ಅನುಭವ ಮಂಟಪ ದೊಡ್ಡ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿತ್ತು. ಬಸವಣ್ಣನವರು ಒಗ್ಗೂಡಿಸುವ ಶಕ್ತಿಯಾದರೆ, ಅಲ್ಲಮಪ್ರಭು ಆಧ್ಯಾತ್ಮಿಕ ಕೇಂದ್ರದ ಶಿಖರದಂತೆ ಗುರುವಾಗಿದ್ದರು. ಶಿವಶರಣರು, ಶಿವಶರಣೆಯರಿಂದ ಅನುಭವ ಮಂಟಪ ಕಂಗೊಳಿಸುತ್ತಿತ್ತು. ಅಲ್ಲಮಪ್ರಭು ಅವರು, ಅಲ್ಲಿಗೆ ಬಂದಂತಹ ಶಿವಶರಣರ ಪರೀಕ್ಷೆಯನ್ನು ಮಾಡುತ್ತಿದ್ದರು.
ಕೌಶಿಕನ ಅರಮನೆಯಿಂದ ಅಕ್ಕಮಹಾದೇವಿ ಕಲ್ಯಾಣದತ್ತ ಬರುತ್ತಿದ್ದಾಳೆ. ಆಗಲೇ ಈ ವಿಚಾರ ಅಲ್ಲಮಪ್ರಭು, ಬಸವಣ್ಣನವರಿಗೆ ತಿಳಿದಿದ್ದು, ಊರ ಹೊರವಲಯದಿಂದಲೇ ಅಕ್ಕನ ಪರೀಕ್ಷೆ ಪ್ರಾರಂಭವಾಗಿತ್ತು. ಆರಂಭದ ಪರೀಕ್ಷೆ ಗಳನ್ನೆಲ್ಲಾ ಜಯಿಸಿ ಅನುಭವ ಮಂಟಪದ ಒಳಗೆ ಬಂದಳು. ಅಲ್ಲಮಪ್ರಭು ಈ ರೀತಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು:
ಅಲ್ಲಮ: ನೀನು ಯೌವನದಲ್ಲಿರುವ ಸ್ತ್ರೀ, ನೀನು ಇಲ್ಲಿಗೇಕೆ ಬಂದಿ? ಇಲ್ಲಿ ವೃದ್ಧರು, ಶಿವಶರಣರು ಇರುವರು. ಸ್ತ್ರೀ ಎಂದರೆ ಶರಣರು ಮುನಿವರು. ನಿನ್ನ ಪತಿ ಯಾರೆಂದು ತಿಳಿಸಿದ ಮೇಲೆ ಬಂದು ಕೂರಬಹುದು, ಇಲ್ಲದಿರೆ ಹೋಗಬಹುದು.
ಅಕ್ಕ: ಇದಕ್ಕುತ್ತರವಾಗಿ, ನಿಸರ್ಗದ ಮದುವೆ ಮನೆಯ ಮಂಟಪದಲ್ಲಿ ಚನ್ನಮಲ್ಲಿಕಾರ್ಜುನನೆಂಬ ಗಂಡನೊಂದಿಗೆ ನಮ್ಮವರು ನನ್ನ ಮದುವೆ ಮಾಡಿದರು. ಚೆನ್ನಮಲ್ಲಿಕಾರ್ಜುನ ನನ್ನ ಪತಿ ಎಂದಳು.
ಅಲ್ಲಮಪ್ರಭುಗೆ ಅವಳ ಹಿನ್ನೆಲೆ ತಿಳಿದಿತ್ತು. ಆದರೂ ಬಂಗಾರವನ್ನು ಒರೆಗೆ ಹಚ್ಚುವಂತೆ,ಜಗತ್ತಿಗೆ ಅವಳನ್ನು ಪರಿಚಯಿಸುವ ಸಲುವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ.
ಅಲ್ಲಮ: ನೀನು ಇನ್ನೊಬ್ಬರ ಮೇಲೆ ತಪ್ಪು ಹೊರಿಸಿ ಹೊರಟು ಬಂದಿರುವೆಯಾ? ದೇಹದ ಮೇಲಿನ ಸೀರೆ ತೆಗೆದು ದಿಗಂಬರಳಾಗಿ ನಿನ್ನ ಕೇಶದಿಂದ ಅಂಗವನ್ನು ಮರೆಮಾಡಿಕೊಂಡು ಬಂದೆಯಲ್ಲಾ, ನಿನ್ನ ಮನಸ್ಸಿನ ಭ್ರಾಂತಿ ಹರಿದಿಲ್ಲ.
ಅಕ್ಕ: ದೇಹ ಹೊಳೆದರೇನು, ಅಥವಾ ಕಪ್ಪಾಗಿದ್ದರೇನು, ಅಂತರಂಗ ಶುದ್ದಿಯಾಗಿ ಚೆನ್ನಮಲ್ಲಿಕಾರ್ಜುನನ ಒಲಿದ ಮೇಲೆ ಈ ದೇಹ ಹೇಗಿದ್ದರೇನು?
ಅಲ್ಲಮ: ದೇವನೊಲಿದ ನೀನೊಲಿದೆ ಎಂದು ಯಾವುದಕ್ಕೆ ಹೇಳುತ್ತಿ ಭಾವಶುದ್ದಿ ಇದೆ ಅಂದಮೇಲೆ ಸೀರೆಯನ್ನು ಕಳೆದು ಕೂದಲಿನ ಮರೆಯಾಕೇ ಮಾಡಿದೆ. ಸೀರೆ ಬಿಟ್ಟೆ ಎಂಬ ಅಹಂಕಾರ ನಿನ್ನೊಳಗೆ ಇದ್ದು, ಒಳಗೆ ನಾಚಿಕೆ ಇದೆ ಹೊರಗೆ ದಿಗಂಬರಳು ಎಂದು ತೋರಿಸಿ ಕೊಳ್ಳುತ್ತಿ. ಇವೆಲ್ಲ ತೋರುಗಾಣಿಕೆ. ಇದು ನಮ್ಮ ಗುಹೇಶ್ವರ ಲಿಂಗಕ್ಕೆ ಶೋಭೆಯಲ್ಲ.
ಅಕ್ಕ: ದೇಹ ಸುಕ್ಕಾಗದೆ ಬೆನ್ನು ಬಾಗದು, ಹಾಗೆ ಹಣ್ಣು ಮಾಗದೆ ಹೊರಗಿನ ಸಿಪ್ಪೆ ಕಪ್ಪಾಗದು. ನನ್ನ ಅಂತರಂಗ ಶುದ್ಧಿಯಾಗಿದೆ. ಕಾಮದ ಮುದ್ರೆಗಳನ್ನು ನೋಡಿ ನಿಮಗೆ ಮುಜಗರ ಆಗಬಾರದೆಂದು ಕೇಶ ಮುಚ್ಚಿ ಬಂದೆ ,ನಾನು ಪರಿ ಪಕ್ವವಾಗಿ ಬಂದಿದ್ದೇನೆ ಮೇಲಿನ ಸಿಪ್ಪೆಯನ್ನು ನೋಡಬೇಡಿ ದೇಹದ ಭಾವ ಮುಚ್ಚಿದೆ ಇದಕ್ಕೆ ಅನುಮಾನವೇಕೇ ಇನ್ನು ಪರೀಕ್ಷಿಸಬೇಡಿ ನಾನು ಶಿವಶರಣರ ದರುಶನ ,ಪ್ರಸಾದ, ಧ್ಯಾನ ಮಾಡಿ ತನುಮನ ಕಂಗಳನ್ನು ಪಾವನವಾಗಿಸಿ ಪವಿತ್ರಳಾಗಿ ಬಂದಿದ್ದೇನೆ.
ಅಲ್ಲಮ: ಚನ್ನಮಲ್ಲಿಕಾರ್ಜುನನ್ನು ನಿನ್ನ ಗಂಡನನ್ನಾಗಿ ಮಾಡಿಕೊಂಡೆ ಎಂದೆಯಲ್ಲ, ಅವನು ದೃಷ್ಟಿ ಗಾಗಲಿ, ಆಕಾರಕ್ಕಾಗಲೀ, ಗಮನಕ್ಕಾಗಲಿ ಸಿಗುವುದಿಲ್ಲ. ಗುಹೇಶ್ವರ ಲಿಂಗವನ್ನು ಕೂಡಿಕೊಂಡಿರುವೆ ಎಂದು ಅಸಾಧ್ಯವನ್ನು ಸಾಧಿಸಿದೆ ಎನ್ನುವುದು ಸರಿಯೇ?
ಅಕ್ಕ: ಚನ್ನಮಲ್ಲಿಕಾರ್ಜುನ ನನ್ನ ಗಂಡ ಎಂದರೆ ಹಾಗೆ ಆಗಲೇಬೇಕೆಂದೇನಿಲ್ಲ. ಮನಸ್ಸಿನಿಂದ ನಾನು ಅವನನ್ನು ಒಪ್ಪಿದ್ದೇನೆ. ಗಟ್ಟಿ ತುಪ್ಪ ತಿಳಿ ತುಪ್ಪಕ್ಕೆ ಭೇದ ಉಂಟೆ? ದೀಪ, ಬೆಳಕು ಬೇರೆ ಬೇರೆಯೇ? ಹಾಗೆಯೇ ನಾನು ಮತ್ತು ಚೆನ್ನಮಲ್ಲಿಕಾರ್ಜುನ. ನನ್ನ ಮನಸ್ಸಿನಿಂದ ಅವನು ನನ್ನವನಾದರೆ, ಅವನು ನನ್ನವನು.ಆಕಾರ-ನಿರಾಕಾರಕ್ಕೆ ಭೇದವಿಲ್ಲ. ನಾವು ವಿಗ್ರಹ ನೋಡಿ ದೇವರ ಮುಂದೆ ಕೈಮುಗಿದು ಕಣ್ಣು ಮುಚ್ಚಿ ಆಕಾರದ ಮೂಲಕ ನಿರಾಕಾರ ಭಗವಂತನನ್ನು ಬೇಡುತ್ತೇವೆ. ಹೀಗೆ ನಾನು ಚೆನ್ನಮಲ್ಲಿಕಾರ್ಜುನ ನೊಂದಿಗೆ ಬೆರೆತುಹೋಗಿದ್ದೇನೆ .
ಅಲ್ಲಮ: ಭಗವಂತನೊಂದಿಗೆ ಸೇರಿ ಬಿಟ್ಟಿದ್ದೇನೆ ಎನ್ನುವೆಯಲ್ಲ, ನಾನು ಸತ್ತೇ ಎಂದು ಹೆಣ ಕೂಗುವುದೇ? ಮುಚ್ಚಿಟ್ಟ ಬಯಕೆಗಳು ಕರೆಯುತ್ತದೆಯೇ? ಹೆಪ್ಪು ಹಾಕಿದ ಹಾಲು ಸಿಹಿ ಇರುವುದೇ? ಈ ಮಾತುಗಳನ್ನು ಒಪ್ಪ ಬಹುದೇ?
ಅಕ್ಕ: ನಾನು ಸತ್ತೇ ಎಂದು ಹೆಣ ಕೂಗಿದ್ದುಂಟು. ರಾತ್ರಿ ಸತ್ತಂತೆ ಮಲಗಿದ್ದಾಗ ಕನಸು ಕಂಡು ಬೆಳಿಗ್ಗೆ ಬದುಕಿದಂತೆ ಎದ್ದು ರಾತ್ರಿ ಕಂಡ ಕನಸನ್ನು ಹೇಳುವುದಿಲ್ಲವೇ?ಬೈಚಿಟ್ಟ ಬಯಕೆ ಕರೆಯುತ್ತದೆ, ಕರ್ಮದ ಋಣ ಬಿಡದೆ ಕರೆಯುತ್ತದೆ. ಹೆಪ್ಪಿಟ್ಟ ಹಾಲು ಮೊಸರಾಗಿ ಮೊಸರು ಕಡೆದರೆ ಬೆಣ್ಣೆಯಾಗಿ ಬೆಣ್ಣೆಯನ್ನು ಕಾಸಿದರೆ ಸಿಹಿ ತುಪ್ಪ ವಾಗುವುದು. ಇದು ತಪ್ಪು ಎಂದು ಏಕೆ ಸಾಧಿಸುವಿರಿ ಎಂದು ಕೇಳಿದಾಗ ಅಲ್ಲಮಪ್ರಭುವಿನ ಮನಸ್ಸು ಕರಗಿ ಹೋಯಿತು.
ಅಲ್ಲಮ: ನಿರಹಂಕಾರದ ಆಕಾರ ಸ್ತ್ರೀ ರೂಪದಲ್ಲಿದೆ, ಮನಸ್ಸು ಭಾವ ಎಲ್ಲವನ್ನು ದಾಟಿದೆ ನೀನು ಲಿಂಗದೊಳಗೆ ನೀನೇ ಲಿಂಗವಾಗಿದಿ, ಕಿರಿಯರಾದರೇನು, ಹಿರಿಯರಾದರೇನು, ಅರಿವಿಗೆ ಹಿರಿಕಿರಿಯರು ಎಂಬ ಭೇದವಿಲ್ಲ ಇಂದಿನಿಂದ ಮಹಾದೇವಿ ನಮಗೆಲ್ಲರಿಗೂ ಅಕ್ಕ ಅಕ್ಕಮಹಾದೇವಿ ಎಂದು ಘೋಷಿಸಲಾಯಿತು. ಅಂದಿನಿಂದ ಶಿವಶರಣೆ ಮಹಾದೇವಿ ಅಕ್ಕ ಆದರು.
ಬರಹ ಕೃಪೆ: ಆಶಾ ನಾಗಭೂಷಣ. ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….