ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ಗುಂಡಮಗೆರೆ, ಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಹತ್ತಾರು ಟ್ಯಾಂಕರ್ಗಳ ಮೂಲಕ ರಾಸಾಯನಿಕ ಯುಕ್ತ ಕೈಗಾರಿಕಾ ತ್ಯಾಜ್ಯ ನೀರನ್ನು ಸುರಿಯಲಾಗಿರುವ ಕುರಿತಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು (FIR) ದಾಖಲಾಗಿದೆ.
ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬೆನ್ನಲ್ಲೇ ತಾಲೂಕಿನಾಧ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪರಿಸರಾಸ್ತಕರು ಈ ಘಟನೆಯನ್ನು ಖಂಡಿಸಿದ್ದಾರೆ.
ತೀವ್ರ ಆಕ್ರೋಶದ ಬೆನ್ನಲ್ಲೇ ತಹಶಿಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರಾಸಾಯನಿಕ ತ್ಯಾಜ್ಯದಿಂದ ಉಂಟಾಗುತ್ತಿರುವ ಹಾನಿ ತಡೆಗೆ ತ್ವರಿತವಾಗಿ ತ್ಯಾಜ್ಯ ತೆರವು ಮಾಡಿ, ವಿಲೆವಾರಿ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಲಾಯಿತು.

ಇದೇ ವೇಳೆ ಅಪರಾಧ ಚಟುವಟಿಕೆ ತಡೆಗೆ ಈ ವ್ಯಾಪ್ತಿಯಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ದುಷ್ಕರ್ಮಿಗಳ ಪತ್ತೆಗೆ ಕ್ರಮಕ್ಕೆ ನಿರ್ಧರಿಸಲಾಯಿತು.
ಇದರ ಅಂಗವಾಗಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ನೇತೃತ್ವದಲ್ಲಿ ಗಸ್ತು, ಕೃತ್ಯ ಮಾಡಿದವರ ಪತ್ತೆಗೆ ತಂಡವನ್ನು ಪೊಲೀಸರು ರಚಿಸಿದ್ದಾರೆಂದು ತಿಳಿದುಬಂದಿದೆ.

ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ಇಒ ಮುನಿರಾಜು, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಸೇರಿದಂತೆ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಹೊಸಹಳ್ಳಿ ಗ್ರಾಮಪಂಚಾಯಿತಿ ಪಿಡಿಒ, ಸ್ಥಳೀಯ ಮುಖಂಡ ನರಸಪ್ಪ ಮತ್ತಿತರರಿದ್ದರು.
ಹಿನ್ನಲೆ: ಅಪರಿಚಿತ ದುಷ್ಕರ್ಮಿಗಳು ಕೈಗಾರಿಕಾ ತ್ಯಾಜ್ಯ ನೀರನ್ನು ಹೊಸಹಳ್ಳಿ, ಗುಂಡಮಗೆರೆ ರಸ್ತೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಹರಿಬಿಟ್ಟಿರುವ ಕಾರಣ ಸುಮಾರು ಒಂದು ಕಿ.ಮೀ ದೂರದವರೆಗೂ ತ್ಯಾಜ್ಯ ನೀರಿನ ದುರ್ನಾತ ಬೀರುತ್ತಿದೆ.
ಈ ವ್ಯಾಪ್ತಿಯ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತ್ಯಾಜ್ಯ ನೀರು ಹರಿದು ಹೋಗಿರುವ ಕಾಲುವೆಗಳ ಅಕ್ಕಪಕ್ಕ ಸಣ್ಣಪುಟ್ಟ ಮರ, ಗಿಡ, ಹುಲ್ಲು ಬೆಂಕಿಯಿಂದ ಸುಟ್ಟಂತೆ ಒಣಗಿ ಹೋಗಿವೆ. ಈ ತ್ಯಾಜ್ಯ ನೀರು ಸುರಿದಿರುವ ಸಮೀಪವೇ ಗುಂಡಮಗೆರೆ ಕೆರೆಗೆ ನೀರು ಹರಿದು ಹೋಗುವ ಅರಣ್ಯ ಪ್ರದೇಶದಲ್ಲಿ ಬೃಹತ್ ಹಳ್ಳವು ಇದೆ. ಹಾಗಾಗಿ ಅಲ್ಪಸ್ವಲ್ಪ ಮಳೆ ಬಂದರು ಸಹ ತ್ಯಾಜ್ಯ ನೀರು ನೇರವಾಗಿ ಕೆರೆ ಸೇರುವ ಅಪಾಯ ಎದುರಾಗಿದೆ.
ತಾಲ್ಲೂಕಿನಲ್ಲೇ ಅತ್ಯಂತ ವಿಶಾಲವಾದ ಹಾಗೂ ಬೇಸಿಗೆ, ಮಳೆಗಾಲ ಎಲ್ಲಾ ಸಂದರ್ಭದಲ್ಲೂ ಈ ಕೆರೆಯಲ್ಲಿ ನೀರು ಇರುತ್ತವೆ. ಗುಂಡಮಗೆರೆ ಕರೆ ಸುತ್ತಲು ಮಾಕಳಿ ದುರ್ಗ, ಜಾಲಿಗೆ ಬೆಟ್ಟದ ಸಾಲು ಸೇರಿದಂತೆ ವಿಶಾಲವಾದ ಕುರುಚಲು ಅರಣ್ಯ ಪ್ರದೇಶವು ಇರುವುದರಿಂದ ಈ ಕೆರೆ ಹಾಗೂ ಕೆರೆಗೆ ನೀರು ಹರಿದು ಬರುವ ಬೃಹತ್ ಹಳ್ಳವನ್ನು ಹತ್ತಾರು ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗೆ ಅವಲಂಭಿಸಿವೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತ-ಮುತ್ತಲಿನ ಗ್ರಾಮಗಳ ಜನರು ಜಾಗೃತರಾಗಿರುವ ಹಾಗೂ ರಾತ್ರಿ ವೇಳೆ ಗ್ರಾಮದ ರೈತರು ಗಸ್ತುಗಳನ್ನು ನಡೆಸುವುದರಿಂದ ತ್ಯಾಜ್ಯ ನೀರು ವಿಲೇವಾರಿಗೆ ಕೈಗಾರಿಕೆ ಮಾಲೀಕರು ಗುಂಡಮಗೆರೆ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಪ್ರದೇಶದಲ್ಲಿ ಚಿರತೆ ಹಾಗೂ ಇತರೆ ಕಾಡು ಪ್ರಾಣಿಗಳ ಭಯದಿಂದ ರಾತ್ರಿ ವೇಳೆ ಜನ ಸಂಚಾರ ಅತ್ಯಂತ ವಿರಳ. ಹೀಗಾಗಿ ಟ್ಯಾಂಕರ್ಗಳ ಮೂಲಕ ತ್ಯಾಜ್ಯ ನೀರನ್ನು ತಂದು ರಾತ್ರಿ ವೇಳೆ ಸುಲಭವಾಗಿ ಸುರಿದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಅರಣ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ತಕ್ಷಣ ಎಚ್ಚೆತ್ತುಕೊಂಡು ತ್ಯಾಜ್ಯ ನೀರು ಸುರಿಯುತ್ತಿರುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.