ಮಹರ್ಷಿ ವಿಶ್ರವಸು ಮತ್ತು ಕೈಕಸಿಯರಿಗೆ ಮೂರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಸೇರಿ ನಾಲ್ಕು ಜನ ಮಕ್ಕಳು. ಅವರಲ್ಲಿ ಮೂರು ಗಂಡು ಮಕ್ಕಳಾದ ರಾವಣ- ಕುಂಭಕರ್ಣ- ವಿಭೀಷಣ ಇವರೆಲ್ಲರ ಸಹೋದರಿ ‘ಶೂರ್ಪಣಕಿ’. ಹುಟ್ಟಿದಾಗ ಇವಳಿಗೆ ಇಟ್ಟ ಹೆಸರು ‘ಮೀನಾಕ್ಷಿ ದೀಕ್ಷಿತ’, ಇವಳ ಉಗರುಗಳು ಚಂದ್ರನಂತೆ ಸುಂದರ ವಾಗಿದ್ದು ‘ಚಂದ್ರನಖಿ’ ಎಂಬ ಹೆಸರು ಇಟ್ಟಿದ್ದರು.
ಇವಳಿಗೆ ಮನುಷ್ಯ ಹಾಗೂ ರಾಕ್ಷಸಿಯಾಗಿ ರೂಪ ಬದಲಿಸುವ ಶಕ್ತಿ ಇತ್ತು. ವಯಸ್ಸಿಗೆ ಬಂದ ಮೇಲೆ ಶೂರ್ಪಣಕೆ, ಕಾಲಕೇಯ ದಾನವ ರಾಜ ವಿದ್ಯುತ್ ಜಿಹ್ವಾ ಇಬ್ಬರು ಪರಸ್ಪರರು ಪ್ರೀತಿಸುತ್ತಾರೆ. ಶೂರ್ಪಿಣಿಕೆ ಪ್ರೀತಿಸುತ್ತಿ ರುವ ವಿಷಯವನ್ನು ಅಣ್ಣನಿಗೆ ತಿಳಿಸುವಂತೆ ಅತ್ತಿಗೆ ಮಂಡೋದರಿಗೆ ಹೇಳುತ್ತಾಳೆ. ಮಂಡೋದರಿ ಯಿಂದ ವಿಷಯ ತಿಳಿದ ರಾವಣನು ವಿದ್ಯುತ್ತ್ ಜಿಹ್ವನ ಜಾತಕವನ್ನು ಜಾಲಾಡುತ್ತಾನೆ. ರಾವಣ ಮಹಾ ಮೇಧಾವಿ ಪಂಡಿತ ವೇದ- ಉಪನಿಷತ್ತು- ಖಗೋಳ- ಜ್ಯೋತಿಷ್ಯ ಎಲ್ಲ ಶಸ್ತ್ರ ಶಾಸ್ತ್ರಗಳನ್ನು ಅರಿತು ಸಕಲ ವಿದ್ಯಾಪಾರಂಗತ ನಾಗಿದ್ದನು. ದಾನವ ರಾಜನಾದ ವಿದ್ಯುತ್ ಮೊದಲಿನಿಂದಲೂ ರಾವಣಗೆ ಎದುರಾಳಿಯಾಗಿದ್ದನು.
ಜಾತಕ ಪರಿಶೀಲಿಸಿದಾಗ ರಾವಣಗೆ ತಿಳಿಯಿತು. ತಂಗಿಯನ್ನು ಪ್ರೀತಿಸುವ ನಾಟಕವಾಡಿ ವಿದ್ಯುತ್ ವಿವಾಹ ಆಗುತ್ತಿದ್ದಾನೆ. ತಂಗಿಯ ಮೇಲಿನ ಪ್ರೀತಿ ಯಿಂದ ಅಲ್ಲ. ತನ್ನ ಶ್ರೀಮಂತ ಲಂಕಾ ಸಾಮ್ರಾಜ್ಯವನ್ನು ಕಬಳಿಸುವ ಸಂಚನ್ನು ಮಾಡಿದ್ದಾನೆ ಎಂದು ತಿಳಿಯಿತು. ಈ ವಿಷಯವನ್ನೆಲ್ಲ ತಿಳಿಸುವುದರೊಳಗಾಗಿ ಶೂರ್ಪಿಣಿಕೆ ಓಡಿಹೋಗಿ ವಿದ್ಯುತ್ ನನ್ನು ವಿವಾಹ ಮಾಡಿಕೊಂಡಿದ್ದಳು.
ಇದಾಗಿ ಕೆಲವು ಕಾಲ ಕಳೆದ ಮೇಲೆ ಒಮ್ಮೆ ರಾವಣನು ‘ರಸಾತಳ’ ಲೋಕ ವನ್ನು ವಶಪಡಿಸಿಕೊಳ್ಳಲು ಯುದ್ಧಕ್ಕೆ ಹೋಗುತ್ತಾನೆ. ಆ ಸಮಯದಲ್ಲಿ ವಿದ್ಯುತ್ತ್ ಗೂ ಮತ್ತು ರಾವಣಗೂ ವಾದ ವಿವಾದವಾಗಿ ಇಬ್ಬರೂ ಕಾದಾಡು ತ್ತಾರೆ. ರಾವಣನು ಅವನನ್ನು ಕೊಂದುಬಿಡುತ್ತಾನೆ.
ಇದನ್ನು ತಿಳಿದ ಶೂರ್ಪಣಿಕೆ ತನ್ನ ಗಂಡನನ್ನು ಬೇಕೆಂದೇ ರಾವಣ ಹತ್ಯೆ ಮಾಡಿದ್ದಾನೆ, ಮೊದಲಿನಿಂದಲೂ ತನ್ನ ಗಂಡನನ್ನು ಅವನಿಗೆ ಕಂಡರೆ ಆಗುತ್ತಿರಲಿಲ್ಲ ಎಂದು ಕೋಪಿಸಿ ಕೊಂಡು ರಾವಣನನ್ನು ಕೊಲ್ಲಲು ಹೊರಟಿದ್ದಳು. ನಿಜಾಂಶ ತಿಳಿದು ಸುಮ್ಮನಾದಳು. ಶೂರ್ಪಣಕಿ ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಬಹಳಷ್ಟು ದಿನ ಕೋಣೆ ಬಿಟ್ಟು ಈಚೆ ಬರಲಿಲ್ಲ. ಇದನ್ನು ಕಂಡು ರಾವಣನು, ತನ್ನ ತಂಗಿ ಹೀಗಿರುವು ದನ್ನು ಅವನಿಂದ ನೋಡಲಾಗಲಿಲ್ಲ. ಸಮಾಧಾನ ಮಾಡಿ ನಿನಗಿಷ್ಟವಾದ ಗಂಡನ್ನು ಹುಡುಕು ಅವನಿಗೆ ಕೊಟ್ಟು ಮದುವೆ ಮಾಡುವೆ ಎಂದು ಹೇಳಿದನು,ಹಾಗೂ ದುಃಖವನ್ನು ಮರೆಯಲು ಸ್ವಲ್ಪ ಕಾಲ ಸೋದರ ಖರ ಮತ್ತು ಧೂಷಣ ರಿರುವ ಕಾಡಿನಲ್ಲಿ ಅವರ ಜೊತೆ ಇರಲು ಕಳುಹಿಸಿಕೊಟ್ಟನು.
ಅದೇ ಸಮಯದಲ್ಲಿ ವನವಾಸಕ್ಕೆ ಬಂದಿದ್ದ, ರಾಮ-ಸೀತಾ, ಲಕ್ಷ್ಮಣರು ಪಂಚವಟಿ ಯಲ್ಲಿ ನೆಲೆಸಿದ್ದರು. ಒಮ್ಮೆ ಸುತ್ತಾಡುತ್ತಾ ಬಂದ ಶೂರ್ಪಣಕಿ ಪಂಚವಟಿ ಸಮೀಪ ಬರುತ್ತಾಳೆ. ಋಷಿಮುನಿಗಳಂತೆ ಇದ್ದು ತೇಜಸ್ವಿಯಾದ ರಾಮ ಲಕ್ಷ್ಮಣರನ್ನು ನೋಡಿ ಬೆರಗಾಗುತ್ತಾಳೆ. ತನಗೆ ತಕ್ಕ ಗಂಡು ಎಂದರೆ ಇವರೇ ಎಂದುಕೊಂಡು ತನ್ನ ರಾಕ್ಷಸರೂಪ ದಿಂದ ಸುಂದರ ಸ್ತ್ರೀಯಾಗಿ ರಾಮನಿರುವಲ್ಲಿ ಬಂದು ಅವನ ವಿಚಾರವನ್ನು ಕೇಳಿ, ನನ್ನನ್ನು ಮದುವೆಯಾಗು ಎಂದಳು.
ರಾಮನಿಗೆ ಅವಳನ್ನು ನೋಡಿ ಸ್ವಲ್ಪ ತಮಾಷೆ ಮಾಡ ಬೇಕು ಎನಿಸಿತು. ಅದಕ್ಕೆ ಹೇಳಿದ ನನಗೆ ಮದುವೆಯಾಗಿ ಪತ್ನಿಯಿದ್ದಾಳೆ. ನೀನು ಅದೋ ಅಲ್ಲಿ ಕಾಣುತ್ತಿರುವ ನನ್ನ ತಮ್ಮ ಲಕ್ಷ್ಮಣ ಅವನು ಮದುವೆ ಯಾದರೂ ಹೆಂಡತಿಯನ್ನು ಬಿಟ್ಟು ಬಂದಿದ್ದಾನೆ ಅವನಿಗೂ ಜೊತೆ ಆಗುತ್ತಿ ಅವನನ್ನು ಮದುವೆಯಾಗು ಎಂದನು. ದೂರದಲ್ಲೇ ಲಕ್ಷ್ಮಣ, ಗಮನಿಸುತ್ತಾ ರಾಮನು ಅವಳ ಜೊತೆ ಏನು ಮಾತಾಡುತ್ತಾನೆ ಎಂದು ಕುತೂಹಲದಿಂದ ಕಾಯುತ್ತಿದ್ದನು. ಆದರೆ ಅಷ್ಟರಲ್ಲಿ ಅವನ ಕಡೆಗೆ ಶೂರ್ಪಣಕಿ ಬಂದಳು. ಲಕ್ಷ್ಮಣನಿಗೆ ಮದುವೆಯಾಗುವಂತೆ ಕೇಳಿದಳು.
ಲಕ್ಷ್ಮಣ ಕೀಟಲೆ ಮಾಡಬೇಕೆಂದು, ನಾನು ಯಾವ ರಾಜ್ಯದ ಅರಸು ಅಲ್ಲ, ಕೇವಲ ಅಣ್ಣ ಅತ್ತಿಗೆಯರ ಸೇವಕ. ಅಲ್ಲಿ ಕುಳಿತಿರುವನು ನನ್ನ ಅಣ್ಣ ಅವನೇ ರಾಜ ಅವನನ್ನೇ ವಿವಾಹವಾಗು ಎಂದನು. ಅವಳು ಮತ್ತೆ ರಾಮನ ಬಳಿ ಬಂದಳು. ರಾಮನು ಅಂದು ಕೊಂಡನು ಇನ್ನು ಅವಳನ್ನು ಸತಾಯಿಸುವುದು ಸರಿಯಲ್ಲ ವೆಂದು, ನಾನು ಏಕ ಪತ್ನಿ ವ್ರತಸ್ಥ, ನೀನು ಬಹಳ ಸೌಂದರ್ಯವತಿ ಒಳ್ಳೆಯ ಪುರುಷನನ್ನು ನೋಡಿ ಮದುವೆಯಾಗು ಎಂದನು.
ಇದನ್ನು ಕೇಳಿದ ಶೂರ್ಪಣಿಕಿ ರಣಚಂಡಿಯಂತೆ ಕೋಪಗೊಂಡು, ನಿನ್ನ ಜೊತೆ ಆ ಸೀತೆ ಇರುವುದಕ್ಕಾಗಿ ಇಷ್ಟೆಲ್ಲ ಆಟ ಆಡುವೆಯಾ? ಎಂದು ರಾಕ್ಷಸ ರೂಪ ಧರಿಸಿ ಸೀತೆಯ ಮೇಲೆ ಆಕ್ರಮಣ ಮಾಡಲು ಹೊರಟಳು, ರಾಮನು ಅಡ್ಡ ಬಂದನು. ಲಕ್ಷ್ಮಣ ಕೋಪದಿಂದ ಅವಳ ಮೂಗು – ಕಿವಿ ಕತ್ತರಿಸಿದನು.
ತನ್ನ ವಿಕಾರವಾದ ಮುಖ ಹೊತ್ತು ಕೊಂಡು ಅಳುತ್ತಾ ಖರನಲ್ಲಿಗೆ ಬಂದಳು. ವಿಷಯ ತಿಳಿದ ಖರ ನು ಹದಿನಾಲ್ಕು ಸಾವಿರ ರಾಕ್ಷಸ ಸೈನ್ಯದೊಂದಿಗೆ ರಾಮ ಲಕ್ಷ್ಮಣರೂಂದಿಗೆ ಯುದ್ಧ ಮಾಡಿ ಸೋತು ಎಲ್ಲರೂ ಹತರಾದರು. ರಾವಣನ ಸೋದರ ಮಾವ ‘ಅಕಂಪನ’ ಮಾತ್ರ ತಪ್ಪಿಸಿಕೊಂಡು ಹೋಗಿ ರಾವಣನಿಗೆ ಸುದ್ದಿ ಮುಟ್ಟಿ ಸಿದನು. ಶೂರ್ಪಿಣಿಕೆ ಯು ಅಣ್ಣ ರಾವಣನಲ್ಲಿಗೆ ಬಂದು ರಾಮ -ಲಕ್ಷ್ಮಣರ ಶೌರ್ಯವನ್ನು, ಸೀತೆಯ ಸೌಂದರ್ಯವನ್ನು, ಅವರು ತನಗೆ ಮಾಡಿದ ಅವಮಾನವನ್ನು ಎಲ್ಲಾ ಹೇಳಿ ರಾವಣನಿಗೆ ಕಿಚ್ಚೆಬ್ಬಿಸಿದಳು.
ಮುಂದೆ, ಸೀತೆಯ ಅಪಹರಣ, ರಾಮ -ರಾವಣರ ಘನ ಘೋರ ಯುದ್ಧ ದಲ್ಲಿ ರಾವಣನ ಸೈನ್ಯ, ವೈಭವ, ಸಂಪೂರ್ಣ ನಾಶವಾಯಿತು. ಶೂರ್ಪಿಣಿಕಿ ಅವಳ ಮಲತಾಯಿ ಮಗಳು ‘ಕುಂಬಿನಿ’ ಜೊತೆ ಸಮುದ್ರದೊಳಗೆ ಹೋದಳು ಎಂದು ಹೇಳುತ್ತಾರೆ. ರಾಮ ರಾವಣರ ಯುದ್ಧಕ್ಕೆ ಶೂರ್ಪಿಣಿಕೆ ಸಹ ಮುಖ್ಯ ಕಾರಣವಾದಳು.
ಬರಹ: ಆಶಾ ನಾಗಭೂಷಣ, ಸಂಗ್ರಹ ವರದಿ; ಗಣೇಶ್ ಎಸ್. ದೊಡ್ಡಬಳ್ಳಾಪುರ..
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….