ಬೆಂಗಳೂರು: ಮಹಾರಾಷ್ಟ್ರ ಹಾಗೂ ಇತರೆ ವಿಧಾನಸಭೆ ಚುನಾವಣೆಗಳ ಬಗ್ಗೆ ಕೇಂದ್ರ ಸಚಿವರು ಎಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂಬುದರ ಬಗ್ಗೆ ತಮಗೂ ಮಾಹಿತಿ ಇದೆ. ಆದರೆ ಆಧಾರರಹಿತವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಚುನಾವಣಾ ವೆಚ್ಚಕ್ಕಾಗಿ ಖರ್ಚು ಮಾಡಲು ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ರಾಜಕೀಯಕ್ಕಾಗಿ ಮಾಡಿರುವ ಸುಳ್ಳು ಆರೋಪ ಎಂದು ಹೇಳಿದರು. ಪ್ರ
ಧಾನಮಂತ್ರಿ ನರೇಂದ್ರಮೋದಿಯವರ ಆರೋಪ ಸಾಬೀತುಪಡಿಸಿದರೆ ನಾವು ಯಾವುದೇ ಶಿಕ್ಷೆಗಾದರೂ ಸಿದ್ಧ. ಆಧಾರ ಇಲ್ಲದೇ ಅಷ್ಟು ದೊಡ್ಡ ಹುದ್ದೆಯಲ್ಲಿರುವವರು ಮಾತನಾಡುವುದು ಸರಿಯಲ್ಲ. ಯಾವ್ಯಾವ ಕೇಂದ್ರ ಸಚಿವರು ಎಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಆಧಾರ ಇಲ್ಲದೆ ಮಾತನಾಡುವುದು ಸರಿಯಲ್ಲ ಎಂದರು.
ಮಹಾರಾಷ್ಟ್ರದ ನಾಯಕರು ಚುನಾವಣೆಗೆ ಸಂಬಂಧಪಟ್ಟಂತೆ – ನಮ್ಮ ಜೊತೆ ಮಾತನಾಡಿಯೇ ಇಲ್ಲ. ಅನಗತ್ಯವಾಗಿ ಇಂತಹ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಕರ್ನಾಟಕದ ಪಂಚಖಾತ್ರಿ ಯೋಜನೆಗಳನ್ನು. ಸರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂದು ಮತ್ತೊಂದು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾವು 30 ಬಸ್ಗಳನ್ನು ಇಲ್ಲಿಂದಲೇ ವ್ಯವಸ್ಥೆ ಮಾಡುತ್ತಿದ್ದೇವೆ. ಕೇಂದ್ರದ ಬಿಜೆಪಿ ನಾಯಕರು, ಮಹಾರಾಷ್ಟ್ರದ ಬಿಜೆಪಿ, ಶಿವಸೇನೆ, ಎನ್ಸಿಪಿಯ ನಾಯಕರು ಇಲ್ಲಿಗೆ ಬಂದು ಅಧ್ಯಯನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಮಹಾರಾಷ್ಟ್ರದ ನಾಯಕರಿಗೆ ವಿಶೇಷ ವಿಮಾನ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಯ ಮಾಹಿತಿ ಪಡೆಯಲು ಆಹ್ವಾನಿಸುತ್ತಿದ್ದೇನೆ. ನಮ್ಮ ಗ್ಯಾರಂಟಿ ಸಮಿತಿಗಳ – ಅಧ್ಯಕ್ಷರ ದೂರವಾಣಿ ಸಂಖ್ಯೆಗಳನ್ನು ನೀಡುತ್ತಿದ್ದೇನೆ ಎಂದರು.
ಮಹಾರಾಷ್ಟ್ರದ ನಾಯಕರು ಕರ್ನಾಟಕಕ್ಕೆ ಬಂದು ಮನೆಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳು ಹೇಗೆ ತಲುಪಿವೆ, ಎಷ್ಟು ಪರಿಣಾಮ ಬೀರಿವೆ ಎಂಬುದನ್ನು ಅಧ್ಯಯನ ನಡೆಸಲು ಕಾಂಗ್ರೆಸ್ ಪಕ್ಷದ ವತಿಯಿಂದಲೇ ವೆಚ್ಚ ಭರಿಸಲು ಸಿದ್ಧರಿರುವುದಾಗಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಎಷ್ಟೇ ಅಪಪ್ರಚಾರ ನಡೆಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಈ ಮೊದಲು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿಯ ಸುಳ್ಳು ಹೇಳಿಕೆಗಳನ್ನು ಮೋದಿ ನೀಡಿದರು. ಜನ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂಬ ಕಾರಣಕ್ಕೆ ಹತಾಶರಾಗಿ ಪ್ರಧಾನಿ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಮೈಸೂರಿನಲ್ಲಿ ಸಚಿವರ ವಿರುದ್ಧ ಗಲಾಟೆ ಮಾಡಲಾಗಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಸಚಿವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುವ ವ್ಯಕ್ತಿಗಳನ್ನೇ ಹಿಡಿದುಕೊಂಡು ಕಪಾಳಕ್ಕೆ ಹೊಡೆಯಲಾಗಿದೆ. ಆ ವ್ಯಕ್ತಿ ಮೋಸ ಮಾಡಿದ್ದರು ಎಂಬ ಕಾರಣಕ್ಕಾಗಿ ಕಪಾಳಮೋಕ್ಷವಾಗಿದೆ ಎಂದು ನನಗೆ ಯಾರೋ ಬಂದು ಮಾಹಿತಿ ನೀಡಿದರು. ಆದರೆ ಅದನ್ನು ನಾನು ನಂಬಿ ಹೇಳಿಕೆ ನೀಡುವುದಿಲ್ಲ ಎಂದರು.
ಯಾವ ಸಚಿವರಿಗೂ ಈ ರೀತಿ ಹಲ್ಲೆಯಾಗಿಲ್ಲ. ಕೇವಲ ಹಿಟ್ ಅಂಡ್ ರನ್ ಆರೋಪಗಳನ್ನು ಮಾಡುತ್ತಾ ಕಾಲ ಕಳೆಯಲಾಗುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.