ಕಾರಟಗಿ, (ಆಗಸ್ಟ್.04): ಹೃದಯಾಘಾತದಿಂದ ಮೃತಪಟ್ಟಿದ್ದ ಪಿಎಸ್ಐ ಪರಶುರಾಮ ಮೃತದೇಹದ ಅಂತ್ಯ ಸಂಸ್ಕಾರ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು.
ಪೊಲೀಸ್ ಇಲಾಖೆಯ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪಿಎಸ್ಐ ಪರಶುರಾಮ್ ಇವರ ಅಂತಿಮದರ್ಶನ ಪಡೆದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಬಳ್ಳಾರಿ ಐಜಿ ಬಿ.ಜಿ.ಲೋಕೇಶ ಕುಮಾರ್, ಎಸ್ಪಿ ಡಾ. ರಾಮ್ ಅರಸಿದ್ದ, ಮಾಜಿ ಶಾಸಕ ಬಸವರಾಜ ದಡೇಸೂರು ಇವರು ಮೃತಗೌರವಾರ್ಥ ಗೌರವ ವಂದನೆಗಳನ್ನು ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಮೃತರಿಗೆ ಗೌರವವಂದನೆ ಸಲ್ಲಿಸಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಶನಿವಾರ ಸಂಜೆ 6ಗಂಟೆಗೆ ಸ್ವಗ್ರಾಮ ಸೋಮನಾಳ ಗ್ರಾಮಕ್ಕೆ ಪರಶುರಾಮ ಪಾರ್ಥಿವ ಶರೀರ ಆಗಮಿಸಿತು. ಮೃತನ ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಸಂಜೆ 6 ಗಂಟೆ ಸರಿಯಾಗಿ ಮೃತ ದೇಹ ಗ್ರಾಮಕ್ಕೆ ಆಗಮಿಸಿ ಮೊದಲಿಗೆ ನೇರವಾಗಿ ಅವರ ಸ್ವಗೃಹಕ್ಕೆ ತೆಗೆದುಕೊಂಡು ಹೋಗಲಾಯಿತು. ಸ್ವಗ್ರಾಮ ತಲುಪುತ್ತಿದ್ದಂತೆ ಕುಟಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
MLA ವಿರುದ್ಧ ದೂರು: ಪಿಎಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಸಂಬಂಧ ಯಾದಗಿರಿ ಕೇತ್ರದ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ವಿರುದ್ಧ ಪ್ರಕರಣ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ್ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾದ ದಿನವೇ ಮೃತಪಟ್ಟಿದ್ದರು.
‘ಪತಿಯ ಪರಶುರಾಮ್ ಅವರ ಸಾವಿಗೆ ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಪಂಪನ ಗೌಡ ಕಾರಣ. ವರ್ಗಾವಣೆ ಮತ್ತು ಸ್ಥಳ ನಿಯೋಜನೆಗಾಗಿ ಸ್ಥಳೀಯ ಶಾಸಕ ಮತ್ತು ಅವರ ಪುತ್ರ ಹಣದ ಬೇಡಿಕೆ ಇಟ್ಟಿದ್ದರು. ಇದರಿಂದ ಒತ್ತಡ ಹಾಗೂ ಮಾನಸಿಕ ಖಿನ್ನತೆಗೆ ಒಳಗಾದ ತಮ ಪತಿ ಮೃತಪಟ್ಟಿದ್ದಾರೆ ಎಂದು ಎಂಟು ತಿಂಗಳ ಗರ್ಭಿಣಿಯಾಗಿರುವ ಪತ್ನಿ ಶ್ವೇತ ಆರೋಪಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….