ಬೆಂಗಳೂರು, (ಆಗಸ್ಟ್.04): ವೌಲ್ಯ ಮತ್ತು ಮನರಂಜನೆಯಿಂದ ಕೂಡಿರುವ ಕ್ಷೇತ್ರ, ಸುಗಮ ಸಂಗೀತವಾಗಿದೆ. ಇಂತಹ ಕ್ಷೇತ್ರ ಇನ್ನಷ್ಟು ವಿಸ್ತಾರವಾಗಬೇಕು ಎಂದು ಸುಗಮ ಸಂಗೀತ ಗಾಯಕಿ, ಸಂಗೀತ ನಿರ್ದೇಶಕಿ ಕಲಾಶ್ರೀ ಜಯಶ್ರೀ ಅರವಿಂದ್ ಆಶಿಸಿದರು.
ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಹಾಗೂ ಅನುರಾಗ್ಸ್ ಸಂಗೀತ ಗುರುಕುಲ ಸಂಸ್ಥೆ ಸಹಭಾಗಿತ್ವ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ (ಆ.3) ಆಯೋಜಿಸಿದ್ದ ಭಾವಾಭಿಯಾನ ಪ್ರಸಿದ್ಧ ಮತ್ತು ನೂತನ ಭಾವಗೀತೆಗಳ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಮಾತನಾಡಿ, ರೋಚಕ ಸಂಗತಿಗಳಿಗೆ ಸಿಗುತ್ತಿರುವ ಪ್ರಚಾರ ಒಂದು ರಚನಾತ್ಮಕ ಸಂಗತಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಜನತೆ ತಮ್ಮ ಮತ್ತು ಸಮಾಜದ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾವ್ಯ, ಸಂಗೀತ ಮತ್ತು ವೌಲ್ಯದಿಂದ ಕೂಡಿರುವ ಸುಗಮ ಸಂಗೀತವನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಒಕ್ಕೂಟದ ಗೌರವ ಅಧ್ಯಕ್ಷ ಆನಂದ್ ಮಾದಲಗೆರೆ ಮಾತನಾಡಿ, ಸುಗಮ ಸಂಗೀತ ಕ್ಷೇತ್ರಕ್ಕೆ ಒಕ್ಕೂಟವು ಹೊಸ ನೀರನ್ನು ಹಾಯಿಸುವ ನಿಟ್ಟಿನಲ್ಲಿ ವಿಶೇಷವಾಗಿ ಹೊಸ ಕವಿಗಳಿಗೆ ಆದ್ಯತೆ ನೀಡುತ್ತ ಬಂದಿದೆ ಎಂದರು.
ಇದೇ ವೇಳೆ ಹಲ್ಲೇಗೆರೆ ಶಂಕರ್ ಅವರ ‘ಹಲ್ಲೇಗೆರೆಯ ತತ್ವಗಳು; ಭಾಗ-3 ಎಂಬ ಕೃತಿ ಲೋಕಾರ್ಪಣೆಗೊಳಿಸಲಾಯಿತು. ಅನುರಾಗ್ಸ್ ಸಂಗೀತ ಗುರುಕುಲದ ವಿದ್ಯಾರ್ಥಿಗಳು ಸಮೂಹ ಗಾಯನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಎನ್.ಎಸ್. ಲಕ್ಷ್ಮೀನಾರಾಯಣಭಟ್, ಪ್ರೊ. ಬರಗರು ರಾಮಚಂದ್ರಪ್ಪಘಿ, ಡಾ. ಜಯಶ್ರೀ ಅರವಿಂದ್, ಶಿಶುನಾಳ ಶರ್ೀ, ಚಿಂತಾಮಣಿ ಕೊಡ್ಲೆಕೆರೆ, ತುಳಸೀತನಯ, ಹಲ್ಲೇಗೆರೆ ಶಂಕರ್, ಜಿ. ನಾರಾಯಣರಾವ್, ರೇಖಾ ಗಣೇಶ್ ಭಾರದ್ವಾಜ್, ನಾದಲೀಲೆ ನಾಗರಾಜ್, ಎಸ್.ಡಿ. ಆನಂದ್ ಕುಮಾರ್ ಅವರ ಹಳೆಯ ಪ್ರಸಿದ್ಧ ಹಾಗೂ ಹೊಸ ಗೀತೆಗಳನ್ನು ಗಾಯಕರು ಪ್ರಸ್ತುತಪಡಿಸಿದರು.
ವಾದ್ಯ ಸಹಕಾರ ಕೀಬೋರ್ಡ್ನಲ್ಲಿ ಪುಣ್ಯೇಶ್ ಕುಮಾರ್, ತಬಲಾದಲ್ಲಿ ಶರಣ್ ಕುಮಾರ್ ಹೂಗಾರ್, ರಿದಂಪ್ಯಾಡ್ನಲ್ಲಿ ಪವನಕುಮಾರ್ ಸಾಥ್ ನೀಡಿದರು. ಗಾಯಕರಾದ ಇಂಚರ ಪ್ರವೀಣ್ ಕುಮಾರ್, ಆನಂದ ಮಾಸಲಗೆರೆ, ವೆಂಕಟೇಶ್ ಮೂರ್ತಿ ಶಿರೂರ್, ಅನುರಾಗ ಗದ್ದಿ, ಡಾ. ಬಂಡ್ಲಳ್ಳಿ ವಿಜಯಕುಮಾರ್, ವಿಜಯ ಹವಾನೂರು, ರಾಜಶೇಖರ್ ನೂಲಿ, ಕೆ. ಶಿಲ್ಪಶ್ರೀ, ಪ್ರಶಾಂತ್ ಬೂದಿಹಾಳು, ರಂಜಿತಾ ಶೃಂಗೇರಿ ಸುಶ್ರವ್ಯವಾಗಿ ಗಾಯನ ಮಾಡಿ ಸಭಿಕರನ್ನು ರಂಜಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….