ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಂಎಸ್ಜಿಪಿ ತ್ಯಾಜ್ಯ ಘಟಕದ ವಿರುದ್ಧದ ರೈತ ಹೋರಾಟದ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನಡೆದುಕೊಂಡ ದೌರ್ಜನ್ಯದ ನಡೆಯ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಹವಾಲು ನೀಡಿ, ಅಧಿವೇಶನದಲ್ಲಿ ಈ ಕುರಿತು ಸಮಗ್ರವಾಗಿ ಚರ್ಚಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ.
ಬಿಡದಿಯ ಕೇತಗಾನಹಳ್ಳಿಯ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತ್ಯಾಜ್ಯ ಘಟಕ ವಿರುದ್ಧದ ಹೋರಾಟದಲ್ಲಿ ತೊಡಗಿದ್ದ ರೈತ ಮುಖಂಡರ ಮೇಲಿನ ದೌರ್ಜನ್ಯ ಖಂಡನೀಯ. ರೈತರನ್ನು ಕೆಣಕಿ ಉಳಿದ ಸರ್ಕಾರ ಇತಿಹಾಸದಲ್ಲಿಯೇ ಇಲ್ಲ. ನಾನೇ ಖುದ್ದು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ನ್ಯಾಯ ಕೊಡಿಸುತ್ತೇನೆ. ರೈತರ ಹೋರಾಟವನ್ನು ಹೈಜಾಕ್ ಮಾಡಿರುವ ಸ್ಥಳೀಯ ಶಾಸಕರ ನಡೆ ಸಮಂಜಸವಲ್ಲ. ರೈತರ ಹೋರಾಟ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರೆನ್ನಲಾಗಿದೆ.
ಮನವಿ ನೀಡಿ ಮಾತನಾಡಿದ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ಶಾಂತಿಯುತವಾಗಿ ಯಶಸ್ಸಿನ ಕಡೆಗೆ ನಡೆಯುತ್ತಿದ್ದ ರೈತರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಯಾರು ಯಾರು ಏನೇನು ಹಕೀಕತ್ತು ನಡೆಸಿದ್ದಾರೆಂಬುದು ತಿಳಿದಿದೆ. ರೈತನಿಗೆ ದ್ರೋಹ ಎಸಗಿದ ಎಲ್ಲರೂ ಶೀಘ್ರದಲ್ಲೇ ಅದರ ಫಲವನ್ನು ಅನುಭವಿಸಲಿದ್ದಾರೆ. ಎಂಎಸ್ಜಿಪಿ ಘಟಕ ಮುಚ್ಚುವುದು ಖಚಿತ. ಕುಮಾರಸ್ವಾಮಿಯವರ ಭಾಗವಹಿಸುವಿಕೆಯಿಂದ ನಮ್ಮ ಹೋರಾಟಕ್ಕೆ ನೂರಾನೆ ಬಲ ಸಿಕ್ಕಂತಾಗಿದೆ. ಈ ಹೋರಾಟದಲ್ಲಿ ಅನ್ನದಾತನಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದರು.
ಈ ವೇಳೆ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಆರ್.ಸಿದ್ಧಲಿಂಗಯ್ಯ , ನವ ಬೆಂಗಳೂರು ಹೋರಾಟ ಸಮಿತಿ ಮುಖಂಡ ಜಗದೀಶ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….