ಹೊಸಕೋಟೆ: ಮುಂದಿನ ವರ್ಷದ ವಾಲ್ಮೀಕಿ ಜಯಂತಿ ವೇಳೆಗೆ ವಾಲ್ಮೀಕಿ ಭವನ ಲೋಕಾರ್ಪಣೆಗೊಳಿಸಿ ಅಲ್ಲೇ ವಾಲ್ಮೀಕಿ ಜಯಂತಿ ಆಚರಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೂವರೆ ಕೋಟಿ ವೆಚ್ಚದಲ್ಲಿ ನಗರದಲ್ಲಿ ವಾಲ್ಮೀಕಿ ಭವನ ನಿರ್ಮಿಸುತ್ತಿದ್ದು, ಹೆಚ್ಚುವರಿ ಅನುದಾನದ ಅವಶ್ಯಕತೆ ಬಂದರೆ ಒದಗಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಸೋಮಶೇಖರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದು ಮನುಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಮಾಯಣ ಸರ್ವ ಧರ್ಮಕ್ಕೂ ಸಲ್ಲುವಂತದ್ದು, ವಾಲ್ಮೀಕಿ ಜಯಂತಿ ಕೇವಲ ವಾಲ್ಮೀಕಿ ಸಮುದಾಯ ಅಷ್ಟೇ ಅಲ್ಲದೆ ಎಲ್ಲಾ ಸಮುದಾಯದವರು ಆಚರಿಸಬೇಕು.
ವಾಲ್ಮೀಕಿ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಬಿವಿ ಬೈರೇಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪೂಜೆನ ಅಗ್ರಹಾರ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ, ತಾಪಂ ಇಒ ನಾರಾಯಣಸ್ವಾಮಿ, ತಾಲೂಕು ಸಮಾಜಕಲ್ಯಾಣಾಧಿಕಾರಿ ಸಿದ್ದರಾಜು, ಬಿಇಒ ಪದ್ಮನಾಭ್, ನಗರಸಭೆ ಪೌರಾಯುಕ್ತ ಜಹೀರ್ ಅಬ್ಬಾಸ್ ಇತರರು ಹಾಜರಿದ್ದರು.