲವಾಗುವ ಗೋತಳಿಗಳ ಸಂರಕ್ಷಣೆಯಲ್ಲಿ ರಾಷ್ಟ್ರೋತ್ತಾನ ಪರಿಷತ್ ಕೈಗೊಂಡಿರುವ ಕಾರ್ಯಗಳು ಅಭಿನಂದನೀಯವಾಗಿದೆ. ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ ಎಂದು ಕರೆ ನೀಡಿದರು.
ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಏಳು ದಿನಗಳ ಕಾಲ ಸಸಿ-ನೆಡು ಸಪ್ತಾಹ ನಡೆಯಲಿದ್ದು, ವಿವಿಧ ಮಾದರಿಯ ಆರು ಸಾವಿರ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆಗಸ್ಟ್ 15ರವರೆಗೆ ಸಪ್ತಾಹ ನಡೆಯಲಿದೆ. ಪ್ರತಿದಿನ ಒಬ್ಬೊಬ್ಬ ಗಣ್ಯರು ಆಗಮಿಸಿ ಸಸಿ ನೆಡಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ.ವೈ.ವಿಜಯೇಂದ್ರ, ಎಸ್.ಆರ್.ವಿಶ್ವನಾಥ್, ಆರ್ಎಸ್ಎಸ್ ಸಹ ಸರ ಕಾರ್ಯವಾಹಕ ಮುಕುಂದ, ರಾಷ್ಟ್ರೋತ್ಥಾನ ಪರಿಷತ್ ಉಪಾಧ್ಯಕ್ಷ ದ್ವಾರಕಾನಾಥ್ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..