ಬೆಂಗಳೂರು, (ಸೆ.18): ಚೈತ್ರಾ ಕುಂದಾಪುರ ಅವರು ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಕುರಿತು ನಡೆಸಿದ್ದಾರೆನ್ನಲಾದ ವಂಚನೆ ಆರೋಪದ ಕುರಿತು ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಾಗಿತ್ತು. ಈ ಬಗ್ಗೆ ನಾನು ಚಕ್ರವರ್ತಿ ಸೂಲಿಬೆಲೆಯವರಲ್ಲಿ ಪ್ರಸ್ತಾಪಿಸಿದ್ದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಈ ಕುರಿತಂತೆ ಮಾತನಾಡಿರುವ ಅವರು, ಕೆಲವು ದಿನಗಳ ಹಿಂದೆ ಸತ್ಯಜಿತ್ ಸುರತ್ಕಲ್ ಎಂಬ ವ್ಯಕ್ತಿಯೊಬ್ಬರು ಕರೆ ಮಾಡಿ ಗೋವಿಂದ ಬಾಬು ಪೂಜಾರಿ ಅವರಿಂದ ಹಣ ತೆಗೆದುಕೊಂಡಿದ್ದರೆ ಅದನ್ನು ಹಿಂದಿರುಗಿಸಬೇಕು ಎಂದರು. ನಾನು ಈ ಮಾತು ಕೇಳಿ ಕೋಪಗೊಂಡೆ. ಆರೋಪಿಸುತ್ತಿರುವ ಕುರಿತು ಪ್ರಶ್ನಿಸಿದಾಗ ಅವರು ಕರೆ ಕಡಿತಗೊಳಿಸಿದರು.
ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿ ಅದು ನೀವಲ್ಲ, ಅಭಿನವ ಹಾಲಶ್ರೀ ಎಂದು ತಿಳಿಸಿದ್ದರಿಂದ ಮತ್ತೆ ಕೋಪಗೊಂಡು, ವಿಚಾರ ತಿಳಿಯದೆ ನನ್ನ ಮೇಲೆ ವೃಥಾ ಆರೋಪ ಮಾಡಿದ್ದೇಕೆಂದು ಆಕ್ರೋಶ ವ್ಯಕ್ತಪಡಿಸಿದೆ.
ಕೂಡಲೆ ಈ ಕುರಿತು ನಾನು ಚಕ್ರವರ್ತಿ ಸೂಲಿಬೆಲೆಯರನ್ನು ಸಂಪರ್ಕಿಸಿದೆ. ಅಭಿನವ ಹಾಲಶ್ರೀ ನಿಮ್ಮ ಯುವ ಬ್ರಿಗೇಡ್ ನಲ್ಲೂ ಮುಖ್ಯಸ್ಥರಾಗಿದ್ದಾರೆ. ಚೈತ್ರಾ ಕುಂದಾಪುರ ಥರದವರಿಂದ ಕಳಂಕ ಮೆತ್ತಿಕೊಳ್ಳುತ್ತದೆ ಎಂದಾಗ, ಚಕ್ರವರ್ತಿ ಸೂಲಿಬೆಲೆಯವರು ಹೀಗೊಂದು ಸುದ್ದಿ ಹರಿದಾಡುತ್ತಿರುವುದು ನನಗೂ ಕೇಳಿಬಂದಿದೆ. ನಾನು ಸಿ.ಟಿ.ರವಿಯವರಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ್ದಾಗಿ ಸ್ವಾಮೀಜಿ ವಿವರಿಸಿದ್ದಾರೆ.
ಬಳಿಕ ನೇರವಾಗಿ ಚೈತ್ರಾ ಕುಂದಾಪುರಗೆ ಕರೆ ಮಾಡಿ ಕೇಳಿದಾಗ ಅವಳು ಸಂಪೂರ್ಣವಾಗಿ ಈ ಆರೋಪವನ್ನು ನಿರಾಕರಿಸಿದ್ದಾಗಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದು, ಈ ಬಗ್ಗೆ ನಮಗೆ ಸತ್ಯ ಹೇಳಲು ಯಾವುದೇ ಭಯವಿಲ್ಲ ಎಂದು ನುಡಿದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….