ರಾಂಚಿ: ಬಡವರನ್ನು ಲೂಟಿ ಮಾಡಲೆಂದೇ ಬಿಜೆಪಿ ಸರಕಾರ ಹೊಸ ತೆರಿಗೆ ವ್ಯವಸ್ಥೆ ರಚನೆ ಮಾಡಿದೆ ಎಂದು ಲೋಕಸಭೆಯಲ್ಲಿನ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಜಾರ್ಖಂಡ್’ ಧನ್ ಬಾದ್ನಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಸದ್ಯದ ಭಾರ ತೀಯ ತೆರಿಗೆ ವ್ಯವಸ್ಥೆಯು ಬಡವರನ್ನು ಲೂಟಿ ಮಾಡುವುದಾಗಿದೆ.
ನೀವು ತೆರಿಗೆ ಪಾವತಿಸುವಷ್ಟೇ ಅದಾನಿಯೂ ಪಾವತಿಸುತ್ತಾರೆ. ಅಲ್ಲದೇ ಮೋದಿ ಸರಕಾರ 1 ಲಕ್ಷ ಕೋಟಿ ರೂ. ಬೆಲೆಬಾಳುವ ಧಾರಾವಿ ಭೂಮಿಯನ್ನು ಅದಾನಿಗೆ ನೀಡಲು ಹೊರಟಿದೆ. ಬದಲಾಗಿ ಬೆಲೆ ಏರಿಕೆಯ ಭಾರವನ್ನು ಬಡವರು ಮತ್ತು ಮಹಿಳೆಯರು ಅನುಭವಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಸೀಪ್ಲೇನ್ನಲ್ಲಿ ಪ್ರಯಾಣಿಸುತ್ತಾರೆ. ಸಮುದ್ರದೊಳಗೂ ಹೋಗುತ್ತಾರೆ. ಕೈಗಾರಿಕೋದ್ಯಮಿಗಳ ಕುಟುಂಬ ಸದಸ್ಯರ ಮದುವೆಗಳಿಗೂ ಹೋಗುತ್ತಾರೆ. ಆದರೆ ಬಡವರ ಬಳಿಗೆ ಮಾತ್ರ ಹೋಗುವುದಿಲ್ಲ. ಮೋದಿ ಕೇವಲ ದೊಡ್ಡ ಭಾಷಣ ಮಾಡುತ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ನಾವು ನಿಮ್ಮನ್ನು ಆದಿವಾಸಿಗಳು ಎಂದು ಕರೆಯುತ್ತೇವೆ, ಆದರೆ ಬಿಜೆಪಿಯು ನಿಮ್ಮನ್ನು ಅರಣ್ಯವಾಸಿಗಳು ಎಂದು ಕರೆಯುತ್ತದೆ. ಬುಡಕಟ್ಟು ಎಂದರೆ ದೇಶದ ಮೊದಲ ಮಾಲೀಕ, ಆದರೆ ವನವಾಸಿ ಎಂದರೆ ನಿಮಗೆ ಯಾವುದೇ ಹಕ್ಕುಗಳಿಲ್ಲ. ಅವರು ನಿಧಾನವಾಗಿ ನಿಮ್ಮ ಕಾಡುಗಳನ್ನು ನಿಮ್ಮಿಂದ ಕಸಿಯುತ್ತಿದ್ದಾರೆ.
ನೀರು, ಅರಣ್ಯ, ಭೂಮಿ ಹಕ್ಕನ್ನು ನೀವು ಹೊಂದಬೇಕೆಂದು ನಾವು ಬಯಸುತ್ತೇವೆ, ಅದರ ಲಾಭವನ್ನು ನೀವು ಪಡೆಯಬೇಕು ಎಂದು ರಾಹುಲ್ ಹೇಳಿದರು.