ದೊಡ್ಡಬಳ್ಳಾಪುರ (Doddaballapura): ಕಾರ್ಪೆಂಟರ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕರು ರೈಲಿಗೆ ಸಿಲುಕಿ ಸಾವನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಸಿದ್ದೇನಾಯಕನಹಳ್ಳಿ ಬಳಿ ಸಂಭವಿಸಿದೆ.
ಮೃತರನ್ನು ಉತ್ತರಭಾರತ ಮೂಲದವರೆನ್ನಲಾಗುತ್ತಿರುವ ರಾಹುಲ್, ಲಲ್ಲನ್, ಬಿನಿತ್ ಎಂದು ಗೆಳೆಯರು ರೈಲ್ವೇ ಪೊಲೀಸರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮುತ್ತೂರಿನಲ್ಲಿ ವಾಸವಿದ್ದ ಮೃತ ಮೂವರು ಯುವಕರು, ಕಾರ್ಪೆಂಟರ್ ಕೆಲಸ ಮಾಡುವವರಾಗಿದ್ದು, ಇಂದು ಕೊನಘಟ್ಟದಲ್ಲಿ ಕೆಲಸ ಮುಗಿಸಿ, ಮರಳಿ ಮನೆಗೆ ತೆರಳುವ ವೇಳೆ ಕೊನಘಟ್ಟದಿಂದ ಆಟೋದಲ್ಲಿ ಬಂದು ಹುತಾತ್ಮ ಪಿಎಸ್ಐ ಜಗದೀಶ್ ವೃತ್ತದ ಗೇಟ್ ಬಳಿ ಇಳಿದಿದ್ದಾರೆ ಎನ್ನಲಾಗಿದೆ.
ಬಳಿಕ ಟ್ರಾಕ್ ಮೇಲೆ ನಡೆದುಕೊಂಡು ಮುತ್ತೂರಿನ ಮನೆಗೆ ತೆರಳುವ ವೇಳೆ ಏಕಾಏಕಿ ಬಂದ ಪುಟ್ಟಪರ್ತಿ- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾಗಿದ್ದು, ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.